Monday, July 28, 2025

Nagara Chauthi & Panchami

 

ನಾಗರ ಚೌತಿ ಮತ್ತು ನಾಗರ ಪಂಚಮಿ ಆಚರಣೆ

 

                   

                    Naga Devathe
 

ಓಂ ಸರ್ಪರಾಜಾಯ ವಿದ್ಮಹೆ l
ನಾಗರಾಜಾ ದೀಮಹೇll
ತನ್ನೋ ಅನಂತ ಪ್ರಚೋದಯಾತ್l


ಈ ವರ್ಷ ಸೋಮವಾರ ನಾಗರ ಚೌತಿ, ಮಂಗಳವಾರ- ನಾಗರ ಪಂಚಮಿ ಅಥವಾ ಗರುಡ ಪಂಚಮಿ ಬಂದಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದು” ಎಂಬಂತೆ ಈ ಹಬ್ಬವನ್ನು ಎಲ್ಲಾ ಜಾತಿ- ವರ್ಣ- ವರ್ಗ ಮತದವರು ಸರಳವಾಗಿಯಾದರೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ನಾಗನ ಹಬ್ಬ ಪ್ರತಿ ವರ್ಷ ಶ್ರಾವಣ ಮಾಸದ ಐದನೇ, ಪಂಚಮಿ ತಿಥಿ ದಿನ ಬರುತ್ತದೆ. ನಾಗದೇವರ ಆರಾಧನೆ ಮಾಡುವುದರಿಂದ ಸಕಲ ದೋಷಗಳು ಪರಿಹಾರ ವಾಗುತ್ತದೆ. ಸಂತಾನ ಭಾಗ್ಯ ಮತ್ತು ಮಕ್ಕಳ ಆರೋಗ್ಯ, ಕುಟುಂಬದ ಸೌಭಾಗ್ಯ ಸಂಪತ್ತು, ಶತ್ರು ನಾಶ, ವಂಶದ ಪೂರ್ವಜರಿಗೆ ಸರ್ಪ ದೋಷ ಅಥವಾ ಯಾವುದೇ ದೋಷ ಇದ್ದರೂ ನಾಗನ ಆರಾಧನೆಯಿಂದ ಮುಕ್ತಿ ದೊರೆಯುತ್ತದೆ.

ಏಕೆಂದರೆ ನಾಗ ದೇವತೆಗಳಿಗೆ ಕೋಪ ಹೆಚ್ಚು. ಆದರೆ ಅವರನ್ನು ನಂಬಿ ಪೂಜೆ ಮಾಡಿ ಪ್ರಾರ್ಥಿಸಿದರೆ ನಾಗದೇವ ಶಾಂತ ನಾದರೆ ಒಳ್ಳೆಯದಾಗುತ್ತದೆ ನಂಬಿಕೆ ಇದೆ. ಸೂರ್ಯದೇವನಂತೆ ಪ್ರತ್ಯಕ್ಷ ದೇವ ಎಂದರೆ ನಾಗ. ನಾಗನ ಬಗ್ಗೆ ಎಲ್ಲರಿಗೂ ಭಯ ಅವನ ಕೃಪೆಗೆ ಪಾತ್ರರಾಗಲು ಭಯ ಭಕ್ತಿಯಿಂದ ವ್ರತ ಪೂಜೆಗಳನ್ನು ಮಾಡುತ್ತಾರೆ. ಈ ಕಾರಣದಿಂದ ನಾಗಾರಾಧನೆ ಶ್ರೇಷ್ಠ ಹಾಗೂ ಪವಿತ್ರವಾದದ್ದು.

