Wednesday, October 4, 2023

Pitru Paksha for 15 Days only

 

Pitru Paksha for 15 Days Only – Reasons & Importance


ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ? ?

 


 

ಚಾಂದ್ರಮಾನ ಕಾಲ ಗಣನೆ ಪದ್ಧತಿಯಲ್ಲಿ ಒಂದು ತಿಂಗಳ ಎರಡು 15 ದಿನಗಳ ಅವಧಿಗಳನ್ನು ಪಕ್ಷ ಎಂದು ಕರೆಯುತ್ತಾರೆ. ಪೂರ್ಣಿಮೆಯಲ್ಲಿ ಕೊನೆಗೊಳ್ಳುವ ಅವಧಿಯು ಶುಕ್ಲ ಪಕ್ಷ ಎಂದೂ ಅಮಾವಾಸ್ಯೆಯಲ್ಲಿ ಕೊನೆಗೊಳ್ಳುವ ಅವಧಿಯು ಕೃಷ್ಣ ಪಕ್ಷ ಎಂದೂ ಕರೆಯಲ್ಪಡುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷಕ್ಕೆ ಪಿತೃ ಪಕ್ಷ ಎಂದು ಹೆಸರು ಮತ್ತು ಈ ಪಕ್ಷದ ಅಮಾವಾಸ್ಯೆಯು ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಟ್ಟು ಉಳಿದ ಅಮಾವಾಸ್ಯೆಗಳಿಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ.



ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ಮತ್ತು ಈ ಪಿತೃ ಪಕ್ಷಕ್ಕೆ ಏಕೆ ಇಷ್ಟು ಮಹತ್ವ ?

 

ಇದಕ್ಕೆ ಎರಡು ಕಾರಣಗಳಿವೆ: ಈ ಪಕ್ಷದಲ್ಲಿಆಚರಿಸುವ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಒಂದು ಮಹತ್ವವುಂಟು.

ಪಂಚ ಮಹಾಯಜ್ಞ ಎಂದರೇನು ?


ಮಹರ್ಷಿ ಸಂಸ್ಕೃತಿಯಲ್ಲಿ ಭಗವಂತನನ್ನು ಆರಾಧಿಸುವ ವಿಧಾನಗಳಲ್ಲಿ ನೇರವಾಗಿ ಭಗವಂತನನ್ನೇ ಆರಾಧಿಸುವುದು ಒಂದು ಬಗೆಯಾದರೆ, ಅವನ ಅನುಗ್ರಹ ನಮ್ಮವರೆವಿಗೆ ಹರಿದು ಬರುವ ದ್ವಾರಗಳನ್ನು ಆರಾಧಿಸಿ ತನ್ಮೂಲಕ ನಮ್ಮ ಆರಾಧನೆ ಭಗವಂತನಿಗೆ ತಲಪುವ ಹಾಗೆ ಮಾಡುವುದು ಮತ್ತೊಂದು ವಿಧಾನ. ಈ ಎರಡನೆಯ ವಿಧಾನದಲ್ಲಿ, ಮನುಷ್ಯನ ಪೋಷಣೆ, ರಕ್ಷಣೆಗಾಗಿ ಭಗವಂತನ ಅನುಗ್ರಹ ಹರಿದು ಬರುವ 5 ದ್ವಾರಗಳನ್ನು ಗೌರವಿಸುವುದು ಅಥವಾ ಪೂಜಿಸುವುದು ಪಂಚಮಹಾಯಜ್ಞಗಳೆನ್ನಿಸಿಕೊಳ್ಳುತ್ತದೆ.



ಒಬ್ಬ ಮನುಷ್ಯ ಹುಟ್ಟಿ, ಬೆಳೆದು ಸಾರ್ಥಕ ಜೀವನ ನಿರ್ವಹಿಸಲು ಆತನಿಗೆ ಅನೇಕ ವಿಧವಾದ ಪೋಷಣೆ, ಸಹಕಾರಗಳು ಅವಶ್ಯಕವಾಗಿದ್ದು ಭಗವಂತನ ಅನುಗ್ರಹದಿಂದ ದೊರೆಯುತ್ತದೆ. ಒಂದು ಮಗು ಹುಟ್ಟಿದೊಡನೆಯೇ ಅದಕ್ಕೆ ಯಾರೂ ಹೇಳಿಕೊಡದಿದ್ದರೂ ತನ್ನದೇ ಸಹಜ ಪ್ರೇರಣೆಯಿಂದ ಸ್ತನ್ಯಪಾನ ಮಾಡುತ್ತದೆ. ನಂತರ ತಾನಾಗಿಯೇ ನೋಡುವುದು, ನಡೆಯುವುದು, ಮಾತಾನಾಡುವುದನ್ನೆಲ್ಲಾ ಕಲಿತುಕೊಳ್ಳುತ್ತದೆ. ಮಾತನ್ನು ಕಲಿಯುವಾಗ ಸುತ್ತಮುತ್ತಲಿನ ಜನರ ಮಾತನ್ನು ಕೇಳುತ್ತಾ ಮಾತನ್ನು ಕಲಿತರೂ ಕಲಿಯುವಿಕೆಯು ಆಗುವುದು ತನ್ನೊಳಗೇ ಇರುವು ಸಹಜ ಪ್ರವೃತ್ತಿಯ ದೆಸೆಯಿಂದಲೇ ಹೊರತು ಒಬ್ಬ ವ್ಯಕ್ತಿ ಕಲಿತಿರುವ ಅಥವಾ ಆಡುವ ಅಷ್ಟೂ ಮಾತನ್ನು ಯಾರೂ ಹೊರಗಡೆಯಿಂದ ಹೇಳಿಕೊಡಲಿಕ್ಕಾಗುವುದಿಲ್ಲ.



