Monday, March 16, 2026

ಯುಗಾದಿ ಹಬ್ಬದ ಮಹತ್ವ – Importance of Ugadi – Hindu New Year Festival

                                                                  Ugadi Festival Greetings

 
 

ಯುಗಾದಿ ಹಬ್ಬದ ಮಹತ್ವ – Importance of Ugadi – 

Hindu New Year Festival

ಚೈತ್ರಮಾಸಕ್ಕೆ ವಿಷ್ಣು ನಿಯಾಮಕ.

ಚೈತ್ರ ಶುಕ್ಲ ಪ್ರತಿಪದೆಯ ದಿನ ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ.

ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ ದೇವರ ಮನೆಗೆ ಹೋಗಿ ದೇವರ ಮುoದೆ ಇಟ್ಟಿರುವ ಪಂಚಾಂಗ, ತರಕಾರಿಗಳು, ಧಾನ್ಯಗಳು, ಫಲ ತಾಂಬೂಲಗಳು, ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು. ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿಂಬ ರೂಪಿ ಪರಮಾತ್ಮನು ದೊರಕಿಸಿ ಕೊಡುವನು. ಮುಖ ಪ್ರಕ್ಷಾಲನೆಯನ್ನು ಮಾಡಿ ಗಜೇಂದ್ರ ಮೋಕ್ಷ ಪಾರಾಯಣ ಮಾಡಬೇಕು.

ಯುಗಾದಿಯಂದು ಪ್ರತಿಯೊಬ್ಬನೂ ಅಭ್ಯಂಜನ ಮಾಡಲೇಬೇಕು. ಈ ಮೊದಲು ಪೂಜಕನು ಸ್ನಾನ ಮಾಡಿ ಭಗವoತನಿಗೆ ಎಣ್ಣೆ ಸೀಗೆಪುಡಿ, ಬಿಸಿ ನೀರಿನ ಅಭ್ಯoಜನವನ್ನು ಮಾಡಿಸಬೇಕು. ಭಗವಂತನಿಗೆ ಮಾಡಿ, ಉಳಿದ ಎಣ್ಣೆ ಸೀಗೆಪುಡಿಗೆ ಬೇರೆ ಎಣ್ಣೆ, ಸೀಗೆಪುಡಿಯನ್ನು ಬೆರೆಸಿ ಪ್ರತಿಯೊಬ್ಬರೂ ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು.

ಸಪ್ತ ಚಿರಂಜೀವಿ ಸ್ಮರಣೆ

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿ ಗಳನ್ನು ಮಾರ್ಕಂಡೇಯ ನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು .

अश्वत्तामा बलिर्व्यास: हनूमांश्च विभीषण: । कृप: परशुरामश्च सप्तैते चिरंजीविन:

ಅಶ್ವತ್ತಾಮಾ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ |

ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ, ನಿಂಬಕ ದಳ ಭಕ್ಷಣ
(ಬೇವು -ಬೆಲ್ಲ)ವನ್ನು ಮಾಡಬೇಕು.

ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ:-

शतायुर्वज्रदेहाय सर्वसंपत्कराय च सर्वारिष्टविनाशाय निंबकदळभक्षणम्

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |

ಅರ್ಥ :- ನೂರು ವರ್ಷ ಆಯುಸ್ಸು, ವಜ್ರದಂತೆ ಧೃಢವಾದ ಶರೀರ, ಸರ್ವಸಂಪತ್ತು, ಸರ್ವ ಅರಿಷ್ಟನಾಶ - ಇವುಗಳಿಗಾಗಿ ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು.
ನಂತರ ಪಂಚಾoಗ ಶ್ರವಣಮಾಡಬೇಕು

ಪಂಚಾಂಗ ಶ್ರವಣ ಎಂದರೇನು ಮತ್ತು ಅದರ ಮಹತ್ವ ಏನು?

ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಹೇಳಲಾಗಿದೆ, ಅದು ಮುಂದಿನಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀಯು ಒಲಿಯುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರದ ಶ್ರವಣದಿಂದ ಪಾಪನಾಶ ವಾಗುತ್ತದೆ, ಯೋಗದ ಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.

ಬೇವಿನ ಪ್ರಸಾದ

ಪಂಚಾಂಗ ಶ್ರವಣದ ನಂತರ ಕಹಿ ಬೇವಿನ ಪ್ರಸಾದ ಹಂಚಬೇಕು. ಈ ಪ್ರಸಾದವನ್ನು ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ತಯಾರಿಸುತ್ತಾರೆ.

ಭೂಮಿಯನ್ನು ಊಳುವುದು:

ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಊಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ ಅಥವಾ ಗದ್ದೆಯಲ್ಲಿ ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು.

ದಾನ :

ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.

ಈ ದಿನ ಅನೇಕ ವಿಧದ ಮಂಗಲ ಹಾಡುಗಳನ್ನು ಮತ್ತು ಪುಣ್ಯಪುರುಷರ ಕಥೆಗಳನ್ನು ಕೇಳುತ್ತಾ ಈ ದಿನವನ್ನು ಆನಂದದಿಂದ ಕಳೆಯಬೇಕು. ಈಗಿನ ಕಾಲದ ಹಬ್ಬವೆಂದರೆ ಮೋಜು ಮಜಾ ಮಾಡುವ ದಿನವೆಂಬ ಸಂಕಲ್ಪನೆ ಬರುವಂತಾಗಿದೆ, ಆದರೆ ಹಿಂದೂ ಧರ್ಮದ ಶಾಸ್ತ್ರೀಯ ಪದ್ಧತಿಯ ಹಬ್ಬವೆಂದರೆ "ಹೆಚ್ಚೆಚ್ಚು ಚೈತನ್ಯ ಪಡೆಯುವ ದಿನ" ವಾಗಿರುತ್ತದೆ.


ಆದ್ದರಿಂದ ಹಬ್ಬದಂದು ಸಾತ್ತ್ವಿಕ ಆಹಾರ, ಸಾತ್ತ್ವಿಕ ಬಟ್ಟೆ ಹಾಗೂ ಇತರ ಧಾರ್ಮಿಕ ಕೃತಿ ಇತ್ಯಾದಿಗಳನ್ನು ಮಾಡುವುದರೊಂದಿಗೆ ಸಾತ್ತ್ವಿಕವಾದ ಸುಖದಾಯಕ ಕೃತಿಗಳನ್ನು ಮಾಡಲು ಶಾಸ್ತ್ರವು ಹೇಳಿದೆ. ಈ ರೀತಿ ಯುಗಾದಿಯನ್ನು ಆಚರಿಸುವುದರಿಂದ ಆರೋಗ್ಯ, ಕೃಷಿ ಮುಂತಾದವು ಹೆಚ್ಚಾಗುತ್ತದೆ.


----------------- Hari Om ----------------




Monday, March 9, 2026

ಹಯಗ್ರೀವ ಸಂಪದಾಸ್ತೋತ್ರಮ್ ---- Hayagreeva Sampada Stothram

 

ಹಯಗ್ರೀವ ಸಂಪದಾಸ್ತೋತ್ರಮ್

Hayagreeva Sampada Stothram -- Composed by Sri Vadiraja Tirtharu

 

ಶ್ರೀ ಹಯಗ್ರೀವ -- Lord Hayagreeva


ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ || ||

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ |
ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾಪ್ರವಾಹವತ್ || ||

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ಸ ವೈಕುಂಠಕವಾಟೋದ್ಘಾಟನಕ್ಷಮಃ || ||

ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವಪದಾಂಕಿತಮ್ |
ವಾದಿರಾಜಯತಿಪ್ರೋಕ್ತಂ ಪಠತಾಂ ಸಂಪದಾಂ ಪದಮ್ || ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ಹಯಗ್ರೀವಸಂಪದಾಸ್ತೋತ್ರಂ ಸಂಪೂರ್ಣಮ್ ||

---------------------- Hari Om -------------------- 


Friday, March 6, 2026

ವಾದಿರಾಜರ-ಮಹಿಮೆ ಅಪಾರ Saint Vadiraja-The glory is immense

 

                                                                   Sri Vadiraja Tirtharu

 

ವಾದಿರಾಜರ-ಮಹಿಮೆ ಅಪಾರ Saint Vadiraja-The glory is immense


1968-69ನೇ ಇಸವಿಯ ಸಂದರ್ಭದಲ್ಲಿ ನಡೆದ ಒಂದು ಘಟನೆ..


