Tuesday, September 18, 2018

Sri Jagannatha Dasaru





 Sri Jagannatha Daasaru



||ಪೊಂದಿ ಭಜಿಸು ಸತತ
ಒಂದೇ ಮನದಿ ಸ್ತಂಭ ಮಂದಿರ ಮಾನವಿ ದಾಸಾರ್ಯರ||

ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಬ್ಯಾಗವಾಟ ಗ್ರಾಮದಲ್ಲಿ ನಮ್ಮ ಇಂದಿನ ಕಥಾನಾಯಕರಾದ ಶ್ರೀ ಜಗನ್ನಾಥ ದಾಸರ ಜನನ.
ತಂದೆ ಶ್ರೀ ನರಸಿಂಹ ಆಚಾರ್ಯರು ಮಹಾ ವಿದ್ವಾಂಸರು, ಇವರಿಗೆ ಸ್ವಪ್ನದಲ್ಲಿ ಶ್ರೀ ಪುರಂದರ ದಾಸರು "ನರಸಿಂಹ ವಿಠ್ಠಲ" ಎಂಬ ಅಂಕಿತವನ್ನು,ಪ್ರಧಾನ ಮಾಡಿರುತ್ತಾರೆ
ತಾಯಿ ಶ್ರೀಮತಿ ಲಕ್ಷ್ಮೀ ಬಾಯಿ.
ಮಗು ಬೆಳೆದ ಹಾಗೆಲ್ಲ ತಂದೆಯ ಕಡೆಇಂದ ಪಾಠ ಪ್ರವಚನದ ಅಧ್ಯಯನ ಅಭ್ಯಾಸ ಆಯಿತು.
ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ಮಂತ್ರಾಲಯ ಮಠದ ಪರಂಪರೆಯಲ್ಲಿ ಬಂದ ಶ್ರೀ ವರದೇಂದ್ರ ಗುರುಗಳ ಬಳಿ ಬರುತ್ತಾರೆ.
ಶ್ರೀ ವರದೇಂದ್ರ ಗುರುಗಳ ಅನುಗ್ರಹದಿಂದ ಸಕಲ ವಿದ್ಯೆಯಲ್ಲಿ ಪಾರಂಗತರಾಗಿ,ಸಚ್ಛಾಸ್ತ್ರ ಪ್ರವೀಣರಾಗುತ್ತಾರೆ.
ಗುರುಗಳ ಮಾತಾ ಪಿತೃಗಳ ಆಜ್ಞೆಯಂತೆ ಗೃಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸಿ, ಶಿಷ್ಯರಿಗೆ ಪಾಠ ಹೇಳುತ್ತಾ ಜೀವನ ಸಾಗಿಸುತ್ತಾರೆ.

