Wednesday, July 1, 2020

Ashada Ekadsi

 


Ashada Ekadasi 
 



ನ ಭೋಕ್ತವ್ಯಂ ನ ಭೋಕ್ತವ್ಯಂ ನ ಭೋಕ್ತವ್ಯಂ ಹರೇರ್ದಿನೇ ಹರಿದಿನದೊಳು ಉಂಡವಗೆ ನರಕ ತಪ್ಪದು

ಇಂದು ಪ್ರಥಮ ಏಕಾದಶೀ.ಇದನ್ನು ಶಯನೀ ಏಕಾದಶೀ ಎಂದೂ ಪದ್ಮಾ ಏಕಾದಶೀ ಎಂದೂ ಕರೆಯುವುದುಂಟು.

ಆಷಾಢ ಏಕಾದಶಿಯನ್ನು ಶಯನೀ ಏಕಾದಶಿ ಎನ್ನುವರು , ಕಾರಣ ವಿಷ್ಣು ಇನ್ನು ನಾಲ್ಕು ತಿಂಗಳು ಯೋಗನಿದ್ರೆಗೆ ಜಾರುವನು ,ಅದಕ್ಕಾಗಿ ಅದನ್ನು ಶಯನೀ ಏಕಾದಶಿ ಎನ್ನುವರು ,ಈ ದಿನ ಭಗವಂತನು ಪ್ರಪಂಚ ದೃಷ್ಟಿಯಲ್ಲಿ ಮಲಗಿದಂತೆ ಅನುಸಂಧಾನ ಮಾಡುವರು. ಈ ಏಕಾದಶಿಯನ್ನು ಮಾಡಿದರೆ ಸಂಪತ್ತನ್ನು ಭಾಗ್ಯವನ್ನು ಪಡೆಯುತ್ತಾರೆ , ದುಃಖ ದೂರವಾಗುತ್ತದೆ.....

ಮೊದಲು ಏಕಾದಶಿಯ ಮಹತ್ವವೇನು ? ಏಕಾದಶಿಯ ದಿನ ಯಾಕೆ ಉಪವಾಸ ಮಾಡಬೇಕು ? ಮತ್ತು ಏನು ಫಲ ? ಎಂದು ಅರಿಯೋಣ.

ಪ್ರಾಚೀನ ಕಾಲದಲ್ಲಿ "ಮುರ" ಎಂಬ ರಾಕ್ಷಸನಿದ್ದ .ಇವನು ಇಂದ್ರಾದಿ ದೇವತೆಗಳನ್ನೆಲ್ಲಾ ಸೋಲಿಸಿದನು. ಆಗ ದೇವತೆಗಳೆಲ್ಲಾ ಒಟ್ಟಾಗಿ ಕ್ಷೀರಸಾಗರದಲ್ಲಿ ಮಲಗಿದ್ದ ಶ್ರೀಮನ್ನಾರಾಯಣನನ್ನು ಮುರನಿಂದ ತಮ್ಮನ್ನು ರಕ್ಷಿಸುವಂತೆ ಬ್ರಹ್ಮದೇವರ ಮೂಲಕ ಪ್ರಾರ್ಥಿಸಿದರು.

ಆಗ ದೇವತೆಗಳ ಪ್ರಾರ್ಥನೆಯಂತೆ ಶ್ರೀಹರಿಯು ತನ್ನ ದಿವ್ಯ ಬಾಣಗಳು ಹಾಗೂ ಚಕ್ರವನ್ನು ಮುರಾಸುರನ ಮೇಲೆ ಪ್ರಯೋಗಿಸಿದನು. ಇದರಿಂದ ಮುರಾಸುರನನ್ನು ಬಿಟ್ಟು ಉಳಿದೆಲ್ಲ ರಾಕ್ಷಸರು ಹತರಾದರು . ಶ್ರೀಹರಿಯು ಬದರಿಕಾಶ್ರಮಕೆ ಹೋಗಿ ಅಲ್ಲಿದ್ದ ಒಂದು ಗುಹೆಯಲ್ಲಿ ಮಲಗಿಬಿಟ್ಟರು. ಮುರನು ವಿಷ್ಣುವನ್ನು ಕೊಲ್ಲಲು ಅಲ್ಲಿಗೆ ಬಂದನು. ಆಗ ಭಗವಂತನ ತೇಜಾಂಶದಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಂದು ಕನ್ಯೆಯ ಅವತಾರವಾಯಿತು. ಮುರನಿಗೂ ಆಕೆಗೂ ಯುದ್ಧವಾಯಿತು. ಆಕೆಯ ಒಂದೇ ಹೂಂಕಾರಕ್ಕೆ ಸುಟ್ಟು ಭಸ್ಮನಾದ ಮುರಾಸುರ.ಇದರಿಂದ ಸಂತೋಷಗೊಂಡ ಶ್ರೀಹರಿಯು ಆಕೆಯು ಬೇಡಿದಂತೆ ವರ ಕರುಣಿಸಿದನು.