ಆದಿನಗಳಲ್ಲಿ ಶ್ರೀವಾದಿರಾಜರ ತಪೋಭೂಮಿ ಶ್ರೀಸೋದಾ ಕ್ಷೇತ್ರಕ್ಕೆ ಹೋಗುವುದೆಂದರೆ ಕರಾವಳಿ ಪ್ರಾಂತ್ಯದ ಸಾಮಾನ್ಯಜನರಿಗೆ ದೊಡ್ಡ ಸವಾಲಾಗಿತ್ತು.ಏಕೆಂದರೆ ಹೊನ್ನಾವರದ ಶರಾವತಿ ನದಿಯ ಸೇತುವೆ ಕಾಮಗಾರಿ ಪೂರ್ಣ ಮುಗಿದಿರಲಿಲ್ಲ.ಹೀಗಾಗಿ ಉಡುಪಿಯಿಂದ ಸೋಮೇಶ್ವರ ತನಕ ಬಸ್ಸಿನಲ್ಲಿ ಸಾಗಿ ಅಲ್ಲಿಂದ ಆಗುಂಬೆಗೆ ಬಾಡಿಗೆ ಕಾರಿನಲ್ಲಿ ತೆರಳಬೇಕು.ಮತ್ತೆ ಪುನಃ ಬಸ್ಸಲ್ಲಿ ಶಿವಮೊಗ್ಗ,ಸಾಗರ, ಮಾರ್ಗವಾಗಿ ಶಿರಸಿ ತಲುಪಬೇಕಿತ್ತು.ಶಿರಸಿಗೆ ಕನಿಷ್ಟವೆಂದರೂ ಹನ್ನೆರಡು ಗಂಟೆಗಳ ಪ್ರಯಾಣ.
ಮತ್ತೆ ಪುನಃ ಶಿರಸಿಯಿಂದ ಸೋದೆಗೆ 25 ಕಿಲೋಮೀಟರ್.ಕಿರಿದಾದ ರಸ್ತೆ.ಮಾರ್ಗದ ಅಕ್ಕಪಕ್ಕ ಗೊಂಡಾರಣ್ಯ. ಬೆಳಿಗ್ಗೆ 7.00 ಘಂಟೆಗೆ ಶಿರಸಿಯಿಂದ ಒಂದು ಬಸ್ಸು ಹೊರತು ಬೇರಾವ ಸೌಕರ್ಯವೂ ಇರಲಿಲ್ಲ.ಶಾಲ್ಮಲೀನದಿಗೆ ಸೇತುವೆಯೂ ಆಗಿರಲಿಲ್ಲ.ಆದ್ದರಿಂದ ಶಿರಸಿಯಿಂದ ಹಾನಗಲ್ಲಿಗೆ ಸಾಗುವ ಸುತ್ತುರಸ್ತೆ ಬಳಸಿ ಸಹಸ್ರಲಿಂಗ ಸಮೀಪದ ಯಲ್ಲಾಪುರ ಕತ್ರಿ ರಸ್ತೆಯಲ್ಲಿ ಇಳಿದು 7 ಕಿಲೋಮೀಟರ್ ನಡೆದು ಸೋದಾ ಕ್ಷೇತ್ರ ತಲುಪಬೇಕಿತ್ತು.


ಶಿರಸಿಯಿಂದ ಬೆಳಗ್ಗಿನ ಬಸ್ಸು ಲಭಿಸದಿದ್ದಲ್ಲಿ ಮರುದಿನ ಬೆಳಗ್ಗಿನವರೆಗೆ ಶಿರಸಿಯಲ್ಲೇ ಕಾಲಕಳೆದು ಮರುದಿನ ಮುಂಜಾನೆಯ ಬಸ್ಸಿನಲ್ಲಿ ಸೋದಾಕ್ಷೇತ್ರಕ್ಕೆ ಬರುವುದು ವಾಡಿಕೆಯಾಗಿತ್ತು.
ಈ ಮಾರ್ಗದಲ್ಲಿ ರಾತ್ರಿಯ ಸಂದರ್ಭದಲ್ಲಿ ಕೆಲವೊಂದು ದೊಡ್ಡವಾಹನಗಳ ಹೊರತು ಸಣ್ಣಪುಟ್ಟ ಖಾಸಗಿ ವಾಹನಗಳು ಸಂಚರಿಸುವುದು ವಿರಳ.ಈ ಮಾರ್ಗದ ಪಕ್ಕದ ದಟ್ಟಡವಿಯಲ್ಲಿ ಹುಲಿ,ಚಿರತೆಯಂತಹ ಅಪಾಯಕಾರಿ ಕಾಡು ಪ್ರಾಣಿಗಳೂ ಇದ್ದವು.ಜೊತೆಗೆ ವಿಪರೀತ ದರೋಡೆಕೋರರ ಹಾವಳಿಯೂ ಇತ್ತು.


ಹಲವಾರುಭಾರಿ ರಾತ್ರಿಯ ಹೊತ್ತಲ್ಲಿ ಸಂಚರಿಸುತ್ತಿದ್ದ ಕೆಲವು ದ್ವಿಚಕ್ರವಾಹನಗಳ ಸವಾರರ ಮೇಲೆ ಈ ದರೋಡೆಕೋರರ ಗುಂಪು ಧಾಳಿಮಾಡಿ ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿದ್ದವು.ಪೊಲೀಸರು ಈ ಗುಂಪನ್ನು ಪತ್ತೆ ಹಚ್ಚಲು ನಡೆಸಿದ್ದ ಪ್ರಯತ್ನಗಳೆಲ್ಲಾ ವಿಫಲವಾಗಿತ್ತು.ರಾತ್ರಿ ಅಗಾಗೆ ಈ ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಇವರ ಹಾವಳಿ ನಿಂತಿರಲಿಲ್ಲ.

ನನ್ನ ತಂದೆ ವಿಠಲಾಚಾರ್ಯರ ಆತ್ಮೀಯರಾಗಿದ್ದ 70 ರ ಹರೆಯದ ರಂಗಾಚಾರ್ಯರು ಮೊದಲಬಾರಿ ಉಡುಪಿಯಿಂದ ಸೋದಾ ಕ್ಷೇತ್ರಕ್ಕೆ ಒಬ್ಬಂಟಿಗನಾಗಿ ಹೊರಟಿದ್ದರು.ಇವರು ಶ್ರೀವಾದಿರಾಜರ ಉಪಾಸಕರು.ನಿತ್ಯ ವಾದಿರಾಜರ,ರಾಯರ ಭೂತರಾಜರ ಪುನಶ್ಚರಣೆ ನಡೆಸದೆ ನೀರನ್ನೂ ಮುಟ್ಟುತ್ತಿರಲ್ಲಿಲ್ಲ.

ರಂಗಾಚಾರ್ ಉಡುಪಿಯಿಂದ ಬೆಳಿಗ್ಗೆ ಹೊರಟು ಶಿರಸಿ ತಲುಪುವಾಗ ರಾತ್ರಿ ಹತ್ತುಘಂಟೆಯಾಗಿತ್ತು.ಬಸ್ಸಿಗಾಗಿ ಮಾರನೇದಿನ ಬೆಳಿಗ್ಗೆ ಏಳುಘಂಟೆಯವರೆಗೆ ಕಾಯುವ ತಾಳ್ಮೆ ಅವರಿಗಿರಲಿಲ್ಲ.ಸ್ವಲ್ಪ ಹೊತ್ತು ಶಿರಸಿ ಬಸ್ಸುನಿಲ್ದಾಣದಲ್ಲಿ ವಿಶ್ರಾಂತಿ ತೆಗೆದುಕೊಂಡು ಸೋದಾಕ್ಷೇತ್ರಕ್ಕೆ ಸಾಗುವ ದಾರಿಯನ್ನು ಕೇಳಿ ಹೊರಟೇಬಿಟ್ಟರು.ಅಲ್ಲಿದ್ದ ಅನೇಕರು "ಈ ರಾತ್ರಿಯಲ್ಲಿ ಹೋಗಬೇಡಿ ತೀರಾ ಅಪಾಯಕಾರಿ ರಸ್ತೆ ಎಂದು ಹೇಳಿದರೂ ಕೇಳದೆ ಶಿರಸಿಪಟ್ಟಣ ದಾಟಿ ಅಡವಿಯರಸ್ತೆಗೆ ಕಾಲಿಟ್ಟರು.ಘಂಟೆ ಆಗಲೇ ಹನ್ನೊಂದೂವರೆ ಆಗಿತ್ತು.