ಒಂದು ದಿನ ಶ್ರೀ ಹರಿಯ ಆಜ್ಞೆಯಂತೆ
ಶ್ರೀ ವಿಜಯದಾಸರು ಇವರನ್ನು ಉದ್ದಾರ ಮಾಡಲು ಇವರು ಇರುವ ಕಡೆ ಬಂದು ತಮ್ಮಲ್ಲಿ ತೀರ್ಥ ಪ್ರಸಾದ ಸ್ವೀಕಾರ ಮಾಡಲು ಶ್ರೀನಿವಾಸ ಆಚಾರ್ಯರನ್ನು ಆಹ್ವಾನಿಸುತ್ತಾರೆ.
ಮೊದಲಿಗೆ ಒಪ್ಪಿಕೊಂಡು ನಂತರ
ವಿಜಯ ದಾಸರ ಮೇಲಿನ ಅಸಡ್ಡೆ,ತಾನು ಪಂಡಿತ, ಇವರು ಯಾರೋ ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಕೊಂಡು ಕುಣಿಯುವವರು ಅನ್ನುವ ತಾತ್ಸಾರದಿಂದ ಊಟಕ್ಕೆ ಕರೆಯಲು ಬಂದವರಿಗೆ
ನನಗೆ ಊಟ ತಡವಾದರೆ ಉದರ ಶೂಲೆ ಬರುತ್ತದೆ ಹಾಗಾಗಿ ನಾನು ಬೇಗ ಊಟ ಮಾಡಿದೆ ಅಂತ ಹೇಳಿ ಅವರ ಆಮಂತ್ರಣ ವನ್ನು ನಿರಾಕರಿಸುತ್ತಾರೆ.
ಇದನ್ನು ಶಿಷ್ಯರ ಮುಖಾಂತರ ಕೇಳಿದ ಶ್ರೀ ವಿಜಯದಾಸರು ಶ್ರೀ ಹರಿಯ ಚಿತ್ತಕ್ಕೆ ಇದಿರಾರು ಅಂತ ಹೇಳಿ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ ಅಲ್ಲಿ ಇಂದ ಮುಂದೆ ತೆರಳುತ್ತಾರೆ..
ದೊಡ್ಡವರಲ್ಲಿ ಮಾಡಿದ ತಿರಸ್ಕಾರ ,ನಿಂದನೆ ಈ ತಪ್ಪು ಅವರಿಗೆ ನಿಜವಾಗಿಯೂ ಉದರ ಶೂಲೆ ಬರಲು ಆರಂಭವಾಯಿತು.
ಹಿಂದಿನ ಜನ್ಮದಲ್ಲಿ ಶಲ್ಯ ಮಹಾರಾಜ ಆಗಿದ್ದಾಗ ಮಹಾಭಾರತ ಸಮಯದಲ್ಲಿ ಕಲಿಯ ಅವತಾರವಾದ ದುರ್ಯೋಧನನ ಮನೆಯ ಅನ್ನ ಉಂಡ ಪರಿಣಾಮವಾಗಿ ಶ್ರೀ ವಿಜಯಪ್ರಭುಗಳ ನಿಂದನೆ ಮಾಡುವ ಮಟ್ಟಕ್ಕೆ ಬಂತು.
ಈ ಘಟನೆ ಮುಂದೆ ಅವರ ಜೀವನದಲ್ಲಿ ಒಂದು ತಿರುವು ಪಡೆಯಿತು.
ಉದರ ಶೂಲೆಯ ಬಾಧೆಯನ್ನು ತಡೆಯಲಾರದೇ ಪ್ರಾಣದೇವರ ಸೇವೆ, ರಾಯರ ಸೇವೆ ಯನ್ನು ಮಾಡುತ್ತಾರೆ.
ಕೊನೆಗೆ ಸ್ವಪ್ನದಲ್ಲಿ ಮಂತ್ರಾಲಯ ಪ್ರಭುಗಳು ಬಂದು ತಿರುಪತಿಗೆ ಹೋಗಿ ವಿಜಯದಾಸರು ಬಳಿ ಶರಣುಹೊಂದು ಅವರೇ ನಿನ್ನ ಉದ್ದಾರ ಮಾಡುವವರು ಅಂತ ಸೂಚನೆ ಆದಾಗ ತಕ್ಷಣ ತಿರುಪತಿ ಪ್ರಯಾಣ ಬೆಳೆಸುತ್ತಾರೆ.
ವಿಜಯದಾಸರು ಬಳಿ ಬಂದು ತಮ್ಮ ತಪ್ಪು ಕ್ಷಮಿಸಿ ಅಂತ ಕೇಳಿ ಬಲು ಪಶ್ಚಾತ್ತಾಪ ಪಡುತ್ತಾರೆ.
ಅವರಲ್ಲಿ ಆದ ಬದಲಾವಣೆ ಕಂಡು ದಾಸರು ಅವರನ್ನು
ಶ್ರೀ ಗೋಪಾಲ ದಾಸರ ಬಳಿ ಉತ್ತನೂರಿಗೆ ಕಳುಹಿಸುತ್ತಾರೆ.
ಗೋಪಾಲ ದಾಸರು ತಮ್ಮ ಹತ್ತಿರ ಬಂದು ಶರಣಾಗತರಾದ ಆಚಾರ್ಯ ರನ್ನು ಕಂಡು ಅವರಿಗೆ ಉಪಚಾರವನ್ನು ಮಾಡುತ್ತಾರೆ.
ಆ ಸಮಯದಲ್ಲಿ ಶ್ರೀ ವಿಜಯದಾಸರು ಸೂಕ್ಷ್ಮ ರೂಪದಿಂದ ಅವರ ಬಳಿಗೆ ಬಂದು
ಈ ಜೀವಿಗೆ ಅಲ್ಪಾಯು ಇದೆ. ಮುಂದೆ ಇವನಿಂದ ಅನೇಕ ಕಾರ್ಯಗಳು ಆಗಬೇಕಾಗಿದೆ.ನಿನ್ನ ಆಯುಸ್ಸು ನಲ್ಲಿ40 ವರುಷ ದಾನ ಮಾಡು ಅಂತ ಹೇಳುತ್ತಾರೆ.
ಗುರುಗಳ ಆಜ್ಞೆಯಂತೆ ಗೋಪಾಲ ದಾಸರು