ಆಕೆಯೇಸಾಕ್ಷಾತ್ಏಕಾದಶೀ

ಆಕೆಯು ಪರಮಾತ್ಮನಲ್ಲಿ ಭಯ ಭಕ್ತಿಯಿಟ್ಟು ತನ್ನದಿನದಂದು ಉಪವಾಸ ಮಾಡಿದರೆ ಅವರ ಪಾಪಗಳನ್ನೆಲ್ಲಾ ಕಳೆದು ಮೊಕ್ಷ ಕರುಣಿಸುವಂತೆ ಕೋರಿಕೊಂಡಳು. ಅದಕ್ಕಾಗಿಯೇ ಎರಡೂ ಪಕ್ಷಗಳ ಏಕಾದಶಿಗಳು ಪಾಪನಾಶಕಗಳು .ಆದ್ದರಿಂದ ಏಕಾದಶಿಯ ಉಪವಾಸ ಅತ್ಯಂತ ಶ್ರೇಷ್ಠವಾದದ್ದು . ಆದಿನ ಉಪವಾಸ ಮಾಡಿ ಶ್ರೀಮನ್ನಾರಾಯಣನ ಸ್ಮರಣೆ, ದ್ವಾದಶಿಯ ಪಾರಣೆ ಮಾಡಿದರೆ ಕಲಿಯ ದೋಷ ಪರಿಹಾರ .‌‌‌..