ಈ ಉದಾಹರಣೆಯನ್ನು ವಿಸ್ತರಿಸಿ ಗಮನಿಸಿದಾಗ, ನಮ್ಮ ಎಲ್ಲಾ ಇಂದ್ರಿಯ ಮನಸ್ಸುಗಳ ಕಾರ್ಯನಿರ್ವಹಣೆ ನಮ್ಮೊಳಗಿನ ಪ್ರೇರಣೆಯಿಂದಲೇ ನಡೆಯುತ್ತಿರುತ್ತದೆ. ನಮ್ಮೊಳಗೇ ಶಕ್ತಿ ರೂಪದಲ್ಲಿದ್ದು, ಇಂದ್ರಿಯ ಮನಸ್ಸುಗಳಿಗೆ ಪ್ರೇರಣೆ ನೀಡುವವರನ್ನು ದೇವತೆಗಳು ಎನ್ನುತ್ತೇವೆ. ದೇವತೆಗಳು ಭಗವಂತನ ಅನುಗ್ರಹ ಹರಿಯಲು ಇರುವ ಒಂದು ದ್ವಾರ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವ ನಾನಾ ವಿಧಗಳನ್ನು ದೇವ ಯಜ್ಞ ಎನ್ನುತ್ತೇವೆ. ಇದೇ ರೀತಿ, ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಜೀವನದಲ್ಲಿ ನಾನಾ ಪಾತ್ರ ವಹಿಸಿದರೂ, ತನ್ನ ಮಕ್ಕಳ ವಿಷಯಕ್ಕೆ ಬಂದಾಗ ಅತನಲ್ಲಿಮತ್ತು ಆಕೆಯಲ್ಲಿ ತಂದೆತನ ಮತ್ತು ತಾಯಿತನ ಇರುತ್ತದೆ.



ಈ ತಂದೆತನ, ತಾಯ್ತನದ ಪ್ರವೃತ್ತಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವುದು ಆತನ ಒಳಗೇ ಇರುವ ಪಿತೃ ದೇವತೆಗಳೆಂಬ ಶಕ್ತಿಗಳಿಂದ. ಒಬ್ಬ ಮನುಷ್ಯ ಹುಟ್ಟಿದ ನಂತರ ಆತನ ಅಥವಾ ಆಕೆಯ ಪಾಲನೆ, ಪೋಷಣೆಯನ್ನು ಪಿತೃದೇವತೆಗಳು ಪ್ರತ್ಯಕ್ಷವಾಗಿ ತಂದೆ, ತಾಯಿಯ ರೂಪದಲ್ಲೂ, ಪರೋಕ್ಷವಾಗಿ ದೇಹದೊಳಗೆ ಶಕ್ತಿರೂಪದಲ್ಲೂ ನೀಡುತ್ತಿರುತ್ತಾರೆ. ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಪಿತೃಯಜ್ಞ ಎನ್ನುತ್ತಾರೆ. ಹೀಗೆಯೇ ಒಬ್ಬ ಮನುಷ್ಯನ ಜ್ಞಾನ ಸಾಧನೆಗೆ ಋಷಿಗಳು ಹೊರಗಿನಿಂದಲೂ, ಒಳಗಿನಿಂದಲೂ ಕಾರಣರಾಗಿರುತ್ತಾರೆ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಬ್ರಹ್ಮ ಯಜ್ಞ ಅಥವಾ ಜ್ಞಾನ ಯಜ್ಞ ಎನ್ನುತ್ತಾರೆ. ಇದಲ್ಲದೇ ಒಬ್ಬ ಮನುಷ್ಯ ಸಮರ್ಥ ಜೀವನ ನಡೆಸುವಲ್ಲಿಅನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ.



