Monday, October 9, 2023

Pitru Devathegalu - or - Pitru Gods

 

Pitru Devathegalu Blessings Only during Pitru Paksha or Mahalaya Parva 

Kala Period ( 15 Days )

ಪಿತೃ ದೇವತೆಗಳು ಅಸ್ತು ಅಸ್ತು ಅನ್ನುವ ಪರ್ವ ಕಾಲ ಈ ಮಹಾಲಯ

 


 

ಋಣಗಳಲ್ಲಿ ಮೂರು ಋಣಗಳು ಶ್ರೇಷ್ಠ ಅನ್ನುವುದನ್ನು ಶಾಸ್ತ್ರ ಪುರಾಣಗಳು ಹೇಳಿವೆ. ಅವುಗಳೆಂದರೆ ದೇವ ಋಣ, ಋಷಿ ಋಣ ಮತ್ತು ಪಿತೃ ಋಣ. ಪಿತೃ ಋಣವನ್ನು ಸರಿಯಾಗಿ ತೀರಿಸಿಕೊಂಡರೆ ದೇವ ಋಣ ಮತ್ತು ಋಷಿ ಋಣದ ಕಟ್ಟುಗಳಿಂದ ತಾನೇ ತಾನಾಗಿ ಮುಕ್ತಿ ದೊರೆಯುವುದಂತೆ, ಹಾಗಾದರೆ ಬನ್ನಿ ಈ ಪಿತೃ ಋಣದ ಬಗ್ಗೆ ಈ ಮಹಾಲಯದ ಪರ್ವ ಕಾಲದಲ್ಲಿ ಸ್ವಲ್ಪ ಹೆಚ್ಚು ತಿಳಿಯೋಣ.



ಒಬ್ಬ ಬದುಕಿರುವ ಮನುಷ್ಯನಿಗೆ ತನ್ನ ಸತ್ತ ಮೂರು ತಲೆಮಾರಿನ ಪೂರ್ವಜರು ಪಿತೃಗಳು ಅನಿಸಿಕೊಳ್ಳುತ್ತಾರೆ. ಅಂದರೆ ಬದುಕಿರುವ ಕುಟುಂಬದ ಹಿರಿಯನ ತೀರಿ ಹೋದ ಪಿತ, ಪಿತಾಮಹ ಮತ್ತು ಪ್ರಪಿತಾಮಹ ಪಿತೃಗಳು ಅನಿಸಿಕೊಳ್ಳುತ್ತಾರೆ. ಈ ಮೂರು ತಲೆಮಾರಿನ ಋಣ ಪ್ರತಿಯೊಬ್ಬರ ಮೇಲೂ ಇರುತ್ತದೆ. ತೀರಿ ಹೋದ ಮೂರು ಸಂತತಿಗೆ ಎಡೆಯಿಟ್ಟು ಶ್ರದ್ಧೆಯಿಂದ ಶ್ರಾದ್ಧ ಮಾಡಿದರೆ ಮುಂದಿನ ಮೂರು ತಲೆಮಾರಿನ ಸಂತತಿಯನ್ನು ಪೊರೆಯುವುದಂತೆ ಪಿತೃದೇವತೆಗಳ ಆಶೀರ್ವಾದ.


ಇಲ್ಲಿ ಪಿತೃ ಅಂದರೆ ಬರಿಯ ಗಂಡಸರು ಮಾತ್ರ ಅನ್ನುವ ಅರ್ಥವಲ್ಲ. ಅಪ್ಪ ಅಮ್ಮ, ಅಜ್ಜ ಅಜ್ಜಿ, ಮುತ್ತಜ್ಜ ಮುತ್ತಜ್ಜಿ ಎಲ್ಲರೂ ಪಿತೃಗಳೇ ಆಗಿದ್ದಾರೆ. ತಮ್ಮ ಹಿರಿಯರನ್ನು ಬದುಕಿರುವಾಗ ಮಾತ್ರ ಚೆನ್ನಾಗಿ ನೋಡಿಕೊಂಡ ಮಾತ್ರಕ್ಕೆ ಋಣಗಳು ಮುಗಿದು ಹೋಗುವುದಿಲ್ಲ. ಅವರ ಬದುಕಿನ ನಂತರವೂ ಸೂಕ್ತ ರೀತಿಯಲ್ಲಿ ಅಪರ ಕ್ರಿಯೆಗಳನ್ನು ಮಾಡಿ ಪಿಂಡದ ಮುಖೇನ ಅವರ ಆತ್ಮಗಳನ್ನು ಪಿತೃಲೋಕಕ್ಕೆ ಕಳುಹಿಸಿಕೊಡುತ್ತೇವೆ. ಈ ಪಿತೃಲೋಕ ಅಂದರೆ ಭೂಲೋಕ ಮತ್ತು ಭುವರ್ಲೋಕದ ಮಧ್ಯೆ ಇರುವ ಮರ್ತ್ಯಲೋಕ.

 


 

ದ್ವಾದಶ ಆದಿತ್ಯರಲ್ಲಿ ಒಬ್ಬನಾದ ಆರ್ಯಾಮನ ಅಧಿಪತ್ಯದಲ್ಲಿರುವ ಲೋಕ. ತೀರಿ ಹೋದ ಮೂರು ತಲೆಮಾರಿನ ನಮ್ಮ ಹಿರಿಯರು ಈ ಪಿತೃಲೋಕದಲ್ಲಿರುತ್ತಾರೆ. ಮೂರನೇ ತಲೆಮಾರಿನ ಆಚೆಗಿನವರು ಪುನರ್ಜನ್ಮವೋ ಅಥವಾ ಮೇಲಿನ ಲೋಕವಾದ ಸ್ವರ್ಗಲೋಕವೋ ನರಕವೋ ಅಥವಾ ಈಶ್ವರ ಪ್ರಾಪ್ತಿಯೋ ಅನ್ನುವ ನಿರ್ಧಾರ ಅವರವರ ಕರ್ಮಫಲ ನಿರ್ಧರಿಸುವುದಂತೆ.