ಕಗ್ಗತ್ತಲಿನಲ್ಲಿ ಜೀರುಂಡೆಗಳ ಗುಯ್ ಗುಯ್ ಸದ್ದು,ಕಾಡುಪ್ರಾಣಿಗಳು ವಿಚಿತ್ರವಾಗಿ ಘೀಳಿಡುವ ಕೂಗುಗಳು ಅಡವಿಯ ನಡುವಿಂದ ಜೋರಾಗಿ ಕೇಳಿಸುತ್ತಿತ್ತು.ನಡುರಾತ್ರಿಯ ಆಸದ್ದುಗಳು ಎಂಥಹ ಕಲ್ಲೆದೆಯವರನ್ನೂ ಬೆಚ್ಚಿಬೀಳಿಸುವಂತಿತ್ತು.ಆಚಾರ್ಯರಿಗೆ ಭಯವಾಗಿದ್ದರೂ
ಇದಾವುದನ್ನೂ ಲೆಕ್ಕಿಸದೆ ಶ್ರೀಕೃಷ್ಣ-ಮುಖ್ಯಪ್ರಾಣರ ಶ್ರೀವಾದಿರಾಜರ ಶ್ರೀರಾಯರ ಭೂತರಾಜರ ಸ್ಮರಣೆ ನಡೆಸುತ್ತಾ ಎದ್ದು ಬಿದ್ದು ಏಳುತ್ತಾ ಸುಮಾರು15 ಕಿಲೋಮೀಟರ್ ದೂರ ಕ್ರಮಿಸಿದ್ದರು.ಅದೇ ಹೊತ್ತಿಗೆ ಕೈಯಲ್ಲಿದ್ದ ಹಳೆಯ ಎವರೆಡಿ ಟಾರ್ಚಿನ ಬೆಳಕು ಮೆಲ್ಲನೆ ಮಂದವಾಗುತ್ತಾ ಪಬಂತು.ಸ್ವಲ್ಪಹೊತ್ತಲ್ಲಿ ಟಾರ್ಚಿನ ಕತೆಯೂ ಮುಗಿಯಿತು.ಸುಮಾರು ಮೂರುಗಂಟೆ ನಿರಂತರವಾಗಿ ನಡೆದು-ನಡೆದು ಸುಸ್ತಾಗಿತ್ತು. ಟಾರ್ಚ್ ಕೈಕೊಟ್ಟ ಕೂಡಲೇ ರಂಗಾಚಾರ್ಯರಿಗೆ ಕಗ್ಗತ್ತಲು ಪೂರ್ಣಪ್ರಮಾಣದಲ್ಲಿ ಗೋಚರವಾಯಿತು.ಅಲ್ಲೇ ರಸ್ತೆಬದಿಯಲ್ಲಿ ತಲೆಮೇಲೆ ಕೈಯಿಟ್ಟು ಕುಳಿತುಕೊಂಡು ಗಟ್ಟಿಯಾಗಿ ಹರಿಸ್ಮರಣೆಗೆ ತೊಡಗಿದರು.

ಅದೇಹೊತ್ತಿಗೆ ಸರಿಯಾಗಿ ಯಾರೋ ದೂರದಲ್ಲಿ ಕಗ್ಗತ್ತಲೆಯ ಎಡೆಯಿಂದ ಆಚಾರ್ಯರು ಕುಳಿತಿದ್ದಲ್ಲಿಗೆ "ದಪ್ ದಪ್"ಎಂದು ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ಬರುತ್ತಿದ್ದರು.ದೊಡ್ಡ ಟಾರ್ಚ್ ಲೈಟ್ ಹಿಡಿದುಕೊಂಡು ಬಂದ ಐದುಮಂದಿಯ ಈ ತಂಡವು ರಂಗಾಚಾರ್ಯರ ಬಳಿ ಬಂದು ನಿಂತಿತು.ನಡುರಾತ್ರಿಯಲ್ಲಿ ಅವರ ವಿಕೃತರೂಪ ನೋಡುತ್ತಿದ್ದಂತೆಯೇ ರಂಗಾಚಾರ್ಯರ ಸ್ತೋತ್ರ, ಸ್ಮರಣೆ ಎಲ್ಲವೂ ಒಮ್ಮೆಗೇ ನಿಂತೇಹೋಯಿತು. ಗಂಟಲು ಕಟ್ಟಿತು.ಒಬ್ಬೊಬ್ಬರು ಬರೋಬ್ಬರಿ ಆರುಅಡಿ ಎತ್ತರ.ಎಲ್ಲರೂ ಕೊಬ್ಬಿದ ಹುಲಿಯಂತಿದ್ದರು. ಒಂದಿಬ್ಬರ ಕೈಯಲ್ಲಿ ಕೋವಿ ಇತ್ತು.ಉಳಿದವರು ಒಂದೊಂದು ರೀತಿಯ ದೊಣ್ಣೆಗಳನ್ನು ಹಿಡಿದುಕೊಂಡಿದ್ದರು.


ಅವರಲ್ಲಿ ಒಬ್ಬಾತ ಹತ್ತಿರ ಬಂದು ರಂಗಾಚಾರ್ಯರ ಕೆನ್ನೆಗೆ ಜೋರಾಗಿ ಬಾರಿಸಿದ.ಆ ಏಟಿಗೆ ರಂಗಾಚಾರ್ಯರು ರಸ್ತೆಯ ಮೇಲೆ ದಪ್ ಎಂದು ಬಿದ್ದುಬಿಟ್ಟರು.ಹೆದರಿಹೋದ ಆಚಾರ್ರು "ವಾದಿರಾಜರೇ ಕಾಪಾಡಿ" ಎಂದು ಗಟ್ಟಿಯಾಗಿ ಬೊಬ್ಬಿಡಲು ಆರಂಭಿಸಿದರು.ದರೋಡೇಕೋರರು ಇವರ ಕುತ್ತಿಗೆಯಲ್ಲಿದ್ದ ತುಳಸೀಮಣಿ ಹಾರ ಕಿವಿಯಲ್ಲಿದ್ದ ಚಿನ್ನದ ಒಂಟಿ,ಕೈಚೀಲ,ವಾಚ್ ಎಲ್ಲವನ್ನೂ
ಬಲಾತ್ಕಾರದಲ್ಲಿ ಕಸಿದುಕೊಂಡರು.ಅಂಗಿಯ ಕಿಸೆಯಲ್ಲಿದ್ದ ಬಿಡಿಕಾಸನ್ನೂ ಎಳೆದುಕೊಂಡರು. ರಂಗಾಚಾರ್ಯರ ಮೈಕೈಗಳೆಲ್ಲಾ-ಗಢಗಢ-ನಡುಗುತ್ತಿದ್ದವು.ಆಚಾರ್ ನೋವು ದುಃಖ ತಡೆಯಲಾರದೆ ರೋಧಿಸುತ್ತಿದ್ದರು.ನಡುನಡುವೆ "ವಾದಿರಾಜರೇ,ರಾಯರೇ,ಭೂತರಾಜರೇ ನಿಮ್ಮಭಕ್ತನನ್ನು ಕಾಪಾಡಿ"ಎಂದು ಕಣ್ಣೀರು ಸುರಿಸುತ್ತಿದ್ದರು.ದರೋಡೆಕೋರರು ಇವರನ್ನು ಚಿಂದಿಗೈಯುತ್ತಿದ್ದರು.