ಶ್ರೀನಿವಾಸ ಆಚಾರ್ಯರ ಉದರಶೂಲೆಯನ್ನು ಧನ್ವಂತರಿ ರೂಪಿ ಪರಮಾತ್ಮನ ಹತ್ತಿರ ಪ್ರಾರ್ಥನೆ ಮಾಡಿ ಅದನ್ನು ಗುಣಪಡಿಸಿ ತಮ್ಮ ಆಯುಸ್ಸು ನಲ್ಲಿ ನಲವತ್ತು ವರುಷಗಳನ್ನು ಅವರಿಗೆ ದಾನ ಮಾಡುತ್ತಾರೆ.
ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.
ಆ ನಂತರ ಗುರುಗಳ ಅಪ್ಪಣೆ ಪಡೆದು ಶ್ರೀನಿವಾಸ ಆಚಾರ್ಯರು ಪಂಡರಾಪುರಕ್ಕೆ ಬಂದು ಭೀಮರಥಿಯಲ್ಲಿ ಮುಳುಗಿ ಸ್ನಾನ ಮಾಡುವಾಗ ತಲೆಯ ಮೇಲೆ ಒಂದು ಕರಿಯ ಶಿಲೆ ಕಂಡಿತು.ಅದರಲ್ಲಿ "ಜಗನ್ನಾಥ ವಿಠ್ಠಲ" ಎಂದು ಬರೆಯಲಾಗಿತ್ತು.
ಉಭಯ ಗುರುಗಳ ಅನುಗ್ರಹದಿಂದ ತಮ್ಮ ಮೇಲೆ ಭಗವಂತ ಮಾಡಿದ ಕಾರುಣ್ಯವನ್ನು ನೆನೆದು ಅಂದಿನಿಂದ ಅದೇ ಅಂಕಿತದಿಂದ ಅನೇಕ ಕೃತಿಗಳು ರಚನೆಯನ್ನು ಮಾಡಿ ಜಗನ್ನಾಥ ದಾಸರೆಂದು ಪ್ರಸಿದ್ಧಿ ಹೊಂದುತ್ತಾರೆ.
ಕೊನೆಯ ವಯಸ್ಸಿನಲ್ಲಿ ಭಗವಂತನ ಆಜ್ಞೆಯಂತೆ ಶ್ರೀ ವ್ಯಾಸರಾಜ,ವಾದಿರಾಜ ಗುರುಗಳ ಹಾಗು ಪುರಂದರ ದಾಸರ ಅನುಗ್ರಹದಿಂದ "ಸಕಲ ವೇದ ಶಾಸ್ತ್ರ, ಭಾಗವತ,ಸಂಗ್ರಹವಾದ ಶ್ರೀ ಹರಿಕಥಾಮೃತ ಸಾರವೆಂಬ" ಭಾಮಿನೀ ಷಟ್ಪದಿಯಲ್ಲಿ ಕೃತಿ ರಚನೆಯನ್ನು ಮಾಡಿ ಭಗವಂತನಿಗೆ ಅರ್ಪಣೆ ಮಾಡುತ್ತಾರೆ.
ಅನೇಕ ಶಿಷ್ಯರು ಇವರಿಗೆ.
ಮುಖ್ಯವಾಗಿ ಶ್ರೀ ಪ್ರಾಣೇಶ ದಾಸರು, ಕರ್ಜಗಿ ದಾಸರು, ಗುರು ಶ್ರೀಶ ವಿಠ್ಠಲ ದಾಸರು.
ತಮ್ಮ ಕಾರ್ಯ ಮುಗಿದ ಮೇಲೆ ದೇವತೆಗಳು ಭೂ ಸಂಪರ್ಕವನ್ನು ಹೊಂದದಿರುವದು ಭಗವಂತನ ಆಜ್ಞೆ.
ಅದರಂತೆ ತಾವು ಹಿಂದೆ ದಾನವಾಗಿ ಪಡೆದ ತಮ್ಮ ಮನೆಯಲ್ಲಿ ಪ್ರತಿನಿತ್ಯ ದಂತೆ ನಿತ್ಯ ಕಾರ್ಯವನ್ನು ಮುಗಿಸಿ ಶಿಷ್ಯ ರಿಗೆ ಹಿತೋಪದೇಶ ಮಾಡಿ ಆಶೀರ್ವಾದ ಮಾಡಿ ತಾವು ಮಹಾಯಾತ್ರೆ ಮಾಡುವದಾಗಿ ತಿಳಿಸಿ ದರು.
ದಿನಾಲು ತಾವು ಪಾಠ ಪ್ರವಚನ,ಭಜನೆ ಮಾಡುತ್ತಿದ್ದ ಪಡಸಾಲೆಯಲ್ಲಿ ಇರುವ ಕಂಭದ ಮುಂದೆ ಕುಳಿತು ಕೊಂಡು ಲಯ ಚಿಂತನೆ ಯನ್ನು ಮಾಡುತ್ತಾ, ಯೋಗಬಲದಿಂದ, ತೇಜೋಮಯ ರೂಪದಿಂದ, ಬ್ರಹ್ಮ ರಂಧ್ರ ದಿಂದ, ದೇಹತ್ಯಾಗ ಮಾಡಿ ತಮ್ಮ ಒಂದು ಅಂಶವನ್ನು ಕಂಬದಲ್ಲಿಟ್ಟು ವಿಷ್ಣುದೂತರು ತಂದ ವಿಮಾನ ದಲ್ಲಿ ಕುಳಿತು ಜಗನ್ನಾಥ ವಿಠ್ಠಲನ ಬಳಿ ತೆರಳಿದರು.
"
ಅಂದು ಶಾಲಿವಾಹನ.ಶಕ ೧೭೩೧, ಶುಕ್ಲ ಪಕ್ಷದ ಭಾದ್ರಪದ ಮಾಸದ ನವಮಿ ತಿಥಿ."
ಅಂದಿನಿಂದ ಇಂದಿನವರೆಗೆ ಮಾನವಿಯಲ್ಲಿ ಇವರ ನಿತ್ಯ ಪೂಜೆ ಆ ಸ್ತಂಭ ಕ್ಕೆ ಮತ್ತು ಪ್ರತಿ ವರ್ಷ ಆರಾಧನಾ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.


