Thursday, December 4, 2025

ಸತ್ಯನಾರಾಯಣ ಪೂಜೆಯ ಮಹತ್ವವೇನು - Satyanarayana - Puja Significance

 

ಸತ್ಯನಾರಾಯಣ ಪೂಜೆಯನ್ನು ಮಾಡುವುದು ಹೇಗೆ - ಇದರ ಮಹತ್ವವೇನು..?


Satyanarayana Puja - its Significance..?


                                                                   Lord Satyanarayana

 

ಸ್ಕಂದ ಪುರಾಣದಿಂದಲೂ ಆಚರಿಸಿಕೊಂಡು ಬಂದಿರುವ ಶ್ರೀ ಸತ್ಯನಾರಾಯಣ ಪೂಜೆಯನ್ನು ಮನೆಯಲ್ಲಿ ಆಚರಿಸುವುದರಿಂದ ಯಾವೆಲ್ಲಾ ಲಾಭಗಳನ್ನು ಪಡೆಯಬಹುದು ಗೊತ್ತಾ..? ಕೇವಲ ಶುಭ ಸಮಾರಂಭಗಳಲ್ಲಿ ಮಾತ್ರವಲ್ಲ, ಮರಣದ ನಂತರ ಸೂತಕ ಕಳೆದ ಮೇಲೂ ಕೂಡ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಪೂಜೆಯ ಮಹತ್ವ, ಮಾಡುವ ವಿಧಾನ ಮತ್ತು ಯಾವಾಗ ಮಾಡಬೇಕೆನ್ನುವುದರ ಮಾಹಿತಿ ಇಲ್ಲಿದೆ.


ಸತ್ಯನಾರಾಯಣ ಎನ್ನುವುದು ಶ್ರೀ ಮಹಾವಿಷ್ಣುವಿನ ಇನ್ನೊಂದು ಹೆಸರು. ಸತ್ಯನಾರಾಯಣ ಪೂಜೆ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಈ ಪೂಜೆಯನ್ನು ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಯನ್ನು ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ ದಿನ ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಗೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಕೂಡ ವಿಶೇಷ ಮಹತ್ವವಿದೆ.

ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ಅಥವಾ ಸಮೃದ್ಧಿ ನೆಲೆಯಾಗುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಸತ್ಯನಾರಾಯಣ ಪೂಜೆಯಾಗಲಿ ಅಥವಾ ಕಥೆಯಾಗಲಿ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಸತ್ಯನಾರಾಯಣ ಪೂಜೆಯನ್ನು ಅಥವಾ ಕಥೆಯನ್ನು ಮನೆಯಲ್ಲಿ ಯಾರಾದರೂ ಮರಣ ಹೊಂದಿದ ಬಳಿಕವೂ ಆಚರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಈ ಸತ್ಯನಾರಾಯಣ ಕಥೆಯನ್ನು ಶುಭ ಕಾರ್ಯದ ಆರಂಭದಲ್ಲೂ ಹಾಗೂ ವ್ಯಕ್ತಿ ಮರಣದ ನಂತರವೂ ಕೂಡ ಮಾಡಲಾಗುತ್ತದೆ. ಈ ಕಥೆಯನ್ನು ಏಕೆ ಮಾಡಲಾಗುತ್ತದೆ..? ಅದರ ಪ್ರಾಮುಖ್ಯತೆ ಏನು..? ಎಲ್ಲವೂ ಹೀಗಿದೆ:

 

                                                                     Satyanarayana God

 


ಸತ್ಯನಾರಾಯಣ ಪೂಜೆ ಮಾಡುವ ವಿಧಾನ

ಶಾಸ್ತ್ರಗಳ ಪ್ರಕಾರ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳುವವರು ಸತ್ಯನಾರಾಯಣ ಪೂಜೆಗೂ ಹಿಂದಿನ ದಿನ ಉಪವಾಸವನ್ನು ಮಾಡಬೇಕಾಗುತ್ತದೆ. ಸತ್ಯನಾರಾಯಣ ಪೂಜೆ ಮಾಡುವಾಗ ಪೂಜಾ ಸ್ಥಳವನ್ನು ಗೋಮೂತ್ರದ ಮೂಲಕ ಪವಿತ್ರಗೊಳಿಸಿಕೊಳ್ಳಬೇಕಾಗುತ್ತದೆ. ತದನಂತರ ಕುರ್ಚಿಯಾಗಿರಬಹುದು, ಮೇಜಾಗಿರಬಹುದು ಅಥವಾ ನೆಲದಿಂದ ಸ್ವಲ್ಪ ಎತ್ತರದಲ್ಲಿ ಯಾವುದಾದರೊಂದು ವಸ್ತುಗಳನ್ನಿಟ್ಟು ಆ ವಸ್ತುಗಳ ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಿ ಅಥವಾ ನೆಟ್ಟು ಆ ವಸ್ತುವಿನ ಮೇಲೆ ವಿಷ್ಟುವಿನ ಫೋಟೋ ವನ್ನಾಗಲಿ, ಪ್ರತಿಮೆಯನ್ನಾಗಲಿ ಇಡಬೇಕು.

ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ, ದುರ್ಗೆಯನ್ನು ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಸ್ವಾಮಿಯನ್ನು ಪೂಜಿಸಬೇಕು. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ವಿತರಿಸಿ.

ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ವಾಯನ ದಾನ, ದಕ್ಷಿಣೆ ಮತ್ತು ವಸ್ತ್ರಗಳನ್ನು ದಾನ ಮಾಡುವುದರೊಂದಿಗೆ, ಎರಡು ತೆಂಗಿನಕಾಯಿ, ಐದೈದು ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಅರ್ಧ ಸೇರು ಅಕ್ಕಿ, ಆಹಾರ ಪದಾರ್ಥಗಳನ್ನು ಎರಡು ಬಾಳೆ ಎಲೆ ಮುಚ್ಚಿ ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾದ ಮತ್ತು ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.