ಆಷಾಡಏಕಾದಶೀಮಾಹಾತ್ಮೆ


ಒಮ್ಮೆ ನಾರದರು ತನ್ನ ತಂದೆಯಾದ ಚತುರ್ಮುಖ ಬ್ರಹ್ಮದೇವರ ಕುರಿತು ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಮಹಿಮೆಯನ್ನು ಹೇಳಬೇಕಾಗಿ ಬೇಡಿಕೊಂಡರು. ಆಗ ಬ್ರಹ್ಮದೇವರು ನಾರದರನ್ನು ಕುರಿತು – ಹೇ ವಿಷ್ಣುಭಕ್ತರಲ್ಲಿ ಶ್ರೇಷ್ಠನಾದ ನಾರದನೇ – ಸಕಲ ಲೋಕದಲ್ಲಿಯೂ ಏಕಾದಶೀ ವ್ರತಕ್ಕಿಂತ ಶ್ರೇಷ್ಠವಾದ ಬೇರೊಂದು ಪವಿತ್ರವಾದ ವ್ರತವಿಲ್ಲ, ಆದುದರಿಂದ ಸರ್ವಪಾಪಗಳ ನಿವೃತ್ತಿಗಾಗಿ ಪ್ರಯತ್ನಪೂರ್ವಕ ಏಕಾದಶೀ ವ್ರತವನ್ನು ಆಚರಿಸಬೇಕು. ಏಕಾದಶ್ಯಾಂ ವ್ರತಂ ಪುಣ್ಯಂ ಪಾಪಘ್ನಂ ಸರ್ವಕಾಮದಮ್ | ನ ಕೃತಂ ಯೈರ್ನರೈರ್ಲೋಕೇ ತೇ ನರಾ ನಿರಯೈಷಿಣಃ || ಪಾಪಗಳನ್ನು ನಾಶಮಾಡುವಂತಹ, ಸಕಲ ಕಾಮನೆಗಳನ್ನು ತಂದುಕೊಡುವಂತಹ ಏಕಾದಶೀ ಎಂಬ ಪುಣ್ಯವ್ರತವನ್ನು ಈ ಲೋಕದಲ್ಲಿ ಯಾರು ಆಚರಿಸುವುದಿಲ್ಲವೋ ಅವರು ನರಕವನ್ನು ಸೇರುತ್ತಾರೆ. ಹೀಗೆ ಏಕಾದಶೀ ಉಪವಾಸದ ಮಹತ್ತ್ವವನ್ನು ವರ್ಣಿಸಿ, ಪದ್ಮಾ ಎಂಬ ಹೆಸರುಳ್ಳ ಶ್ರೀಹರಿಯ ಅತ್ಯಂತ ಪ್ರೀತಿಗೆ ಪಾತ್ರವಾದಂಥಹ ಈ ಏಕಾದಶಿಯ ಕುರಿತ ಪೌರಾಣಿಕವಾದ ಐತಿಹ್ಯವನ್ನು ಬ್ರಹ್ಮದೇವರು ಹೇಳಿದರು. ಈ ಪುರಾಣಕಥಾ ಶ್ರವಣ ಮಾತ್ರದಿಂದ ಮಹಾಪಾಪಗಳು ನಾಶವಾಗಿ ಸದ್ಗತಿ ದೊರಕುತ್ತದೆ. ಹಿಂದೆ ಕೃತಯುಗದಲ್ಲಿ ವೈವಸ್ವತಮನುವಿನ ವಂಶದಲ್ಲಿ ಮಹಾಧರ್ಮಿಷ್ಠನಾದ ಮಾಂಧಾತಾ ಎಂಬ ರಾಜನು ಚಕ್ರವರ್ತಿಯಾಗಿ ಭೂಮಿಯನ್ನು ಆಳುತ್ತಿದ್ದನು. ಮಹಾ ಪರಾಕ್ರಮಿಯೂ, ಸತ್ಯನಿಷ್ಠನೂ ಆದ ಆ ರಾಜರ್ಷಿಯು ತನ್ನ ಪ್ರಜೆಗಳನ್ನು ಮಕ್ಕಳ ಹಾಗೆ ಪರಿಪಾಲಿಸುತ್ತಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲರೂ ನಿರಾತಂಕರಾಗಿ, ಧರ್ಮದಿಂದ ಸಮೃದ್ಧ ಜೀವನ ನಡೆಸುವವರಾಗಿದ್ದರು. ದುರ್ಭಿಕ್ಷೆಯಾಗಲಿ ಆಧಿವ್ಯಾಧಿಗಳ್ಯಾವುವೂ ಅವನ ರಾಜ್ಯದಲ್ಲಿ ಇರಲಿಲ್ಲ. ಒಮ್ಮೆ ಮಾಂಧಾತಾ ರಾಜನ ರಾಜ್ಯದಲ್ಲಿ ವಿಧಿವಶಾತ್ ಎಂಬಂತೆ ಭಯಂಕರವಾದ ಮೂರು ವರ್ಷಗಳಷ್ಟು ದೀರ್ಘಕಾಲ ಬರಗಾಲ ಬಿದ್ದಿತು. ಮಳೆ-ಬೆಳೆಗಳಿಲ್ಲದೇ ಪ್ರಜೆಗಳಲ್ಲಿ ಹಾಹಾಕಾರ ಉಂಟಾಯಿತು. ಹಸಿವೆ ನೀರಡಿಕೆಯಿಂದ ಪೀಡಿತರಾಗಿ ಜನ ರಾಜನ ಮೊರೆ ಹೊಕ್ಕರು.