🙏🙏🙏
ಈತನ ಭಜಿಸಲು ಯಾತನೆಗಳು ಇಲ್ಲ|
ಈತನ ಸೇರಲು ಯಾತರ ಭೀತಿಯೋ|
ಈತನ ಹೊರೆತಿನ್ನು ದಾತರು ನಮಗಿಲ್ಲ| ಈತನೆ ರಕ್ಷಕ ಈತನೆ ತಾಯಿ ತಂದೆ
ಈತನೆ ಸದ್ಗುರು ಈತನೆ ಗತಿಪ್ರದ
ಈತನೆ ಮೂಕಗೆ ಮಾತು ನುಡಿಸಿದಾತ
ಈತನ ಭಕ್ತಿ ಗೆ ಸೋತು ಎರಡು ವ್ಯಾಳೆ ವಾತಾಂತರ್ಗತ ನಮ್ಮ ಶ್ಯಾಮ ಸುಂದರ ವಿಠ್ಠಲ |ಪ್ರೀತಿ ಇಂದ ಇವರಿಗೆ ಮೃಷ್ಟಾನ್ನ ಉಣಿಸಿದ.||
ಈ ಮಹಾ ಮಹಿಮರ ಪ್ರೇಮ ಪಡೆವರನ್ನ|
ಶ್ಯಾಮ ಸುಂದರ ವಿಠ್ಠಲ ಸ್ವಾಮಿ ಸತತ ಪೊರೆವ.||