 

                                                         Old Photo of Lord Satyanarayana

  

ಸತ್ಯನಾರಾಯಣ ಪೂಜೆ ಅಥವಾ ಕಥೆಯ ಮಹತ್ವ: ‌

ಸತ್ಯನಾರಾಯಣ ಪೂಜೆಯನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡು ಬಂದ ಪೂಜೆಯಲ್ಲ, ಬದಲಾಗಿ ಇದನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದು 'ಸ್ಕಂದ ಪುರಾಣ'ದಲ್ಲಿ ಹೇಳಲಾಗಿದೆ. ನಾರದ ಮುನಿಗಳು ವಿಷ್ಣುವಿನಲ್ಲಿ ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ಕೇಳಿದಾಗ ಮಹಾವಿಷ್ಣು ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರೆಂತೆ.

ಇದರ ಆಧಾರದ ಮೇಲೆ ಇಂದಿಗೂ ಕೂಡ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೊಂದು ಪವಿತ್ರ ಪೂಜೆಯೆಂದು ಪರಿಗಣಿಸಲಾಗಿದ್ದು, ಈ ಪೂಜೆಯನ್ನು ಮನೆಯಲ್ಲಿ ಮಗು ಜನಿಸಿದಾಗ, ವಿವಾಹ ಸಂದರ್ಭದಲ್ಲಿ, ಗೃಹ ಪ್ರವೇಶದ ಸಂದರ್ಭದಲ್ಲಿ ಸೇರಿದಂತೆ ಇನ್ನು ಹಲವಾರು ಸಂತಸದ ಸಮಯಗಳಲ್ಲಿ ಆಚರಿಸಲಾಗುತ್ತದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಷ್ಟವನ್ನು ಅನುಭವಿಸುತ್ತಿದ್ದರೆ ಅಥವಾ ತಮ್ಮ ಆಸೆಗಳನ್ನು ಈಡೇರಿಸಕೊಳ್ಳಲು ಕೂಡ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯಿಂದ ದುಷ್ಟರನ್ನು ಶಿಕ್ಷಿಸಿ, ಸಿಷ್ಟರನ್ನು ರಕ್ಷಿಸಲು ಸಹಾಯಕವಾಗಿದೆ.

                                                                       another Photo
 

 ಯಾವಾಗ ಸತ್ಯನಾರಾಯಣ ಪೂಜೆಯನ್ನು ಮಾಡಬೇಕು..?


ಭಗವಾನ್‌ ಸತ್ಯನಾರಾಯಣನನ್ನು ಯಾವಾಗ ಬೇಕಾದರೂ ಪೂಜಿಸಬಹುದು. ಆದರೆ ಈ ಪೂಜೆಯನ್ನು ವಿಶೇಷವಾಗಿ ಹುಣ್ಣಿಮೆ, ಸಂಕ್ರಾಂತಿ, ಗುರುವಾರ ಅಥವಾ ಇನ್ನಿತರ ದೊಡ್ಡ ಕಷ್ಟದ ಸಮಯದಲ್ಲೂ ಮಾಡಬಹುದು. ಪೂಜೆಯಂದು ಮುಂಜಾನೆ ಸ್ನಾನ ಮಾಡಿ, ಶುಚಿಯಾದ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ಧರಿಸಿ, ಹಣೆಯ ಮೇಲೆ ತಿಲಕವನ್ನಿಟ್ಟು ಶುಭ ಸಮಯದಲ್ಲಿ ಪೂಜೆಯನ್ನು ಪ್ರಾರಂಭಿಸಿ. ಸತ್ಯನಾರಾಯಣ ಪೂಜೆಯ ವೇಳೆ ವಿಷ್ಣುವಿನ ಕಥೆಯನ್ನು ಓದಿ ಅಥವಾ ಕೇಳಿ.

 

                                                                            Prasada

 

ಸತ್ತ ನಂತರ ಮಾಡುವ ಸತ್ಯನಾರಾಯಣ ಪೂಜೆ :


ವ್ಯಕ್ತಿಯ ಮರಣದ ನಂತರ ಮನೆಯಲ್ಲಿ ಸೂತಕದ ವಾತಾವರಣ ತುಂಬಿಕೊಂಡಿರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವಾಗಲಿ, ಪೂಜಾ ವಿಧಿ - ವಿಧಾನಗಳಾಗಲಿ ಹಮ್ಮಿಕೊಳ್ಳಲಾಗುವುದಿಲ್ಲ. ಹಾಗಾಗಿ ಶವಸಂಸ್ಕಾರ ಮುಗಿದು ಸೂತಕವು ಕಳೆದ ನಂತರ ಮನೆಯಲ್ಲಿ ಭಗವಾನ್‌ ವಿಷ್ಣುವಿನ ಆರಾಧನೆ ಅಥವಾ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಈ ಕಥೆಯನ್ನು ಆಯೋಜಿಸುವ ಮೂಲಕ ಮನೆಯನ್ನು ಮತ್ತೆ ಶುದ್ಧೀಕರಿಸಲಾಗುತ್ತದೆ ಮತ್ತು ಪೂಜೆಯ ಆಚರಣೆಗಳು ನಿಯಮಿತವಾಗಿ ಆರಂಭವಾಗುತ್ತದೆ.


---------------------- Hari Om -------------------


 

 


 

 

 


 

 

No comments:

Post a Comment