ನಾಗರ ಚೌತಿ:- ಶ್ರಾವಣ ಶುದ್ಧ 4ನೇ ದಿನ ಬರುವುದು ನಾಗರ ಚೌತಿ. ಈ ದಿನ ಮನೆಯಿಂದ ಹೊರಗಡೆ ಇರುವ ಅಂದರೆ ನಾಗರಕಟ್ಟೆ, ದೇವಸ್ಥಾನಗಳ ಮುಂದೆ ಅರಳಿ ಮರದ ಕೆಳಗೆ ಇರುವ ನಾಗರ ಕಲ್ಲುಗಳಿಗೆ ಪೂಜಿಸುತ್ತಾರೆ, ಮುಂಜಾನೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜಾ ಸಾಮಗ್ರಿಗಳೊಂದಿಗೆ ಹೋಗಿ ಪೂಜೆ ಮಾಡುವುದು ಶ್ರೇಷ್ಠ. ( ನಾಗರಕಟ್ಟೆ ಅಥವಾ ದೇವಸ್ಥಾನಕ್ಕೆ ಹೋಗಲು ಎಲ್ಲರಿಗೂ ಆಗುವುದಿಲ್ಲ ಅವರು ಮನೆಯೊಳಗೆ ನಾಗಪ್ಪನ ವಿಗ್ರಹ ಇಟ್ಟುಕೊಂಡು ಮಾಡ ಬಹುದು. ಮಣ್ಣಿನಿಂದ ಮಾಡಿದರೆ ನೀರಿನಲ್ಲಿ ವಿಸರ್ಜಿಸಬೇಕು.

ಚೌತಿ ನಾಗಪ್ಪ”ನಿಗೆ ಮುಖ್ಯವಾಗಿ ಬೇಕಾಗಿರುವುದು ಹಸಿ ಪದಾರ್ಥಗಳು. ಶುದ್ಧವಾದ ಹಸಿ ಹಾಲು, ನೆನೆಸಿದ ಇಡಿ ಕಡಲೆ, ಮತ್ತು ಹಸಿ ತುಂಬಿಟ್ಟುಂಡೆ ಮತ್ತು ಚಿಗಳಿ ಉಂಡೆ (ನೆನೆಸಿದ ಅಕ್ಕಿ- ಬೆಲ್ಲ ಹಾಕಿ ಕುಟ್ಟಿ ಉಂಡೆ ಮಾಡಿದರೆ ತಂಬಿಟ್ಟು ಮತ್ತು ಎಳ್ಳು ಬೆಲ್ಲ ಕುಟ್ಟಿ ಚಿಕ್ಕ ಉಂಡೆ ಮಾಡಿದ ಚಿಗಳಿ ಇವು ನಾಗನಿಗೆ ಪ್ರಿಯ ಎಂದು ಅರ್ಪಸುತ್ತಾರೆ. ಕಬ್ಬಿನ ಹಾಲಿನಿಂ ಅಭಿಷೇಕ ಮಾಡುತ್ತಾರೆ. ನೈವೇದ್ಯಕ್ಕೆ ತೆಂಗಿನಕಾಯಿ- ಬಾಳೆಹ ಣ್ಣು. ಅರಿಶಿನ ಹಚ್ಚಿದ ಗೆಜ್ಜೆ ವಸ್ತ್ರ ಇರಬೇಕು ( ಹಳದಿಯ ಹೆಡೆಯ ಬಿಚ್ಚೋ ಬೇಗ) ಅಂದು ತಲೆಗೆ ಎರೆದುಕೊಂಡು ಪೂಜೆ ಮಾಡಬೇಕು ಮನೆಯ ಹಿರಿಯರೊಬ್ಬರು ಮಡಿಯಲ್ಲಿ ಪೂಜೆ ಮಾಡಿದಾಗ ಉಳಿದವರೆಲ್ಲ ನಾಗರ ಕಲ್ಲನ್ನು ಮುಟ್ಟದೆ ಸ್ವಲ್ಪ ದೂರ ನಿಂತು ಹಾಲು- ನೀರು ಹೂವಿನಿಂದ ಪ್ರೋಕ್ಷಣೆ ಮಾಡಬೇಕು

 

                                                                    Nagara Kallu

  

ಪೂಜೆಯ ಸಮಯದಲ್ಲಿ ತೋರು ಬೆರಳು ತೋರಿಸುವುದು, ಉಗುರು ಕಚ್ಚುವುದು
ತಲೆ ಕೂದಲು ಕೈಗೆ ಬಂದರೆ ಅಲ್ಲೇ ಹಾಕುವುದು, ಹಲ್ಲಿಗೆ ಏನಾದರೂ ಸಿಕ್ಕಿಕೊಂಡಿ ದ್ದರೆ ಪಿನ್ನಿನಿಂದ ತೋಡಿಕೊಳ್ಳುವುದು. ಇಂಥ ಅಚಾತುರ್ಯಗಳನ್ನು ಮಾಡದೆ ಕೈಮುಗಿದು ಭಕ್ತಿಯಿಂದ ನಿಂತು ಪೂಜೆ ನೋಡಬೇಕು. ಚೌತಿ ದಿನ ( ಸಾಮಾನ್ಯ ವಾಗಿ ಹಿರಿಯರು) ಊಟ ಮಾಡುವುದಿಲ್ಲ.