ಒಬ್ಬ ವ್ಯಕ್ತಿ ಒಂದು ಹೊತ್ತಿನ ಆಹಾರ ಸೇವನೆ ಮಾಡಬೇಕಾದರೆ ಹಲವರ ಪಾತ್ರವಿರುತ್ತದೆ.ಇದೇ ರೀತಿಯಲ್ಲಿ ನಮ್ಮ ವಸತಿ, ಬಟ್ಟೆ, ಶಿಕ್ಷಣ, ಮನೋರಂಜನೆ, ಸಂಪಾದನೆ ಮುಂತಾದ ಪ್ರತಿ ಕ್ಷೇತ್ರದಲ್ಲೂ ಅನೇಕಾನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅತಿಥಿ ಸತ್ಕಾರದ ಮೂಲಕ ಮನುಷ್ಯರನ್ನು ಸತ್ಕರಿಸುವುದು ಮನುಷ್ಯ ಯಜ್ಞವೆನಿಸಿಕೊಳ್ಳುತ್ತದೆ. ಹೀಗೆಯೇ ಪಶು ಪಕ್ಷಿಗಳೂ ಸಹ ನಮ್ಮ ಪಾಲನೆ ಪೋಷಣೆಗೆ ಕಾರಣವಾಗಿರುತ್ತದೆ. ಪಶುಪಕ್ಷಿಗಳಿಗೆ ಆಹಾರ ನೀಡುವುದನ್ನು ಭೂತ ಯಜ್ಞ ಎನ್ನುತ್ತಾರೆ. ಹೀಗೆ ಭಗವಂತನ ಪೋಷಣೆ ನಮಗೆ ತಲಪುವ ದ್ವಾರಗಳಲ್ಲಿ 5 ಮುಖ್ಯ ದ್ವಾರಗಳಾದ - ದೇವತೆಗಳು, ಪಿತೃಗಳು, ಋುಷಿಗಳು, ಮನುಷ್ಯರು ಮತ್ತು ಪಶುಪಕ್ಷಿಗಳನ್ನು ಅರಾಧಿಸುವುದನ್ನು, ಸತ್ಕರಿಸುವುದನ್ನು ಪಂಚ ಮಹಾ ಯಜ್ಞಗಳೆಂದು ಕರೆಯುತ್ತಾರೆ. ಈ ಐದರಲ್ಲಿಒಂದಾಗಿರುವುದರಿಂದ ಪಿತೃ ಯಜ್ಞಕ್ಕೆ ಒಂದು ಮಹತ್ವ.



2. ಎರಡನೆಯದಾಗಿ, ಈ ಹದಿನೈದು ದಿನಗಳಿಗೆ ಕಾಲದ ದೃಷಿಯಿಂದಲೂ ಒಂದು ಮಹತ್ವ ಉಂಟು. ಹೇಗೆ ಒಂದು ದಿನದಲ್ಲಿ ರಾತ್ರಿ ಕಾಲ ನಿದ್ರೆಗೂ, ಹಗಲು ಪ್ರವೃತ್ತ ಜೀವನಕ್ಕೂ ಮತ್ತು ಸಂಧ್ಯಾ ಕಾಲ ಭಗವಂತನ ಆರಾಧನೆಗೂ ಸೂಕ್ತವಾಗಿದೆಯೋ ಹಾಗೆಯೇ ಒಂದು ವರ್ಷದ ಕೆಲವು ದಿನಗಳಲ್ಲಿ ಕೆಲವು ದೇವತೆಗಳ ಅನುಗ್ರಹವು ವಿಶೇಷವಾಗಿ ಹರಿಯುತ್ತಿದ್ದು ಆಯಾ ದೇವತೆಯ ವಿಶೇಷ ಆರಾಧನೆಗೆ ಪ್ರಶಸ್ತ ಎಂದು ಪರಿಗಣಿಸಲ್ಪಡುತ್ತದೆ. ಈ ವಿಶೇಷ ದಿನಗಳನ್ನು ಪರ್ವ ಅಥವಾ ಹಬ್ಬ ಎಂದು ಆಯಾ ದೇವತೆಯ ಹೆಸರಿನಿಂದ, ರಾಮ ನವಮೀ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮೊದಲಾಗಿ ಕರೆಯುತ್ತಾರೆ. ಈ ನೇರದಲ್ಲಿ ಪಿತೃ ದೇವತೆಗಳ ಸಾನ್ನಿಧ್ಯ ವಿಶೇಷವಾಗಿ ಕೂಡಿ ಬಂದು ಅವರ ಅನುಗ್ರಹ ಹರಿಯುವುದಕ್ಕೆ ವಿಶೇಷವಾಗಿರುವ ಅವಧಿ ಎಂದರೆ ಈ ಪಿತೃ ಪಕ್ಷ. ಈ ಕಾಲಾವಧಿಯಲ್ಲಿ ಪಂಚ ಮಹಾ ಯಜ್ಞಗಳಲ್ಲೊಂದಾದ ಪಿತೃ ಯಜ್ಞದ ಆಚರಣೆ ವಿಶೇಷ ಫಲವನ್ನು ನೀಡುವುದರಿಂದ ಪಿತೃ ಪಕ್ಷವು ಮಹತ್ವವನ್ನು ಪಡೆಯುತ್ತದೆ.


----------- Hari Om -----------

No comments:

Post a Comment