ಅದೇ ಸಂದರ್ಭದಲ್ಲಿ ಅನತಿದೂರದಲ್ಲಿ ಯಾರೋ ಒಬ್ಬರು ದೀಪ ಹಿಡಿದುಕೊಂಡು ಏಕಾಂಗಿಯಾಗಿ ಈ ಘಟನಾ ಸ್ಥಳದತ್ತ ಆಗಮಿಸುತ್ತಿದ್ದರು. ಒಂದುಕ್ಷಣ ದರೋಡೆಕೋರರು ರಂಗಾಚಾರ್ಯರನ್ನು ತೊರೆದು ರಸ್ತೆಬದಿಯ ಮರದಎಡೆಯಲ್ಲಿ ಹೋಗಿ ನಿಂತರು.ದೀಪ ಹಿಡಿದುಕೊಂಡು ಬಂದ ವ್ಯಕ್ತಿಯು ಮಕ್ಕಳಂತೆ ಅಳುತ್ತಿದ್ದ ರಂಗಾಚಾರ್ಯರ ಬಳಿ ಬಂದು ಧೈರ್ಯ ಹೇಳಿದರು."ನನ್ನ ಮನೆ ಇಲ್ಲೇಇದೆ ಹೋಗೋಣ ಏನೂ ಹೆದರ್ಕೊಬೇಡಿ.


ನಾನು ಈ ಊರ ದೇವಾಲಯದ ಅರ್ಚಕ" ಅಂತಾ ಹೇಳಿ ಕರೆದುಕೊಂಡು ಹೋಗಲು ಮುಂದಾದರು.ಆ ಕೂಡಲೇ ಮರದ ಎಡೆಯಲ್ಲಿದ್ದ ದರೋಡೆಕೋರರು ಇಬ್ಬರಮೇಲೂ ಮಿಂಚಿನಂತೆ ಎರಗಿದರು.ಆದರೆ ಆಶ್ಚರ್ಯವೆನ್ನುವಂತೆ ದೀಪ ಹಿಡಿದುಕೊಂಡು ಬಂದಿದ್ದ ಅರ್ಚಕರು ತಕ್ಷಣ ದರೋಡೆಕೋರರ ದಾಳಿಯಿಂದ ಬದಿಗೆ ಸರಿದು ಒಂದುಕ್ಷಣ ಮೈ ಕೊಡವಿಕೊಂಡರು.ಒಂದುಭಾರೀ ಐದೂಜನ ದರೋಡೆಕೋರರನ್ನು ಸಿಟ್ಟಿನಿಂದ ದುರುಗುಟ್ಟಿಕೊಂಡು ನೋಡಿದ ಅರ್ಚಕರು ಕಣ್ಣರೆಪ್ಪೆ ಮಿಟುಕಿಸುವಸ್ಟರಲ್ಲಿ ಐದೂಮಂದಿ ದರೋಡೆಕೋರರ ಮೇಲೆ ಒಮ್ಮೆಗೇಮುಗಿಬಿದ್ದರು.

ನೋಡುನೋಡುತ್ತಿದ್ದಂತೆ ಒಂದಿಬ್ಬರು-ದರೋಡೆಕೋರರನ್ನು ಕೈಯಲ್ಲಿ ಎತ್ತಿ ಜೋರಾಗಿ ನೆಲಕ್ಕೆ ಅಪ್ಪಳಿಸಿದರು.ಮುಖ ಮುಸುಡಿಗಳಿಗೆ ಹಿಗ್ಗಾಮುಗ್ಗಾ ಬಾರಿಸಿದರು.ಅರ್ಚಕರ ಮುಷ್ಟಿಯ ಹೊಡೆತದ ವೇಗ ಹೇಗಿತ್ತೆಂದರೆ ದರೋಡೆಕೋರರ ಮುಖ-ಮುಸುಡಿಗಳು ಒಡೆದು ರಕ್ತ ಚಿಮ್ಮುತ್ತಿತ್ತು.ಕೈಕಾಲುಗಳು ಮುರಿದು ಹೋಗಿದ್ದವು. ಅರ್ಚಕರ ಅನಿರೀಕ್ಷಿತವಾದ ಈ ಪ್ರತಿಧಾಳಿಯಿಂದ ಬೆಚ್ಚಿಬಿದ್ದ ದರೋಡೆಕೋರರು ಓಡಲೂ ಆಗದೆ ನಿಲ್ಲಲೂ ಆಗದೆ ಹೇಗೋ ಕಷ್ಟಪಟ್ಟು ಬೊಬ್ಬೆ ಹೊಡೆಯುತ್ತಾ ಅರಣ್ಯದೊಳಗೆ ಸಾಗಿ ತಪ್ಪಿಸಿಕೊಂಡರು.

ಊರ ದೇವಾಲಯದ ಅರ್ಚಕನೊಬ್ಬ ಐದೂಮಂದಿ ದರೋಡೆಕೋರರ ಮೇಲೆ ಮಿಂಚಿನಂತೆ ಎರಗಿ ಬಡಿದುಹಾಕಿದ ರೀತಿಯನ್ನು ಕಂಡು ಆಚಾರ್ಯರು ಮೂಕವಿಸ್ಮಿತರಾಗಿದ್ದರು.ತಮ್ಮ
ಕಣ್ಣನ್ನು ತಾವೇ ನಂಬಲಿಲ್ಲ. ಸಾಮಾನ್ಯವ್ಯಕ್ತಿಯೊಬ್ಬರು,ಐದುಜನದರೋಡೆಕೋರರನ್ನು ಈರೀತಿಬಡಿದುಹಾಕಲು ಸಾಧ್ಯವೇ.ಈ ಹೊಡೆದಾಟದ ದೃಶ್ಯ ನೋಡಿ ಆಚಾರ್ಯರಿಗೆ ಅವರ ನೋವೆಲ್ಲಾ ಮರೆತೇ ಹೋಗಿತ್ತು..ಅಬ್ಬಾ.. ಆಚಾರ್ಯರಿಗೆ ಉಸಿರು ಬಂದಂತಾಗಿತ್ತು.ಜೊತೆಗೆ-ದರೋಡೆಕೋರರು ರಂಗಾಚಾರ್ಯರಿಂದ ಕಿತ್ತುಕೊಂಡಿದ್ದ ಅಷ್ಟೂ ಸೊತ್ತುಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು. ದೊಂದಿ ದೀಪದ ಬೆಳಕಿನ ಸಹಾಯದಿಂದ ಅವೆಲ್ಲವನ್ನೂ ಅರ್ಚಕರೇ ಆಚಾರ್ಯರಿಗೆ ಹೆಕ್ಕಿ ತಂದುಕೊಟ್ಟರು.ಆನಂತರ ಅರ್ಚಕರು ಆಚಾರ್ಯರನ್ನು ಕೇಳಿದರು."ಈ ರಾತ್ರಿಯಲ್ಲಿ ಎಲ್ಲಿಗೆ ಒಬ್ಬಂಟಿಗನಾಗಿ ಹೋಗ್ತಾಇದ್ದೀರಿ".

 

                                                             Life of Sri Vadiraja in Pictures

 

ಅದಕ್ಕೆಆಚಾರ್ಯರು..ಮೊತ್ತಮೊದಲ ಭಾರಿ ಶ್ರೀವಾದಿರಾಜರ ದರ್ಶನಕ್ಕಾಗಿ ಸಾಗುತ್ತಿರುವ ವಿಷಯವನ್ನು ಅವರಿಗೆ ತಿಳಿಸಿದರು.ಅದಕ್ಕೆ ಅರ್ಚಕರು ಹೇಳಿದರು."ಬೇಕಿದ್ರೆ ಪಕ್ಕದಲ್ಲೇ ನನ್ನ ಮನೆಯಿದೆ ಇವತ್ತುರಾತ್ರಿ ಇಲ್ಲೇಇದ್ದು ನಾಳೆಹೊರಡಿ"ಅಂತಾ ಹೇಳಿದ್ರೆ..ಅದಕ್ಕೆ ಆಚಾರು ಅಂದ್ರು ಇಂದು "ಬೆಳಿಗ್ಗೆಯಿಂದಲೇ ವಾದಿರಾಜರ ಎಲ್ಲಾ ಪೂಜೆಯನ್ನು ನೋಡಲೇಬೇಕು ಅನ್ನೋ ಆಸೆ.ಅದಕ್ಕಾಗಿ ಇಷ್ಟೊಂದು ಅವಸರದಲ್ಲಿದ್ದೇನೆ".. ಅಂತಾ ಹೇಳಿ..ಮತ್ತೆ ಮಾತು ಮುಂದುವರಿಸಿದ ಆಚಾರ್.."ನಿಮ್ಗೆ ತೊಂದ್ರೆ ಇಲ್ಲಾಂದ್ರೆ ನನ್ನನ್ನು ಸೋದಾಕ್ಷೇತ್ರದವರೆಗೆ ಕರೆದುಕೊಂಡು ಹೋಗುವಿರಾ"ನಂಗೆ ತುಂಬಾ ಹೆದರಿಕೆ ಆಗ್ತಾ ಇದೆ"ಅಂತಾ ಕೇಳಿದಕ್ಕೆ ಅರ್ಚಕರು ತಕ್ಷಣ ಒಪ್ಪಿಕೊಂಡರು.ಅಷ್ಟೇಅಲ್ಲ ದಾರಿಯುದ್ದಕ್ಕೂ ರಂಗಾಚಾರ್ಯರು ಹೇಳುತ್ತಿದ್ದ ಶ್ರೀವಾದಿರಾಜರ ಭೂತರಾಜರ ಮಹಿಮೆಯನ್ನು ಅರ್ಚಕರು ಕುತೂಹಲದಿಂದ ಕೇಳುತ್ತಿದ್ದರು. ಶಾಲ್ಮಲೀನದಿಯನ್ನು ಸ್ವತಃ ಅರ್ಚಕರೇ ಆಚಾರ್ಯರ ಕೈಹಿಡಿದು ಜಾಗರೂಕತೆಯಿಂದ ದಾಟಿಸಿದರು.ಬೇಸಿಗೆಕಾಲವಾದ ಕಾರಣ ನದಿನೀರಿನ ಹರಿವು ತೀವ್ರವಾಗಿ ಇರಲಿಲ್ಲ.