ಪಿತೃಲೋಕದಲ್ಲಿ ವಸು ರುದ್ರ ಮತ್ತು ಆದಿತ್ಯರು ಪ್ರಧಾನ ಪಿತೃದೇವತೆಗಳು. ವಸುವು ಒಂದನೆಯ ತಲೆಮಾರಿನ ಅಧಿಪತಿ ಅಂದರೆ ಅಪ್ಪ ಅಮ್ಮಂದಿರ ಪ್ರತಿನಿಧಿ ದೇವತೆ ವಸು. ಎರಡನೇ ತಲೆಮಾರಿನ ಅಧಿಪತಿ ರುದ್ರ ಅಂದರೆ ಅಜ್ಜ ಅಜ್ಜಿಯಂದಿರ ಪ್ರತಿನಿಧಿಸುವ ಪಿತೃದೇವತೆ ರುದ್ರ. ಮೂರನೇ ತಲೆಮಾರಿನ ಅಧಿಪತಿ ಆದಿತ್ಯ. ಅಂದರೆ ಮುತ್ತಜ್ಜ ಮುತ್ತಜ್ಜಿಯರ ಪ್ರತಿನಿಧಿಸುವ ಪಿತೃದೇವತೆ ಆದಿತ್ಯ.

 
ಮಹಾಲಯದ ಪುಣ್ಯ ಕಾಲ ಅಂದರೆ ಭಾದ್ರಪದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಅಮಾವಾಸ್ಯೆ ವರೆಗೆ ಪಿತೃಲೋಕದ ದ್ವಾರ ತೆರೆದುಕೊಂಡು ತೀರಿಹೋದ ಮೂರು ತಲೆಮಾರಿನ ಪಿತೃಗಳು ಅವರವರ ಸಂತತಿಯನ್ನು ಕಾಣಲು ಭೂಲೋಕಕ್ಕೆ ಮರಳಿ ಬಂದು ತಮ್ಮವರಿಂದ ಶ್ರಾದ್ಧ ಕರ್ಮಗಳನ್ನು ಸ್ವೀಕರಿಸಿ ನಮ್ಮ ಮನೋ ಇಚ್ಛೆಗಳಿಗೆ ಅಸ್ತು ಅಸ್ತು ಅನ್ನುತ್ತಾರಂತೆ. ನಾವು ಇಡುವ ಒಂದನೇ ಪಿಂಡ ಅಂದರೆ ಅಪ್ಪ ಅಮ್ಭನಿಗಿಡುವ ಪಿಂಡದ ಅಧಿಪತಿಯಾದ ಪಿತೃದೇವತೆಯಾದ ವಸು ಉತ್ತಮ ಸಂತಾನವನ್ನಿತ್ತು ಹರಸುವವನು. ಎರಡನೆಯ ಪಿಂಡದ ಅಂದರೆ ಅಜ್ಜ ಅಜ್ಜಿಯ ಅಭಿಮಾನಿ ದೇವತೆಯಾದ ರುದ್ರ ಧೀರ್ಘ ಆಯಸ್ಸು ಮತ್ತು ನೆಮ್ಮದಿಯ ಜೀವನವನ್ನು ಕರುಣಿಸುವವನು. ಮೂರನೇ ಪಿಂಡದ ಅಂದರೆ ಮುತ್ತಜ್ಜ ಮುತ್ತಜ್ಜಿಯ ಅಧಿಪತಿಯಾದ ಆದಿತ್ಯ ಐಶ್ವರ್ಯವನ್ನು ಕರುಣಿಸುವವನು.


ಇವರು ಮಹಾಲಯದ ಪರ್ವಕಾಲದಲ್ಲಿ ಪ್ರಸನ್ನ ಚಿತ್ತರಾಗಿ ಬೇಡಿದ್ದಕ್ಕೆಲ್ಲ ಅಸ್ತು ಅಸ್ತು ಅನ್ನುತ್ತಾರಂತೆ. ಇಂತಹ ಪುಣ್ಯ ಕಾಲದಲ್ಲಿ ಯಾವ ಮನೆಯಲ್ಲಿ ಸ್ವಾದ ಮತ್ತು ಸ್ವಾಹ ಅನ್ನುವ ಪಿತೃಯಜ್ಞದ ಜಪ ಮಂತ್ರಗಳು ಹೊರಡದೇ ತಮ್ಮ ಪೂರ್ವಜರನ್ನು ಮರೆತು, ಅವರಿಗೆ ಪಿಂಡ ಶ್ರಾದ್ಧಗಳನ್ನು ಮಾಡದೇ ಬರಿಗೈಯಲ್ಲಿ ಕಳುಹಿಸುವ ಮನೆಗಳಲ್ಲಿ ಕುಪುತ್ರರೂ, ಅಶಾಂತಿಯೂ, ದಾರಿದ್ರ್ಯವೂ ತಾನೇ ತಾನಾಗಿ ನೆಲೆಸುವುದೆಂದು ಪುರಾಣ ಮತ್ತು ಶಾಸ್ತ್ರಗಳು ವರ್ಣಿಸಿವೆ.


---------------- Hari Om ----------------


No comments:

Post a Comment