                                             ---------- Hari Om--------














Wednesday, August 29, 2018

Sri Raghavendra swamy & Sri Manchalamma Devi

Sri Raghavendra Swamy & Sri Manchalamma Devi

                                                           Sri Raghavendra Swamy

                                                            Sri Manchalamma Devi

 

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸಶರೀರರಾಗಿ ಬೃಂದಾವನ ಪ್ರವೇಶ ಮಾಡುವ ಮೊದಲು ಶ್ರೀ ಕ್ಷೇತ್ರ ಮಂತ್ರಾಲಯದ ಕ್ಷೇತ್ರ ದೇವತೆಯಾದ ಶ್ರೀ ದುರ್ಗಾ ರೂಪಿ ಶ್ರೀ ಮಂಚಾಲಮ್ಮನ ಸನ್ನಿಧಾನದಲ್ಲಿ ಶ್ರಾವಣ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು " ಶ್ರೀ ವರಮಹಾಲಕ್ಷ್ಮೀ ವ್ರತ " ವನ್ನು ವಿಶೇಷ ಪೂಜೆಯನ್ನು ಮಾಡಿ, ಜಗನ್ಮಾತೆಯಾದ ಶ್ರೀ ದುರ್ಗಾದೇವಿ ( ಶ್ರೀ ಮಂಚಾಲಮ್ಮ ) ಯನ್ನು ತದೇಕ ಚಿತ್ತದಿಂದ ನೋಡುತ್ತಾ ಹೃದಯ ತುಂಬಿ ಆನಂದ ಭಾಷ್ಪ ಸುರಿಸುತ್ತಾ...

ನಮೋಸ್ತು ವರದೇ ಕೃಷ್ಣೇ ಕೌಮಾರಿ ಬ್ರಹ್ಮಚಾರಿಣೀ ।
ಬಾಲಾರ್ಕ ಸದೃಶಾಕಾಯೇ ಪೂರ್ಣಚಂದ್ರ ನಿಭಾನನೇ ।।

ಭಾಸಿ ದೇವಿ ಯಥಾ ಪದ್ಮಾ ನಾರಾಯಣ ಪರಿಗ್ರಹಾ ।
ಸ್ವರೂಪೇ ಬ್ರಹ್ಮಚರ್ಯ೦ ಚ ವಿಷದಂ ತವ ಖೇಚರಿ ।।

ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ ।
ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈ: ಪೂಜ್ಯಸೇಪಿ ಚ ।।

ತ್ರೈಲೋಕ್ಯ ರಕ್ಷಣಾರ್ಥಾಯ ಮಹಿಷಾಸುರನಾಶಿನಿ ।
ಪ್ರಸನ್ನಾ ಮೇ ಸುರಶ್ರೇಷ್ಟೇ ದಯಾ೦ ಕುರು ಶಿವಾ ಭವ ।।

ಪ್ರಣಮಂತಿ ಚ ಯೇ ತ್ವಾ೦ ಹಿ ಪ್ರಭಾತೇ ತು ನರಾ ಭುವಿ ।
ನ ತೇಷಾ೦ ದುರ್ಲಭಂ ಕಿಂಚಿತ್ ಪುತ್ರತೋ ಧನತೋಪಿ ವಾ ।।

ದುರ್ಗಾತ್ತಾರಯಸೇ ದುರ್ಗೇ ತತ್ತ್ವಂ ದುರ್ಗಾಸ್ಮೃತಾ ಬುಧೈ:
ತ್ವಂ ಕೀರ್ತಿ: ಶ್ರೀರ್ಧೃತಿ: ಸಿದ್ಧಿ ರ್ಹ್ರೀ ವಿದ್ಯಾ ಸಂತತಿರ್ಮತಿ: ।।

ಸಂಧ್ಯಾ ರಾತ್ರಿ: ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿ: ಕ್ಷಮಾ ।
ದಯಾ೦ ಪ್ರಣತಶ್ಚ ತಥಾ ಮೂರ್ಧ್ನಿ ತವ ದೇವಿ ಸುರೇಶ್ವರೀ ।।

ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯಾಸತ್ಯ ಭವಸ್ವ ನಃ ।
ಶರಣಂ ಭವ ಮೇ ಶರಣ್ಯೇ ಭಕ್ತವತ್ಸಲೇ ।।