ಶ್ರೀರಾಜರ ಕಥೆ ಕೇಳುತ್ತಾ ಸೋದಾಕ್ಷೇತ್ರ ಸಮೀಪಿಸಿದ್ದು ತಿಳಿಯಲೇ ಇಲ್ಲ. ಆಶ್ಚರ್ಯವೆಂದರೆ ಅರ್ಚಕರ ಕೈಯಲ್ಲಿದ್ದ ದೊಂದಿದೀಪ ಅಷ್ಟು ಹೊತ್ತಾದರೂ ಬೆಳಗುತ್ತಲೇ ಇತ್ತು.

ಸೋದಾ ಕ್ಷೇತ್ರ ಸಮೀಪಿಸುವಾಗ ಮೊದಲು ಕಾಣಸಿಗುವ ಹಯಗ್ರೀವ ಸಮುದ್ರದವರೆಗೆ ಆಚಾರ್ಯರನ್ನು ಅರ್ಚಕರು ಕರೆದುಕೊಂಡು ಬಂದರು. ದೂರದಲ್ಲಿ ಕಾಣುವ ಸೋದಾಕ್ಷೇತ್ರಕ್ಕೆ ಅರ್ಚಕರು ಕೈ ತೋರಿಸಿ "ಆಚಾರ್ರೆ ಅಲ್ಲಿ ಕಾಣ್ತಾ ಇರೋದೇ ಶ್ರೀವಾದಿರಾಜರ ಸಿದ್ದಿಸಾಧನೆಯ ಪವಿತ್ರ ಸನ್ನಿಧಾನ ಸೋದಾಕ್ಷೇತ್ರ" ಎಂದು ಹೇಳಿದರು.

ಪ್ರಾತಃಕಾಲ ಘಂಟೆ ಐದು ಆಗಿರಬಹುದು.ಚಳಿಗಾಳಿಜೋರಾಗಿ ಬೀಸುತ್ತಿತ್ತು.ರವಿಯ ಕೇಸರಿವರ್ಣದ ರೇಖೆಗಳು ಒಂದೊಂದಾಗಿ ನಭದಲ್ಲಿ ಮೂಡುತ್ತಿದ್ದವು.ಶ್ರೀವಾದಿರಾಜರ ಕ್ಷೇತ್ರವು ದೂರದಿಂದ ಕಾಣುತ್ತಿದ್ದಂತೆ ಆಚಾರ್ಯರ ತನುಮನ ತುಂಬಿ ಬಂದಿತು. ವಾದಿರಾಜರ ಕ್ಷೇತ್ರಕ್ಕೆ ಕರೆದುಕೊಂಡು ಬಂದ ಅರ್ಚಕರಿಗೆ ಕೃತಜ್ಞತೆ ಸಲ್ಲಿಸಲೇಬೇಕು ಎಂದು ಆಚಾರ್ಯರು ಹಿಮ್ಮುಖ ತಿರುಗಿದಾಗ ಅಲ್ಲಿ ಅರ್ಚಕರೂ ಇರಲಿಲ್ಲ.ದೊಂದಿಯ ಬೆಳಕೂ ಇಲ್ಲ.ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ಅದೃಶ್ಯರಾಗಿದ್ದರು. ಆಚಾರ್ಯರ ಮೈ ಜುಂ ಎಂದಿತು."ಅರೆ..ನನ್ನನ್ನು ದರೋಡೆಕೋರರ ಸಾವಿನ ಕುಣಿಕೆಯಿಂದ ಪಾರುಮಾಡಿ ಇಲ್ಲಿಯವರೆಗೆ-ಕರೆದುಕೊಂಡುಬಂದ ಪುಣ್ಯಾತ್ಮರು ಕ್ಷಣಾರ್ಧದಲ್ಲಿ ನನ್ನನ್ನು ಹೇಗೆ ತೊರೆದುಹೋದರು.ನಾನು ಅವರಿಗೆ ಕೃತಜ್ಞತೆಯನ್ನೂ ಕೂಡಾ ಸಲ್ಲಿಸಲ್ಲಿಲ್ಲವಲ್ಲ" ಎಂದು ಭಾವುಕರಾದರು. ಕಣ್ಣೆದುರಲ್ಲೆ ನಡೆದ ಈ ಘಟನೆಯಿಂದ ರಂಗಾಚಾರ್ಯರು ಅರೆಘಳಿಗೆ ಸ್ತಂಭಿಭೂತರಾದರು. ಇದೇನು ಮಾಯೆಯೋ ಸತ್ಯವೋ ಆಚಾರ್ಯರಿಗೆ ಒಂದೂ ಅರಿವಾಗಲಿಲ್ಲ.

ತಕ್ಷಣ ಸೋದಾಕ್ಷೇತ್ರಕ್ಕೆ ತೆರಳಿ ಧವಳಗಂಗಾ ಸ್ನಾನ, ಶ್ರೀರಮಾತ್ರಿವಿಕ್ರಮದೇವರ,ಪಟ್ಟದದೇವರಾದ ಶ್ರೀಭೂವರಾಹ ಶ್ರೀಹಯಗ್ರೀವ,ಶ್ರೀವಾದಿರಾಜರ,ಶ್ರೀಭೂತರಾಜರ ದರ್ಶನ ಪೂರೈಸಿ ದೇವರ ಪ್ರಸಾದ ಸ್ವೀಕರಿಸಿ ಸುಮಾರು ಒಂದು ವಾರಗಳ ತನಕ ಸೇವೆ ಸಲ್ಲಿಸಿದರು.ತೆರಳುವ ಮೊದಲು ಸೋದೆಯಲ್ಲೆ ಮೊಕ್ಕಾಂ ಹೂಡಿದ್ದ ಮಹಾತಪಸ್ವಿಗಳು ಎನಿಸಿದ ಶ್ರೀವಿಶ್ವೋತ್ತಮತೀರ್ಥರಲ್ಲಿ ಮಂತ್ರಾಕ್ಷತೆ,ಆಶೀರ್ವಾದ ಸ್ವೀಕರಿಸಿ ನಡೆದ ಎಲ್ಲಾ ವಿಷಯವನ್ನು ಹೇಳಿದರು.
ಈ ಘಟನೆಯನ್ನು ಕೇಳಿದ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಭೂತರಾಜರ ಮಹಿಮೆಯನ್ನು ನೆನೆದು ತುಂಬಾ ಸಂತೋಷಪಟ್ಟರು.

ಸೋದೆಕ್ಷೇತ್ರದ ದರ್ಶನ ಪೂರೈಸಿ ಉಡುಪಿಗೆ ಬಂದ ರಂಗಾಚಾರ್ಯರು ನನ್ನ ತಂದೆ ವಿಠಲಾಚಾರ್ಯರನ್ನು ಭೇಟಿಯಾಗಿ ಅಡವಿಯಲ್ಲಿ ನಡುರಾತ್ರಿಯಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.