ಹೇ ರಾಜನೇ – ಪರ್ಜನ್ಯರೂಪಿಯಾದ ಭಗವಾನ್ ವಿಷ್ಣುವು ಸದಾ ಸರ್ವತ್ರ ವ್ಯಾಪ್ತನಾಗಿರುವನು, ಅವನೇ ಮಳೆಯನ್ನು, ಮಳೆಯಿಂದ ಬೆಳೆಗಳನ್ನು ಮತ್ತು ಬೆಳೆಗಳಿಂದ ಪ್ರಜೆಗಳನ್ನು ಸೃಷ್ಟಿಮಾಡುವನು. ಮಳೆಯ ಅಭಾವದಿಂದ ಪ್ರಜೆಗಳ ನಾಶವಾಗುತ್ತಿರುವ ಕಾರಣ, ನೀನು ಏನಾದರೂ ಉಪಾಯವನ್ನು ಮಾಡು – ಎಂದು ಪ್ರಾರ್ಥಿಸಿಕೊಂಡರು. ಪ್ರಜಾಪಾಲಕನಾದ ರಾಜನು ಈ ಕ್ಷೋಭೆಯಿಂದ ಪರಿಹಾರದ ಶೋಧನೆಗಾಗಿ ಋಷಿಮುನಿಗಳ ಆಶ್ರಮಗಳನ್ನು ಅರಸುತ್ತಾ ಅರಣ್ಯಕ್ಕೆ ತೆರಳಿದನು. ಒಂದು ಪ್ರದೇಶದಲ್ಲಿ ಅತ್ಯಂತ ತೇಜೋರಾಶಿಯಂತಿರುವ ಪ್ರತಿಬ್ರಹ್ಮನ ಹಾಗೇ ಹೊಳೆಯುತ್ತಿರುವ ಬ್ರಹ್ಮದೇವರ ಮಗನಾದ ಅಂಗೀರಸ ಮುನಿಗಳನ್ನು ನೋಡಿದನು. ಅವರಿಂದ ಅನುಗ್ರಹ ಪಡೆಯಬೇಕೆಂದು ಇಚ್ಛಿಸಿ ಬಳಿ ಸಾರಿ ವಿನಯಪೂರ್ವಕವಾಗಿ ನಮಸ್ಕರಿಸಿ ನಿಂತುಕೊಂಡನು. ಚಕ್ರವರ್ತಿಯು ತನ್ನ ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದ ವಿಷಯವನ್ನು ಅಂಗೀರಸರಿಗೆ ತಿಳಿಸಿ ಸಮಾಧಾನವನ್ನು ಹೇಳಬೇಕೆಂದು ಕೇಳಿಕೊಂಡನು.