ಮಧ್ಯಾಹ್ನ ಮತ್ತು ಸಂಜೆ ಮುಸರೆಯ ಲ್ಲದ ಲಘು ಉಪಹಾರ ಸೇವಿಸುತ್ತಾರೆ. (ಉಪ್ಪಿಟ್ಟು- ಅವಲಕ್ಕಿ- ಅರಳು, ಹೆಸರು ಬೇಳೆ ಪಾಯಸ) ನಾಗಾರಾಧನೆಯ ಪ್ರಮುಖ ಉದ್ದೇಶ ಮಕ್ಕಳಿಗೆ ಬರುವ ಬಾಲ ಗ್ರಹ ಪೀಡೆ, ಭಯ, ಕಿರುಚಿ ಅಳುವುದು, ನಿದ್ದೆ ಮಾಡದೆ ರಗಳೆ ಮಾಡುವುದು ಇಂಥ ದೋಷ ಪರಿಹಾರವಾಗುತ್ತದೆ. ಮನೆಯಲ್ಲಿ ಸಂತಾನ, ಸಂಪತ್ತು, ಕಲ್ಯಾಣ ಆರೋಗ್ಯ ಭಾಗ್ಯ, ಗೋ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ. (ಈ ದಿನದ ಅಡುಗೆ ಯಲ್ಲಿ ಕರಿಯುವುದು -ಹುರಿಯುವುದು- ಕಾವಲಿ ಇಟ್ಟು ಸುಡುವುದು ಇವು ಮಾಡಬಾರದು.

ನಾಗಪ್ಪನಿಗೆ ತಂಪು ಇಷ್ಟ ಹೀಗೆ ಮಾಡಿದರೆ ನಾಗಪ್ಪನಿಗೆ ಶಾಖ ಜಾಸ್ತಿಯಾಗುತ್ತದೆ ಎಂದು ಮಾಡುವುದಿಲ್ಲ) ನಾಗಪ್ಪನನ್ನು ರಂಗೋಲಿಯಲ್ಲಿ ಅಥವಾ ಅರಿಶಿನದಲ್ಲಿ ಬರೆಯುವಾಗ ನಾಗನ ಮುಖ ಮನೆ ಒಳಗೆ ಬರುವಂತೆ ಬರೆದು ಪೂಜಿಸಬೇಕು ಒಳ್ಳೆಯದು.

 

                                                                     another Picture

  

ನಾಗರ ಪಂಚಮಿ ಅಥವ ಗರುಡ ಪಂಚಮಿ:

 