ಈ ಘಟನೆಯನ್ನು ನಮ್ಮಬಾಲ್ಯದಲ್ಲಿ ತಂದೆಯವರು ನಮಗೆ ಕನಿಷ್ಟವೆಂದರೂ ಹತ್ತು ಭಾರಿ ಹೇಳಿದ್ದರು.ಆದರೂ ಮತ್ತೆ-ಮತ್ತೆ ಹೇಳುವಂತೆ ನಾವು ದುಂಬಾಲು ಬೀಳುತ್ತಿದ್ದೆವು.

ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ವಿಶೇಷ ಆಮಂತ್ರಣದ ಮೇರೆಗೆ ಶ್ರೀಸೋದೆವಾದಿರಾಜ ಮಠದ ಕೀರ್ತಿಶೇಷಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಪ್ರತೀವರ್ಷವೂ ಶಿರೂರಿನಲ್ಲಿ ವರ್ಷಂಪ್ರತಿ ಜರಗುವ ಶ್ರೀರಾಮನವಮಿ ಉತ್ಸವಕ್ಕೆ ಮಠದ ಪಟ್ಟದದೇವರ ಸಹಿತ ಚಿತ್ತೈಸಿ 2 ದಿನಗಳಕಾಲ ಈಕ್ಷೇತ್ರದಲ್ಲಿ ತಂಗಿ ಶ್ರೀಪಟ್ಟಾಭಿರಾಮದೇವರು ಹಾಗೂಶ್ರೀಮುಖ್ಯಪ್ರಾಣದೇವರಿಗೆ ಪೂಜೆಸಲ್ಲಿಸಿ ನಮ್ಮನ್ನೆಲ್ಲಾ ಹರಸುತ್ತಿದ್ದರು.

ಒಮ್ಮೆ 2004ನೇ ಇಸವಿಯಲ್ಲಿ ಶಿರೂರು ರಾಮನವಮಿ ಉತ್ಸವಕ್ಕೆ ಶ್ರೀವಿಶ್ವೋತ್ತಮತೀರ್ಥರು ಬಂದಾಗ
ರಂಗಾಚಾರ್ಯರ ಘಟನೆಯ ಕುರಿತು ಪ್ರಸ್ತಾವಿಸಿದ್ದೆ.ಆವಾಗ ಶ್ರೀವಿಶ್ವೋತ್ತಮತೀರ್ಥರು ಅಂದಿನ ಘಟನೆ ಮತ್ತು ರಂಗಾಚಾರ್ಯರ ವಿಚಾರವಾಗಿ ಬಹಳ ಹೊತ್ತು ಮಾತನಾಡಿದ್ದರು.
ಸುಮಾರು ನಾಲಕ್ಕು ಭಾರಿ ಈ ತೆರನಾದ ಘಟನೆ ಅದೇ ಮಾರ್ಗದಲ್ಲಿ ಸಂಭವಿಸಿತ್ತು.
ಆದರೆ ರಂಗಾಚಾರ್ಯರ ಘಟನೆಯ ನಂತರ ಆ ಪ್ರಾಂತ್ಯದಲ್ಲಿ ಮತ್ತೆಂದೂ ದರೋಡೆಕೋರರ ಧಾಳಿ ಸಂಭವಿಸಿಲ್ಲ ಎನ್ನುವುದು ಭೂತರಾಜರ ಮಹಿಮೆಗೆ ಜ್ವಲಂತ ನಿದರ್ಶನ ಎಂದು ಖುಷಿಪಟ್ಟು ಹೇಳಿದರು.


ಇದೇಸಂದರ್ಭದಲ್ಲಿ ಪರಮಪೂಜ್ಯಶ್ರೀಪಾದರು ತಮ್ಮಜೀವಿತಾವಧಿಯಲ್ಲಿ ಸಂಭವಿಸಿದ ಶ್ರೀವಾದಿರಾಜರ ಭೂತರಾಜರ ಅನೇಕ ಮಹಿಮೆಗಳನ್ನು ಹಾಗೂ ಕುತೂಹಲಕಾರಿ ಸತ್ಯ ಘಟನೆಗಳನ್ನು ಕೂಡಾ ಸವಿವರವಾಗಿ ಹೇಳಿದ್ದರು. ಇದೆಲ್ಲಾ ನಮ್ಮ ಸುಕೃತವೆಂದೇ ಭಾವಿಸುತ್ತೇವೆ...

ಆತ್ಮೀಯ ಓದುಗರೇ ಒಂದಂತೂ ಸತ್ಯ.. ಭಗವಂತನ ಪ್ರೀತಿಗಾಗಿ ನಮ್ಮ ಸತ್ಸಂಕಲ್ಪವಿದ್ದರೆ
ಎಂತಹ ಸಂಕಷ್ಟ ಬಂದರೂ ಸಂರಕ್ಷಿಸಲು ಆತ ಬಂದೇ ಬರುತ್ತಾನೆ ಅನ್ನೋದಕ್ಕೆ ರಂಗಾಚಾರ್ಯರ
ಈ ಘಟನೆಯೇ ಸಾಕ್ಷಿ.


------------------- Hari Om ------------------

                             

 

 

 

Tuesday, March 3, 2026

ದೇವರ ದರ್ಶನ ಮಾಡುವ ಕ್ರಮ - Steps for Viewing God

 

                                                          Lord Srinivasa // Venkateswara

 

ದೇವರ ದರ್ಶನ ಮಾಡುವ ಕ್ರಮ - Steps for Viewing God

 

ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡಿಬೇಕು ಅನ್ನುವದಕ್ಕೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ತಿಳಿಸುತ್ತಾರೆ . ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತೆ...‌‌

ಯಾವದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು ಹೀಗೆ ಹೇಳಬೇಕು..

ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು ,ವಿರಜಾ ನದಿಯ ಸ್ನಾನ ಮಾಡಿಸು , ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು . ವೈಕುಂಠಕ್ಕೆ ಕರೆದೊಯ್ದು ನಿನ್ನ ದರುಶನ ಮಾಡಿಸು ಎಂದು ಪ್ರಾರ್ಥಿಸಿ ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು..ಅದಕ್ಕೆ ಧೂಳಿದರ್ಶನ ಅಂತಾರೆ.


ಧೂಳಿ ದರ್ಶನಂ ಪಾಪ ನಾಶನಂ 

 
ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ .


ನಂತರ ತಲೆಯಲ್ಲಿರು ಚಿಂತಗಳನ್ನೇಲ್ಲ ಬಿಟ್ಟು ಶಿಖರ ದರ್ಶನ ಮಾಡಿ 

 
ಶಿಖರ ದರ್ಶನಂ ಚಿಂತಾನಾಶನಂ 

 

                                   Lord Keshava

 

 

ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ 

ಪ್ರವೇಶಮಾಡಿ ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ ಅದಕ್ಕೂ ಒಂದು ಕ್ರಮವಿದೆ .



1) ಮೊದಲು ಪಾದ ದರ್ಶನ ಮಾಡಿ


ಪಾದ ದರ್ಶನಂ ಪಾಪನಾಶನಂ ...‌

ನಂತರ

2) ಕಟಿ ದರ್ಶನ


ಕಟಿ ದರ್ಶನಂ ಕಾಮನಾಶನಂ

ನಂತರ


3) ನಾಭಿ ದರ್ಶನ


ನಾಭಿ ದರ್ಶನಂ ನರಕ ನಾಶನಂ

ನಂತರ


4) ಕಂಠ ದರ್ಶನ


ಕಂಠ ದರ್ಶನಂ ವೈಕುಂಠ ಸಾಧನಂ

ನಂತರ


5) ಮುಖ ದರ್ಶನ


ಮುಖ ದರ್ಶನಂ ಮುಕ್ತಿ ಸಾಧನಂ

ನಂತರ


6) ಕಿರೀಟ ದರ್ಶನ


ಕೀರಿಟ ದರ್ಶನಂ ಪುನರ್ಜನ್ಮ ನಾಶನಂ

ನಂತರ


7) ಸರ್ವ ದರ್ಶನ


ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ .‌‌‌


ಸರ್ವಾಂಗ ದರ್ಶನ ಮಾಡಬೇಕು..