ಎಂದು ಶ್ರೀ ಗುರುಸಾರ್ವಭೌಮರು ಶ್ರೀ ದುರ್ಗಾದೇವಿ ( ಶ್ರೀ ಮಂಚಾಲಮ್ಮ ) ಯನ್ನು ಭಕ್ತಿಯಿಂದ ಪ್ರಾರ್ಥಿಸಲು ಜಗನ್ಮಾತೆಯಾದ ಶ್ರೀ ದುರ್ಗಾದೇವಿಯು ಪ್ರತ್ಯಕ್ಷಳಾಗಿ " ವತ್ಸಾ! ನಿನ್ನ ಸ್ತೋತ್ರದಿಂದ ನಾನು ಸಂತುಷ್ಟಳಾಗಿದ್ದೇನೆ. ನನ್ನ ಪತಿಯೇ ( ಶ್ರೀ ಹರಿಯೇ ) ನಿನ್ನ ಭಕ್ತಿಗೆ ಮೆಚ್ಚಿ ಕಂಬದಿಂದ ಪ್ರಾದುರ್ಭವಿಸಿ ಕ್ಷಣ ಬಿಡದೇ ನಿನ್ನಲ್ಲಿ ನೆಲೆನಿಂತಿದ್ದಾನೆಂದ ಮೇಲೆ ನಾನು ನಿನ್ನಲ್ಲಿ ಅನುಗ್ರಹ ಮಾಡುವುದು ಸ್ವಾಭಾವಿಕವೇ ಆಗಿದೆ.



ಹಿಂದೆ ನಿನ್ನ ಮನೆತನಕ್ಕೆ ( ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕಾವತಾರದಲ್ಲಿ ) ನಾನೇ ( ಶ್ರೀ ದುರ್ಗಾ ) ಕುಲದೇವತೆಯಾಗಿದ್ದಾಗಲೂ ನೀನು ನನ್ನನ್ನು ಭಕ್ತಿಯಿಂದ ಆರಾಧಿಸಿದೆ. ಈಗಲೂ ನೀನು ನನ್ನನ್ನು ನಿನ್ನ ಕುಲದೇವತೆಯನ್ನಾಗಿ ಮಾಡಿಕೊ. ನಿನ್ನ ಕಾರ್ಯಕ್ಕೆ ನಾನು ಯಾವಾಗಲೂ ಬೆಂಗಾವಲಾಗಿರುತ್ತೇನೆ.

ಮುಂದೆ ಧರ್ಮವು ಸಂಪೂರ್ಣ ಗ್ಲಾನಿಯಾಗುವ ಸ್ಥಿತಿ ಬಂದಾಗ ನಾನೇ ಅವತರಿಸಿ ಬಂದು ಧರ್ಮ ಸಂಸ್ಥಾಪನೆ ಮಾಡಬೇಕೆಂದು ನನ್ನ ಪತಿಯ ( ಶ್ರೀ ಹರಿಯ ) ಆಜ್ಞೆಯಾಗಿದೆ. ಅಲ್ಲಿಯವರೆಗೂ ಧರ್ಮ ರಕ್ಷಣೆಯ ಭಾರ ನಿನ್ನಂತವರ ಮೇಲೆ ಬಿದ್ದಿದೆ.
ಆದ್ದರಿಂದ ನಮ್ಮಿಬ್ಬರ ( ಶ್ರೀ ದುರ್ಗಾ ಮತ್ತು ಶ್ರೀ ರಾಯರ ) ಕಾರ್ಯ ಮತ್ತು ಗುರಿ ಒಂದೇ. ವಾಯುದೇವರು ನಿನ್ನೊಳು ನಿತ್ಯಾವೇಶಯುಕ್ತನಾಗಿದ್ದರಿಂದಲೂ; ವಾಯುದೇವರ ಸಂಪೂರ್ಣ ಸಹಾಯವಿರುವುದರಿಂದಲೂ ನಿನ್ನಿಂದ ಅಸಾಧಾರಣವಾದ ಕಾರ್ಯಗಳಾಗತಕ್ಕಳದ್ದಾಗಿದೆ.
ನಾನು ( ಶ್ರೀ ದುರ್ಗಾ ರೂಪಿ ಶ್ರೀ ಮಂಚಾಲಮ್ಮ ) ನಿನ್ನನ್ನು ( ಶ್ರೀ ರಾಯರನ್ನು ) ಮುಂದು ಮಾಡಿಕೊಂಡು ಇಲ್ಲೇ ಶ್ರೀ ಕ್ಷೇತ್ರ ಮಂಚಾಲೆಯಲ್ಲೇ ವಾಸವಾಗಿರುತ್ತೇನೆ.