ನಾಗರ ಪಂಚಮಿ ಅತ್ಯಂತ ಸಂಭ್ರಮ ತುಂಬಿದ ನಾಡಿಗೆ ದೊಡ್ಡ ಹಬ್ಬ. ಮುಂಜಾನೆ ಎದ್ದು ಹೊಸ್ತಿಲು ತೊಳೆದು, ಮುಂಬಾಗಿನ ಮುಂದೆ ನೀರು ಹಾಕಿ, ರಂಗೋಲಿ ಬರೆಯ ಬೇಕು. ಹೊಸಿಲಿನ ಬಲ ಮತ್ತು ಎಡ ಬದಿ ನಾಗಪ್ಪನ ಚಿತ್ರ ಬರೆಯಬೇಕು. ಹೆಡೆ ಬಿಚ್ಚಿದ ದೊಡ್ಡ ನಾಗಪ್ಪ ಕೆಳಗೆ ಅಥವಾ ಪಕ್ಕದಲ್ಲಿ ಮರಿ ನಾಗನ ಬರೆಯಬೇಕು ನಾಲ್ಕಾರು ಮರಿಗಳನ್ನು ಬರೆದರೆ ಇನ್ನೂ ಒಳ್ಳೆಯದು. ರಂಗೋಲಿಯಲ್ಲಿ ಬರೆದ ನಾಗಪ್ಪನಿಗೆ ಅರಿಶಿನ ತುಂಬಿ, ಕಣ್ಣುಗಳು, ಸೀಳು ನಾಲಿಗೆ, ಮತ್ತು ಹೆಡೆಯ ಚಿತ್ರ ಮೂಡುವಂತೆ ಬರೆಯಬೇಕು. ತಲೆಗೆ ಸ್ನಾನ ಮಾಡುವಾಗ, ಎಣ್ಣೆ ಸೀಗೆ ಬಳಸು ವಂತಿಲ್ಲ. ಹಾಗಂತ ಬರೀ ತಲೆಯಲ್ಲಿ ಮಾಡಬಾರದು ಪುಟ್ಟಬಟ್ಟಲಲ್ಲಿ ಹಾಲುಬೆಲ್ಲ ಬೆರೆಸಿಟ್ಟು ಇದನ್ನು ಹೂವಿನಿಂದ ನೆತ್ತಿಗೆ ಶಾಸ್ತ್ರಕ್ಕೆ ಒತ್ತಿಕೊಂಡು ( ಸಾಮಾನ್ಯವಾಗಿ ಎರೆದು ಕೊಳ್ಳುವ ಹಬ್ಬಗಳಲ್ಲಿ ದೇವರ ಮುಂದೆ ದೀಪ ಹಚ್ಚಿ, ಕೆಳಗೆ ಚಿಕ್ಕದಾಗಿ ಹಸೆ ಬರೆದು ಎರಡು ಮಣೆ ಹಾಕಿ ಹೊಸ ಜಮಖಾನ, ಪಂಚೆ, ಶಲ್ಯ ಏನಾದರೂ ಹಾಸಿ ಅದರ ಮೇಲೆ ಇಬ್ಬರನ್ನು ಕೂರಿಸಿ ಎಣ್ಣೆ ಶಾಸ್ತ್ರ (ಹಾಲು ಬೆಲ್ಲ) ಮಾಡುತ್ತಾರೆ, ಅವರವರೇ ಕೈಯಿಂದ ಹಚ್ಚಿಕೊಳ್ಳುವಂತಿಲ್ಲ) ಮನೆಯಲ್ಲಿ ಎಲ್ಲರೂ ತಲೆಗೆ ಸ್ನಾನ ಮಾಡಬೇಕು.


ಪಂಚಮಿ ಮನೆಯ ಹಿಂಭಾಗದ ನಾಗರಕಟ್ಟೆಗೆ ಹೋಗಿ ಹಿರಿಯರು ಪೂಜೆ ಮಾಡುವುದನ್ನು ನೋಡಿ ನಂತರ ಹಾಲು ನೀರು ನಾಗಪ್ಪನ ಬೆನ್ನಿಗೆ ಬರುವಂತೆ ತನಿ ಎರೆಯ ಬೇಕು. “ಸುಬ್ಬಾ ಸುಬ್ಬಾ ಗೋವಿಂದ, ಸುಬ್ರಹ್ಮಣ್ಯ ಗೋವಿಂದ ಕುಕ್ಕೆ ಲಿಂಗ ಗೋವಿಂದ ಸುಬ್ರಹ್ಮಣ್ಯ ಗೋವಿಂದ, ಸುಬ್ರಹ್ಮಣ್ಯ ಗೋವಿಂದ,‌ಎಂದು ಮೂರು ಸಲ ಹೇಳಿ ಸಲ ತನಿ ಎರೆಯಬೇಕು.