ಇದು ಕ್ರಮ.


----------------- Hari Om --------------


 

Monday, March 2, 2026

ಶ್ರೀಕೃಷ್ಣಾರ್ಪಣಮಸ್ತು ---- ಆಚಾರ-ವಿಚಾರ

 

                                                                        Lord Krishna

 

ಶ್ರೀಕೃಷ್ಣಾರ್ಪಣಮಸ್ತು ---- ಆಚಾರ-ವಿಚಾರ



ಇದರ ಔಚಿತ್ಯವೇನು. ಒಂದು ಚಿಕ್ಕ ಚಿಂತನೆ. ಯಾವುದೇ ಪೂಜೆಯ ಕೊನೆಗೆ ಅಥವಾ 

ಯಾವುದೇ ಸೇವೆ ಯಾ ವಸ್ತು ದೇವರಿಗೆ ಅರ್ಪಿಸುವಾಗ "ಶ್ರೀಕೃಷ್ಣಾರ್ಪಣಮಸ್ತು"ಎಂದು ಹೇಳಿ

 ತುಳಸಿ ನೀರು ಬಿಟ್ಟು ಸೇವೆ ಯಾ ವಸ್ತುವನ್ನು ದೇವರಿಗೆ ಅರ್ಪಿಸಿ ತುಳಸಿಯನ್ನು ಮಾತ್ರ 

ಸ್ವೀಕರಿಸುತ್ತೇವೆ. ಯಾಕೆ "ಶ್ರೀಕೃಷ್ಣಾರ್ಪಣಮಸ್ತು" ಯಾಕಿಲ್ಲ ರಾಮಾರ್ಪಣಮಸ್ತು

 ವೆಂಕಟರಮಣಾರ್ಪಣಮಸ್ತು, ಮತ್ಸ್ಯಾರ್ಪಣಮಸ್ತು, ಕೂರ್ಮಾರ್ಪಣಮಸ್ತು

ವರಾಹಾರ್ಪಣಮಸ್ತು, ನರಸಿಂಹಾರ್ಪಣಮಸ್ತು, ವಾಮನಾರ್ಪಣಮಸ್ತು

 ಭಾರ್ಗವಾರ್ಪಣಮಸ್ತು, ಬುದ್ಧಾ ರ್ಪಣಮಸ್ತು, ಕಲ್ಕ್ಯರ್ಪಣಮಸ್ತು ಅಥವಾ ಯಾವುದೇ 

ದೇವರ ಹೆಸರಿನಲ್ಲಿ ಅರ್ಪಣಮಸ್ತು? ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ 

ಕೃಷ್ಣಾವತಾರಕ್ಕೆ ವಿಶಿಷ್ಟ ಮಹತ್ತ್ವವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ 

ಅವತಾರಗಳಲ್ಲಿ ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಶ್ರೀ 

ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಶ್ರೀ 

ಕೃಷ್ಣನನ್ನು " ಗೋವಿಂದ" ಎಂದು ಕರೆಯುವುದು. ಗೋವಿಂದ ಎಂದರೆ ಗೋಪಾಲಕನಷ್ಟೇ

 ಅಲ್ಲ. ಗೋ" ಎಂದರೆ ಇಂದ್ರಿಯ , ವೇದ, ಶಬ್ದ, ಮಾತು "ವಿಂದತೇ" ಎಂದರೆ ನಿಲುಕುವುದು

 ಅಥವಾ ಸಿಗುವಿಕೆ, ಲಾಭ, ಹೊಂದುವುದು ಎಂಬರ್ಥ. ಯಃ ಇಂದ್ರಿಯಾಣಾಂ ವಿಂದತಿ ಸಃ 

ಗೋವಿಂದಃ, ಅವನೇ ಶ್ರೀ ಕೃಷ್ಣ.


ಶ್ರೀ ಕೃಷ್ಣಾವತಾರವು ಒಂದು ಸಂಪೂರ್ಣ ಅವತಾರ


ಈ ಅವತಾರದಲ್ಲಿ ದಶಾವತಾರದ ಒಂಬತ್ತು ಅವತಾರಗಳಲ್ಲಿ ಭಗವಂತನು ತೋರಿಸಿದ 

ಲೀಲೆಗಳೆಲ್ಲವೂ ಇವೆ. ಹಾಗಾಗಿ ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದರೆ ಉಳಿದೆಲ್ಲಾ ದೇವರಿಗೂ 

ಅರ್ಪಿಸಿದಂತೆ. ಹಾಗಾಗಿಯೇ  "ಶ್ರೀಕೃಷ್ಣಾರ್ಪಣಮಸ್ತು" ಎನ್ನುವುದು.


ನಮ್ಮಲ್ಲಿ ಕೆಲವರಿಗೊಂದು ಅಭ್ಯಾಸವಿದೆ, ಮನುಷ್ಯ ಸಹಜವಾದ ಅಭ್ಯಾಸ -ಇದು ನಾನು 

ದೇವರಿಗೆ ಅರ್ಪಿಸಿದ್ದು, ಇದು ನನ್ನದು, ನಾನು ಅತೀ ದೊಡ್ಡ ಕಾಣಿಕೆ ಯಾ ಸೇವೆ ಮಾಡಿದ್ದೇನೆ 

ನನಗೆ ಅಗ್ರ ಪ್ರಸಾದ ಸಿಗಬೇಕು, ಹೆಸರನ್ನು ಬೋರ್ಡ್ ಮೇಲೆ ಬರೆಯದಿದ್ದರೆ ಕೋಪ 

ಬರುತ್ತದೆ....ಇತ್ಯಾದಿ. ಇದೆಲ್ಲವೂ ನಮ್ಮ ಅಹಂ ತೋರಿಸುತ್ತದೆ. ಒಮ್ಮೆ ದೇವರಿಗೆ ಕೃಷ್ಣಾರ್ಪಣ

 ಆಯಿತೋ ಆ ವಸ್ತು ಯಾ ಸೇವೆ ಯಾ ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ 

ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೊಂದೇ ನಮ್ಮ ಭಾಗಕ್ಕೆ. ಅಹಂಕಾರವನ್ನು 

ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫಲ. ಗೋವಿಂದನ ಮುಂದೆ 

ಅಹಂಭಾವದಿಂದ ವರ್ತಿಸಿದರೆ ನಿರಂಹಂಕಾರದಿಂದ ಗೋವಿಂದನ ಮುಂದೆ ವರ್ತಿಸಿದರೆ 

ಜೀವನದಲ್ಲಿ ಭಗವಂತನ ಕೃಪೆ, ಶ್ರೀ ಕೃಷ್ಣಾನುಗ್ರಹ". ಕೃಷ್ಣಾರ್ಪಣವೇ ಯಾಕೆ ? ಎಲ್ಲರೂ 

ಸಂಧ್ಯಾವಂದನಾದಿ ಕರ್ಮಗಳನ್ನು ಮಾಡಿ ಕೃಷ್ಣಾರ್ಪಣವೆನ್ನುತ್ತಾರೆ ಕೃಷ್ಣಾರ್ಪಣವೇ ಯಾಕೆ 

ಎಂದರೆ ಕೆಲವರು ಕೃಷ್ಣ ರೂಪ ಕಲಿಯುಗಕ್ಕೆ ಅತ್ಯಂತ ಹತ್ತಿರ ರೂಪವಾದ್ದರಿಂದ 

ಕೃಷ್ಣಾರ್ಪಣವೆನ್ನಬೇಕು ಎಂದು ಹೇಳುತ್ತಾರೆ. ಅದೂ ಸರಿ. ಆದರೆ ಅದರ ಜೊತೆಗೆ 

ಬ್ರಹ್ಮಾಂಡಪುರಾಣದ ವೆಂಕಟೇಶ ಮಹಾತ್ಮೆಯಲ್ಲಿ ಈ ರೀತಿ ತಿಳಿಸುತ್ತಾರೆ .


ಕೃತೇ ಶ್ವೇತಂ ಹರಿಂ ವಿದ್ಯಾತ್,


ತ್ರೇತಾಯಾಂ ರಕ್ತವರ್ಣಕಂ ,,


ದ್ವಾಪರೇ ಪೀತವರ್ಣಂ ತು


ಕೃಷ್ಣವರ್ಣಂ ಕಲೌ ಯುಗೇ .