ನೀನು ( ಶ್ರೀ ರಾಯರು ) ಮಾತ್ರ ನನ್ನ ಲಾಂಛನವಾದ ಮೇಷ ಮಸ್ತಕಗಳನ್ನು ನಿನ್ನ ಮಠದ ಮುಂದಿನ ಬಾಗಿಲಿಗೆ ನಿನಗೆ ಎದುರಾಗಿ ಪ್ರತಿಷ್ಠಾಪಿಸು. ಅದು ಎಲ್ಲಾ ಅಸುರೀ ಶಕ್ತಿಗಳಿಗೂ ಪ್ರತಿಬಂಧಕ ರೂಪವಾದುದು. ಇದಲ್ಲದೆ ನಿನ್ನಿಂದ ( ಶ್ರೀ ರಾಯರಿಂದ ) ನಾನೇನನ್ನೂ ( ಶ್ರೀ ಮಂಚಾಲಮ್ಮ ) ಅಪೇಕ್ಷಿಸುವುದಿಲ್ಲ ಎಂದು ಹೇಳಿ ಅಭಯವಿತ್ತು ಅದೃಶ್ಯಳಾದಳು!!
ಜಗನ್ನಾಥನಾದ ಶ್ರೀ ಹರಿಯಿಂದ ನಿಯುಕ್ತರಾದ ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಯರು ತಮ್ಮ ಕಾರ್ಯ ಸಾಧನೆಯಲ್ಲಿ ಜಗನ್ಮಾತೆಯಾದ ಶ್ರೀ ದುರ್ಗಾ ರೂಪಿ ಮಂಚಾಲಮ್ಮನವರ ಬೆಂಬಲ ಪೂರ್ಣವಾಗಿರುವುದನ್ನು ತಿಳಿದು ಅತ್ಯಾನಂದವಾಯಿತು. ಈ ಎಲ್ಲವೂ ಶ್ರೀ ಹರಿಯ ಪರಮಾನುಗ್ರಹವೆಂದು ತಿಳಿದು ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮನನ್ನು ಸ್ಮರಿಸಿದರು!!


--------------- Hari Om -------------

Sunday, July 22, 2018

Tapta Mudra Dharane

Tapta Mudra Dharane

                                                   Mudra Dharane at Uttaradi mutt


 
ತಪ್ತಮುದ್ರಾಧಾರಣೆ:- ಒಂದು ಹಿನ್ನೆಲೆ.


ವೈಷ್ಣವರಿಗೆ ಆಷಾಡ ಶುಧ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ಅಚ್ಚೊತ್ತಿರಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ. ದೇಹ ಸಂಸ್ಕಾರ ನಾನಾ ಬಗೆ. ಜಾತಕರ್ಮ(ಜನನ), ಉಪನಯನ, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುಧ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.


ತಪ್ತಮುದ್ರಾಧಾರಣೆ ಬಗ್ಗೆ ಸಣ್ಣ ಹಿನ್ನೆಲೆ – ಹಿಂದೊಮ್ಮೆ ಇಂದ್ರಾದಿ ದೆವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ “ಎಲೈ ದೇವತೆಗಳೆ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುಧ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ” ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ತಪ್ತಮುದ್ರಾಧಾರಣೆಯ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀಮನ್ ಮಧ್ವಾಚಾರ್ಯರ ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮದ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀವಾದಿರಾಜರ ಚಕ್ರಸ್ತುತಿ, ಶ್ರೀಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗು ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.