 
ಅವರವರ ಮನೆ ಪದ್ಧತಿಯಂತೆ ನಮ್ಮ ಮನೆಗಳಲ್ಲಿ ಚೌತಿ ದಿನ ಹಸಿಯಾದ ಪದಾರ್ಥವಾದರೆ, ಪಂಚಮಿ ದಿನ ಬಿಸಿ ಅಂತ ಶಾಸ್ತ್ರ. ತೊಳೆದು ಒಣಗಿಸಿದ ಇಡೀ ಕಡಲೆ, ಅಕ್ಕಿ ನುಚ್ಚ ನ್ನು ಚೆನ್ನಾಗಿ ಹುರಿದು ಅರಳು ಸೇರಿಸಿ ಮಿಶ್ರ ಮಾಡಿ ಅಕ್ಷತೆಯಂತೆ ಸ್ವಲ್ಪ ತೆಗೆದು ಕೊಂಡು ನಾಗಪ್ಪನಿಗೆ ಮೇಲೆ ಮೂರು ಸಲ ಹಾಕಬೇಕು ಕೊನೆಯಲ್ಲಿ ಸುಬ್ರಹ್ಮಣ್ಯ ನಿನ್ನ ಬೆನ್ನು ತಣ್ಣಗಿರಲಿ ನಮ್ಮ ಕುಟುಂಬದ ರಕ್ಷಣೆಯನ್ನು ಮಾಡೋ ತಂದೆ ಎಂದು ಪ್ರಾರ್ಥಿಸಬೇಕು. ಮನೆಯ ಒಳಗೆ ದೇವರ ಮುಂಭಾಗದ ಲ್ಲಿ ಮತ್ತು ಮುಂಭಾಗಿಲು ಮುಂದೆ ಬರೆದ ನಾಗಪ್ಪಗಳಿಗೆ ಮೂರು ಸಲ ಹೂವಿ ನಿಂದ ಹಾಲು ಪ್ರೋಕ್ಷಿಸಿ ಹೂವು ಏರಿಸಿ ಹುರುಕಲು ಹಾಕಿ ಕೈ ಮುಗಿಯ ಬೇಕು. ( ಅಕ್ಷತೆ ಹಾಕಬಾರದು)

 
ನಾಗನ ಹಬ್ಬದಲ್ಲಿ ಕರಿದ- ಹುರಿದ ತಿಂಡಿ ಮಾಡುವುದಿಲ್ಲ. ಹಬೆಯಲ್ಲಿ ಬೇಯಿಸಿದ ಸಿಹಿ- ಕಾರ ಕಡುಬಿನಂತ ಪದಾರ್ಥ ಹೊಯ್ಗಡುಬು, ಕೊಟ್ಟೆ ಕಡುಬು, ಅರಿಶಿನೆಲೆ ಕಡುಬು, ಕಾಯಿ ಬೆಲ್ಲ ಮತ್ತು ಕಾಯಿ ಮೆಣಸಿನ ಕಾಯಿ ತುಂಬಿದ ಉಕ್ಕರಿಸಿದ ಕಡುಬು ಮಾಡುತ್ತಾರೆ. ಬಿಸಿ ತಂಬಿಟ್ಟು ಅಂದರೆ ಅಕ್ಕಿ ಪುಟಾಣಿ ಇವುಗಳನ್ನೆಲ್ಲ ಹುರಿದು ಪುಡಿ ಮಾಡಿದ ಹಿಟ್ಟಿಗೆ. ಒಣ ಕೊಬ್ಬರಿ ಕಡಲೆ ಬೀಜ ಸೇರಿಸಿ ಬೆಲ್ಲದ ಪಾಕ ಹಾಕಿ ಕಟ್ಟಿದ ಉಂಡೆ ಮಾಡುತ್ತಾರೆ. ಮಧ್ಯಾಹ್ನ ಊಟ ಮುಗಿಸಿ, ಸೂರ್ಯ ಇಳಿ ಮುಖವಾಗುವ 4: 30- 5:00 ಸಮಯಕ್ಕೆ, ಕೈ ಕಾಲು ಮುಖ ತೊಳೆದು ತಲೆ ಬಾಚಿ, ಹೂ ಮುಡಿದು, ಹೆಣ್ಣು ಮಕ್ಕಳು ಅಲಂಕಾರ ಮಾಡಿ ಮಾಡಿಕೊಂಡು, ದೇವರ ಮುಂದೆ ದೀಪ ಹಚ್ಚಿ ಅಣ್ಣ ತಮ್ಮಂದಿರನ್ನು ಕೂರಿಸಿ (ನಾಗಪ್ಪನಿಗೆ ಅಭಿಷೇಕ ಮಾಡಿದ ತೀರ್ಥದಿಂದ) ಸಹೋದರರ ಬೆನ್ನು ತೊಳೆಯ ಬೇಕು