ಎಲ್ಲಾ ಜೀವರ ಹೃದ್ಗುಹಾವಾಸಿಯಾದ ಭಗವಂತ ಒಬ್ಬನೇ ಆದರೂ, ಯುಗಾನುಸಾರ ತನ್ನ 

ಬಣ್ಣವನ್ನು ಬದಲಿಸುತ್ತಾನೆ. ಕೃತಯುಗದಲ್ಲಿ ಬಿಳಿ, ತ್ರೇತೆಯಲ್ಲಿ ಕೆಂಪು, ದ್ವಾಪರದಲ್ಲಿ ಹಳದಿ 

ಹಾಗು ಕಲಿಯುದಲ್ಲಿ ಕೃಷ್ಣ ಬಣ್ಣದಿಂದ ಕೂಡಿ ಎಲ್ಲರ ಬಿಂಬನಾಗಿದ್ದಾನೆ. ಆದ್ದರಿಂದಲೇ 

ಕೃಷ್ಣಾರ್ಪಣವೆನ್ನುವುದು ಅತ್ಯಂತ ಸಮಂಜಸವಾದದ್ದು .


ಅದಕ್ಕೆ ಏನೋ ವ್ಯಾಸರಾಯರು ಮೂರು ಬಾರಿ ಕೃಷ್ಣನನ್ನು ಕರೆದದ್ದು.


ಒಂದು ಬಿಂಬನನ್ನು, ಮತ್ತೊಂದು ಅವತಾರ ರೂಪವನ್ನು, ಮಗದೊಂದು 

ಮೂಲರೂಪವನ್ನುಕೃಷ್ಣಕೃಷ್ಣಕೃಷ್ಣ ಎಂದು ಮೂರು ಬಾರಿ ನೆನೆಯಿರೋ 

ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನು.


ಶ್ರೀಮಧ್ವೇಶಾರ್ಪಣಮಸ್ತು ---- ಶ್ರೀಕೃಷ್ಣಾರ್ಪಣಮಸ್ತು


------------------- Hari Om -----------------

 

Friday, February 27, 2026

ಕಿತ್ತಳೆಹಣ್ಣು ---- Orange Fruit

 

                                                               Kittale Hannu or Orange

 

ಕಿತ್ತಳೆಹಣ್ಣು ---- Orange Fruit

ಕಿತ್ತಳೆ ಹಣ್ಣು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕಿತ್ತಳೆ ಹಣ್ಣಿನ ಮುಖ್ಯ.

ಕಿತ್ತಳೆ ಯಲ್ಲಿ ಕೊಡಗಿನ ಕಿತ್ತಳೆ ಹೆಚ್ಚು ಒಳ್ಳೆಯದು

ಸಿಪ್ಪೆಯನ್ನು ಒತ್ತಿದಾಗ ಇದರಿಂದ ದ್ರವರೂಪದ ಸಿಟ್ರಿಕ್ ಆಸಿಡ್ ಬರುತ್ತದೆ ಸಣ್ಣವರಿದ್ದಾಗ ಕಣ್ಣಿಗೆ ಸಿಡಿಸಿ ಜೊತೆಗೆ ಬೇರೆಯವರಿಗೂ ಸಿಡಿಸಿ ನಗುವುದು ಮತ್ತು ಅಳುವುದು ಎರಡು ಮಾಡಿರುವ ಅನುಭವಗಳು ಇನ್ನು ಹಚ್ಚ ಹಸಿರು.

 

                                                   Kittale Hannu

  

ಉಪಯೋಗಗಳು:

1) ರೋಗನಿರೋಧಕ ಶಕ್ತಿ ಹೆಚ್ಚಳ: ವಿಟಮಿನ್ ಸಿ ಹೇರಳವಾಗಿದ್ದು, ಶೀತ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2) ಹೃದಯದ ಆರೋಗ್ಯ: ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯವಾಗಿಡುತ್ತದೆ.

3) ಜೀರ್ಣಕ್ರಿಯೆ ಸುಧಾರಣೆ: ಫೈಬರ್ ಅಂಶವು ಮಲಬದ್ಧತೆಯನ್ನು ತಡೆಗಟ್ಟಿ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

4) ತ್ವಚೆಯ ಸೌಂದರ್ಯ: ಕಿತ್ತಳೆಯಲ್ಲಿರುವ ವಿಟಮಿನ್ ಸಿ ಮತ್ತು ಇ ಅಂಶಗಳು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಿ, ಯೌವನಯುತ ಚರ್ಮವನ್ನು ನೀಡುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು ಫೇಸ್ ಪ್ಯಾಕ್ ಆಗಿ ಬಳಸಬಹುದು.

5) ಕಿಡ್ನಿ ಕಲ್ಲುಗಳ ನಿವಾರಣೆ: ಕಿತ್ತಳೆಯಲ್ಲಿರುವ ಸಿಟ್ರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ.

6) ಕಣ್ಣಿನ ದೃಷ್ಟಿ: ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶವು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

7) ತೂಕ ನಿಯಂತ್ರಣ: ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

8) ಕಿತ್ತಳೆ ಬೀಜಗಳು ಆರೋಗ್ಯಕರ ಕೊಬ್ಬುಗಳು, ಖನಿಜಗಳು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ.

9) ಇದರ ಎಲೆ ಅರೆದು ತಲೆಗೆ ಹಚ್ಚಿ ಘಂಟೆ ಕಾಲ ಬಿಟ್ಟು ತೊಳೆಯಿರಿ ತಲೆಯ ಹೇನು ನಿವಾರಣೆಯಾಗುತ್ತದೆ.

10) ಬೇರು ಕಿತ್ತು ನಿಂಬೆ ರಸ ಸೇರಿಸಿ ಒಂದು ಚಮಚ ತೈದು ತೆಗೆದುಕೊಂಡರೆ ವಾಂತಿ ನಿಲ್ಲುತ್ತದೆ.

11) ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಆರಂಭದಿಂದಲೂ ಉಸಿರಾಟದ ತೊಂದರೆಯ ಚಿಕಿತ್ಸೆಗೆ ಬಳಸುತ್ತಾರೆ. ಅಸ್ತಮಾ ಶೀತದಂತಹ ಸಮಸ್ಯೆಗಳು ಇದ್ದವರು ಈ ಸಿಪ್ಪೆಯನ್ನು ಸೇವಿಸುವುದರಿಂದ ಎದೆಯಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸಿ ದೇಹದಿಂದ ಹೊರಗೆ ಹಾಕುವಲ್ಲಿ ಸಹಾಯಕಾರಿಯಾಗುತ್ತದೆ.

 

                                                       Orange Fruit Peel

 

12) ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ, ಮುಖದ ಪ್ಯಾಕ್ ( Face pack ) ಆಗಿ ಬಳಸಬಹುದು, ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. 



ಕಿತ್ತಳೆ ತಿನ್ನುವ ಮೊದಲು ತಿಳಿದುಕೊಳ್ಳಬೇಕಾದದ್ದು

ಕಿತ್ತಳೆ ಹಣ್ಣುಗಳು ಸಾಮಾನ್ಯವಾಗಿ ಆರೋಗ್ಯಕರ ಮತ್ತು ತಿನ್ನಲು ಸುರಕ್ಷಿತ. ಕಿತ್ತಳೆ ತಿನ್ನುವುದು ಮತ್ತು ಕಿತ್ತಳೆ ರಸ ಕುಡಿಯುವುದರಿಂದ ಕೆಲವು ಅಪಾಯಗಳು ಉಂಟಾಗಬಹುದು, ಅವುಗಳೆಂದರೆ:

ಎದೆಯುರಿ ಮುಂತಾದ ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (GERD) ಲಕ್ಷಣಗಳನ್ನು ಉಲ್ಬಣಗೊಳಿಸುವುದು .

ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ, ಆದರೆ ಅಪರೂಪ. ಕೆಲವು ಔಷಧಿಗಳೊಂದಿಗೆ ಸಂವಹನ ನಡೆಸಿ ನೀವು ಕಾಲಾನಂತರದಲ್ಲಿ ಸಕ್ಕರೆ ಯುಕ್ತ ಹೆಚ್ಚು ಜ್ಯೂಸ್ ಕುಡಿದರೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

-------------- Hari Om ---------------