ಋಷಿಗಳು, ಮಾಂಧಾತ ರಾಜನೇ – ಈ ಕೃತಯುಗವು ಯುಗಗಳಲ್ಲಿ ಶ್ರೇಷ್ಠವಾಗಿದೆ, ಈ ಯುಗದಲ್ಲಿ ಎಲ್ಲರೂ ಬ್ರಹ್ಮನನ್ನು ಕುರಿತು ಉಪಾಸನೆಯನ್ನು ಮಾಡುವುದರಿಂದ ಧರ್ಮವು ನಾಲ್ಕೂ ಚರಣಗಳಿಂದ ಯುಕ್ತವಾಗಿದೆ. ಬ್ರಾಹ್ಮಣರು ಮಾತ್ರ ವೈದಿಕ ಮಾರ್ಗದಿಂದ ತಪವನ್ನಾಚರಿಸುವುದು ಈ ಯುಗಧರ್ಮ, ಆದರೆ ಇದಕ್ಕೆ ವಿರುದ್ಧವಾಗಿ ನಿನ್ನ ರಾಜ್ಯದಲ್ಲಿ ವಿಧರ್ಮಿಯಾದ ವೃಷಲನೆಂಬ ಅಂತ್ಯಜನು ಅನ್ಯಾಯವನ್ನು ಬಯಸಿ ತಪಸ್ಸನ್ನಾಚರಿಸುತ್ತಿರುವುದು ಈ ಕ್ಷಾಮಕ್ಕೆ ಕಾರಣವಾಗಿದೆ. ಅವನ ನಿವಾರಣೆಯಾದರೆ ಕ್ಷಾಮ ಕಳೆದು ಪುನಃ ಸುಭೀಕ್ಷವುಂಟಾಗುತ್ತದೆ ಎಂದು ಹೇಳಿದರು. ರಾಜನು, ನಿರಪರಾಧಿಯಾದ ಮತ್ತು ತಪಸ್ಸನ್ನಾಚರಿಸುತ್ತಿರುವ ಅವನನ್ನು ತಾನು ನಿವಾರಿಸಲಾರೆ, ಆದ್ದರಿಂದ ಇನ್ನೇನಾದರೂ ಪರ್ಯಾಯ ಧರ್ಮೋಪಾಯವನ್ನು ತಿಳಿಸಬೇಕೆಂದು ಬೇಡಿಕೊಂಡನು. ರಾಜನ ಕ್ಷಮಾಗುಣ ಮತ್ತು ಧರ್ಮಬುದ್ಧಿಯಿಂದ ಅಂಗೀರಸರು ಪ್ರಸನ್ನರಾಗಿ, ಹೇ ರಾಜನೇ ಆಷಾಢ ಮಾಸದ ಶುಕ್ಲಪಕ್ಷದಲ್ಲಿ ಬರುವ ಪದ್ಮಾನಾಮಕ ಏಕಾದಶಿಯ ವ್ರತವನ್ನು ನೀನು ಪರಿವಾರ ಪ್ರಜಾ ಸಹಿತನಾಗಿ ಕ್ಷಾಮ ಪರಿಹಾರಕ್ಕಾಗಿಯೇ ಸಂಕಲ್ಪಿಸಿ ಮಾಡುವಿಯಾದರೆ ಕ್ಷಾಮವು ನೀಗಿ ನಿನ್ನ ರಾಜ್ಯದಲ್ಲಿ ಮೊದಲಿನಂತೆ ಸುಭೀಕ್ಷ ಉಂಟಾಗುತ್ತದೆ, ಹೇಗೆಂದರೆ ಈ ಏಕಾದಶಿಯು – ಸರ್ವಸಿದ್ಧಿಪ್ರದಾ ಹ್ಯೇಷಾ ಸರ್ವೋಪದ್ರವನಾಶಿನೀ | ಸರ್ವಸಿದ್ಧಿಯನ್ನು ಕೊಡುವುದು ಮತ್ತು ಎಲ್ಲ ಉಪದ್ರವಗಳನ್ನು ನಾಶಮಾಡುವಂತಹದ್ದಾಗಿದೆ, ಆದ್ದರಿಂದ ನೀನು ಈ ವ್ರತವನ್ನು ಖಂಡಿತವಾಗಿ ಮಾಡು ಎಂದು ಉಪದೇಶವನ್ನು ಕೊಟ್ಟರು. ಈ ಪ್ರಕಾರ ಅಂಗೀರಸರಿಂದ ಉಪದೇಶ ಪಡೆದವನಾಗಿ ರಾಜನು ತನ್ನ ರಾಜ್ಯಕ್ಕೆ ತೆರಳಿ, ಆಷಾಢ ಪ್ರಾಪ್ತವಾಗಲು ಸಮಸ್ತ ಪ್ರಜಾಜನ ಮತ್ತು ಪರಿವಾರ ಸಮೇತ ಈ ಏಕಾದಶೀ ವ್ರತವನ್ನು ವಿಧಿವತ್ತಾಗಿ ಸಂಕಲ್ಪಿಸಿ ಮಾಡಿದನು. ಶೀಘ್ರವಾಗಿ ವ್ರತಪ್ರಭಾವದಿಂದ ರಾಜ್ಯದಲ್ಲಿ ಸುವೃಷ್ಟಿಯಾಯಿತು ಮತ್ತು ಅವನ ರಾಜ್ಯ ಪುನಃ ಸಂಪದ್ಭರಿತವಾಯಿತು. ಈ ಕಾರಣದಿಂದಲೇ ಶ್ರೇಷ್ಠವಾದ ಈ ಪದ್ಮಾವ್ರತವನ್ನು ಆಚರಿಸಬೇಕು. ಈ ವ್ರತವು ಭುಕ್ತಿ ಮುಕ್ತಿ ಪ್ರದವೂ, ಜನರಿಗೆ ಸುಖದಾಯಕವೂ ಆಗಿದೆ. ಈ ವ್ರತದ ಮಹಾತ್ಮೆಯ ಪಠನ ಹಾಗೂ ಶ್ರವಣಗಳಿಂದ ಸರ್ವಪಾಪಗಳೂ ನಾಶವಾಗುತ್ತವೆ. ಇತಿ ಆಷಾಢ ಏಕಾದಶೀ ವ್ರತ ಮಾಹಾತ್ಮ್ಯಮ್.


ಏಕಾದಶೀ ವ್ರತವನ್ನುಮಾಡುವಕ್ರಮ

ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು.
ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು.


ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಉಪವಾಸ ಮಾಡಿ ಭಗವಂತನಿಗೆ ಪೂಜೆ ಮಾಡಿ ತುಳಸಿಯಿಂದ ಅರ್ಚಿಸಿ , ಮಾರನೇಯ ದಿನ ದ್ವಾದಶಿ ಬೆಳಿಗ್ಗೆ ಪಾರಣೆಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗುವುದು. ಏಕಭುಕ್ತ ಈ ದಿನವೂ ಆವಶ್ಯಕ.






                                                         ----------- Hari Om ----------