 

ಮಳೆಗಾಲವಾಗಿ ನದಿಗಳು ತುಂಬಿ ಹರಿಯುತ್ತಿದ್ದು ತೀರ್ಥದ ನೀರು ತಣ್ಣಗೆ ಇರುತ್ತದೆ. ತೀರ್ಥವನ್ನು ಹೂವಿನಿಂದ ಅದ್ದಿ ಬೆನ್ನಿನ ಮಧ್ಯ ಹುರಿ ಭಾಗಕ್ಕೆ ಒದ್ದೆ ಮಾಡಬೇಕು.( ಕುಂಡನಿ ಶಕ್ತಿ ಇರುವ ಜಾಗ) “ಅಣ್ಣಾ ನಿನ್ನ ಬೆನ್ನು ತಣ್ಣಗಿರಲಿ ಎಂದು ಹೇಳಿ ಮೂರು ಸಲ ಮಾಡಿ ಹರಸ ಬೇಕು. ತಿನ್ನಲು ಸಿಹಿ ತಂಬಿಟ್ಟಿನ ಉಂಡೆ ಕೊಡ ಬೇಕು. ನಂತರ ಅಣ್ಣ ತಮ್ಮಂದಿರು, ಅಕ್ಕ ತಂಗಿಯನ್ನು ಕೂರಿಸಿ, ಅರಿಶಿಣ ಕುಂಕುಮ ಹೂವು ಕೊಟ್ಟು ಸೀರೆ ಬ್ಲೌಸ್ ಬಟ್ಟೆ ಡ್ರೆಸ್ ಏನಾದರೂ ಸರಿ ಉಡುಗೊರೆಗಳನ್ನು ಕೊಟ್ಟು ಗಂಡನ ಮನೆಯಲ್ಲಿ ನೂರು ಕಾಲ ಸುಖವಾಗಿರು ಎಂದು ಆಶೀರ್ವದಿಸಬೇಕು ಎಲ್ಲರೂ ತಂಬಿಟ್ಟಿನ ಸವಿ ಸವಿದು ಖುಷಿಯಿಂದ ಜೋಕಾಲಿ ಆಡಬೇಕು, ಅಂತ್ಯಾಕ್ಷರಿ, ಹಾಸ್ಯ, ಹಾಡು ಹರಟೆಗಳಲ್ಲಿ ಕಳೆದ ಸಮಯ ತಿಳಿಯುವುದೇ ಇಲ್ಲ.

ಕತ್ತಲಾಗುವ ಹೊತ್ತಿಗೆ ಮಧ್ಯಾಹ್ನ ಮಾಡಿದ ಪುಳಿಯೋಗರೆ, ಕಡಬು, ಪಾಯಸ, ಉಂಡೆಗಳನ್ನು ಸವಿಯುತ್ತ ನೆನಪುಗಳ ಮೇಲುಕಿನೊಂದಿಗೆ ಖುಷಿ ಖುಷಿಯಾಗಿ ಒಂದಾಗಿ ದಿನ ಕಳೆಯುವುದು “ನಾಗರ ಪಂಚಮಿ” ಹಬ್ಬದ ಸಡಗರ ಸಂಭ್ರಮ

 

                                                              Naga Mantra - Very Powerful

 

ನವ ನಾಗ ಸ್ತೋತ್ರ:-

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ
ಕಂಬಲಮ್ ಶಂಖಪಾಲಂ ಧಾರ್ತರಾಷ್ಟ್ರಂ
ತಕ್ಷಕಂ ಕಾಲಿಯಂ ತಥಾ ಏತಾನಿ ನವ
ನಾಮಾನಿ ನಾಗನಾಂ ಯ: ಪಟೇನ್ನರ: ತಸ್ಯ
ನಾಗಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್!

 

-------------- Hari Om ----------- 

 

 
 


                                                         




                                                       

No comments:

Post a Comment