ತಪ್ತಮುದ್ರಾಧಾರಣ ಮಾಡುವ ವಿಧಾನ – ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗಂಡಸರು ಬಲಭುಜಕ್ಕೆ ಚಕ್ರ ಎಡಬುಜಕ್ಕೆ ಶಂಖ, ಮದುವೆಯಾದ ಹೆಂಗಸರು ಬಲಗೈಯಿಗೆ ಚಕ್ರ ಎಡಗೈಯಿಗೆ ಶಂಖ, ಮದುವೆಯಾಗದ ಹೆಂಗಸರು ಬಲಗೈಯಿಗೆ ಚಕ್ರ ಹಾಗು ಚಿಕ್ಕ ಮಕ್ಕಳಿಗೆ ಹೊಟ್ಟೆಯಮೇಲೆ ಚಕ್ರವನ್ನು ಮುದ್ರಿಸಬೇಕು.


ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತಮುದ್ರಾಧಾರಣದ ಹಿರಿಮೆ. ಇವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ.


||
ಶ್ರೀ ಕೃಷ್ಣಾಪ೯ಣಮಸ್ತು || 


    ------- Hari Om -------

Friday, June 29, 2018

20 Essential Sutra's for Perfect Living

20 Essential Sutra's for Perfect Living


 
ಈ ವರ್ಷದಿಂದ ಪ್ರಾರಂಭಮಾಡಿ
ಈ ಇಪ್ಪತ್ತು ಸೂತ್ರಗಳು..
ಯಾಕೆಂದರೆ ಈ ಜೀವನ ಚಿಕ್ಕದು.

1.
ದಿನಾಲು 10 ರಿಂದ 30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ.
10
ನಿಮಿಷಗಳ ಮೌನ ಆಚರಿಸಿ,
ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ.!!

2.
ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಡುತ್ತದೆ.
ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.

3.
ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.

4.
ಹಗಲು ಧಾರಾಳವಾಗಿ ನೀರು ಕುಡಿಯಿರಿ.
ರಾತ್ರಿ ಮಲಗುವಾಗ ನೀರು ಮಿತವಾಗಿರಲಿ.

5.
ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ,
ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ, ರಾತ್ರಿ ಊಟ ಭಿಕ್ಷುಕನಂತೆ ಇರಲಿ.

6.
ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.

7.
ಜಾಸ್ತಿ ಮುಗುಳು ನಗಿ.
ಹೆಚ್ಚೆಚ್ಚು ನಕ್ಕುಬಿಡಿ.
ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.

8.
ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.

9.
ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕಳೇಯಬೇಡಿ.
ಜೀವನ ಚಿಕ್ಕದು.
ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ.
ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.

10.
ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರೊಡನೆ ಕಾಲ ಕಳೆಯಿರಿ.

11.
ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ.
ಸೋತು ಗೆದ್ದುಬಿಡಿ.

12.
ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.

13.
ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

14.
ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.

15.
ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂಪ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು.
ಅವರಿಗೆ ಯಾವಾಗಲೂ ಸಮಯ ಕೊಡಿ.

16.
ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.

17.
ಸಿಟ್ಟು ತನ್ನ ವೈರಿ,
ಶಾಂತಿ ಪರರ ವೈರಿ ಎಂಬುದನ್ನು ಎಂದಿಗೂ ಮರೆಯದಿರಿ.

18.
ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ,
ಏಕೆಂದರೆ ನನ್ನನ್ನು ಪ್ರೀತಿಸುವವರ ಪ್ರೀತಿಯಲ್ಲಿ ನಾನು ತುಂಬಾ ಬ್ಯೂಜಿಯಾಗಿದ್ದೇನೆ.
ಎಂಬುದು ನಿಮ್ಮ ಮನೋಧೋರಣೆಯಾಗಿರಲಿ.

19.
ನೀವು ಬೇಯಿಸುವ ಅನ್ನದ ನೀರು
ಅದು ನಿಮ್ಮ ಬೆವರಿನ ಹನಿಯಾಗಿರಬೇಕೆ ಹೊರತು,
ಬೇರೆಯವರ ಕಣ್ಣೀರಾಗದಂತೆ ನೋಡಿಕೊಳ್ಳಿ.

20.
ಪ್ರತಿ ದಿನವೂ ಇದು ನಮ್ಮ ಕೊನೆಯ ದಿನವೆಂದು ತಿಳಿದು ಗಳಿಸಬೇಕು,
ಪ್ರತಿ ದಿನವೂ ಇದು ನಮ್ಮ ಮೊದಲ ದಿನವೆಂದು ತಿಳಿದು ಉಳಿಸಬೇಕು.

----------- Hari Om ----------