Tuesday, September 16, 2025

Kari Mani --Black Bead

 

ಕರಿಮಣಿ / Black Beads

 


                                     Kari Mani Male

 

ಕರಿಮಣಿ ಸರವನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು?

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ವಿಶೇಷ ಹಿನ್ನೆಲೆ ಇದೆ.

ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ.


ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ - ಅದರಲ್ಲಿ ಮಾಂಗಲ್ಯ ಯಾವುದು?


ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು?


ಬಂಗಾರದ ಒಡವೆಯಲ್ಲಿ ಕರಿಮಣಿಗಳೇಕೆ?


ಕರಿಮಣಿಸರದಲ್ಲಿ ಹವಳವೇಕೆ? ಎಂಬುದನ್ನು ನೋಡೋಣ.


                                                             Kari Mani - Mangala Suthra

 

ಆದಿಶಂಕರ ರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ.


ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ.


ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.


ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ. ಕರಿಮಣಿಗಳನ್ನು
ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿ ಕೊಳ್ಳ ಬೇಕು/ ಹೊಂದಿ ಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.

ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ.


ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.


ಮಂಗಲ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತ- ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡು ಬರುತ್ತವೆ.
ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ/
ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ,
ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ - ಹೀಗೆ ವೈವಿಧ್ಯಗಳು.

 

                                                                               Pic -1

 

ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ.
ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ.

ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಧರಿಸುತ್ತಿದ್ದಾರೆ.
ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಾರ್ಹ ಆಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ.


ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ.

 

                                                                                  Pic-2

 

ರಾಶಿಗಳಿಗೆ ಕರಿಮಣಿಗಳ ಸಂಖ್ಯೆ:

ಮೇಷ ರಾಶಿಗೆ- 21 ಮಣಿಗಳು.
ವೃಷಭ ರಾಶಿಗೆ- 40 ಮಣಿಗಳು.
ಮಿಥುನ ರಾಶಿಗೆ- 34 ಮಣಿಗಳು.
ಕಟಕ ರಾಶಿಗೆ- 20 ಮಣಿಗಳು.
ಸಿಂಹ ರಾಶಿಗೆ- 18 ಮಣಿಗಳು.
ಕನ್ಯಾ ರಾಶಿಗೆ- 34 ಮಣಿಗಳು.
ತುಲಾ ರಾಶಿಗೆ- 40 ಮಣಿಗಳು.
ವೃಶ್ಚಿಕ ರಾಶಿಗೆ- 21 ಮಣಿಗಳು.
ಧನುಸ್ಸು ರಾಶಿಗೆ- 32 ಮಣಿಗಳು.
ಮಕರ ರಾಶಿಗೆ- 38 ಮಣಿಗಳು.
ಕುಂಭ ರಾಶಿಗೆ- 38 ಮಣಿಗಳು.
ಮೀನ ರಾಶಿಗೆ- 32 ಮಣಿಗಳು.


-------------- Hari Om ------------


 


  

 

Monday, September 15, 2025

Lord Hayagriva

 

                                                         Lord Hayagriva with Laxmi Devi

 

ಹಯಗ್ರೀವ ಅವತಾರ / Lord Hayagriva

 

ಒಮ್ಮೆ ವಿಷ್ಣು ಸುಮಾರು 10000 ವರ್ಷಗಳ ಕಾಲ ಯುದ್ಧ ಮಾಡುವ ಪರಿಸ್ಥಿತಿ ಬಂದಿತು. ಧೀರ್ಘಾವಧಿಯ ಯುದ್ಧದಿಂದಾಗಿ ವಿಷ್ಣುಗೆ ಆಯಾಸವಾಗಿ ಯುದ್ಧ ಸಾಕು ಎನಿಸಿ, ದಣಿ ವಾರಿಸಿಕೊಳ್ಳಲು ಮಲಗಬೇಕೆಂದು ತನ್ನ ಧನುಸ್ಸನ್ನು ಪಕ್ಕ ದಲ್ಲಿಟ್ಟುಕೊಂಡು ಧನುಸ್ಸಿನ ಮೇಲೆ ತನ್ನ ಕುತ್ತಿಗೆಯನ್ನು ಒರಗಿಸಿ ಕೊಂಡು ಮಲಗಿ ಗಾಡ ನಿದ್ರೆಗೆ ಜಾರಿದ. ರಾಕ್ಷಸರು ಇನ್ನೂ ಯುದ್ಧ ಮಾಡುತ್ತಿರುವ ಸಮಯದಲ್ಲೇ ಶ್ರೀ ಹರಿ ಈ ರೀತಿ ಯೋಗ ನಿದ್ರೆಗೆ ಜಾರಿದರೆ ಗತಿ ಏನು? ಎಂದು ದೇವತೆಗಳು ಚಿಂತಿಸಿ ಶ್ರೀಹರಿಯನ್ನು ಎಚ್ಚರಗೊಳಿಸಬೇಕು ಎಂದು ಬ್ರಹ್ಮನ ಜೊತೆ ಬಂದು ಹರಿಯನ್ನು ಪ್ರಾರ್ಥಿಸಿ ಎಚ್ಚರಿಸಲು ಪ್ರಯತ್ನಿಸಿದರು.


ಆದರೆ ಶ್ರೀ ಹರಿ ಎಚ್ಚರಗೊಳ್ಳಲಿಲ್ಲ ಪುನಃ ಜೋರಾಗಿ ಕೂಗಿದರು, ಶಂಖ ಊದಿದರು, ಗಂಟೆ ಬಾರಿಸಿದರು ವಿಷ್ಣು ಏಳಲಿಲ್ಲ, ಆಗ ಬ್ರಹ್ಮ “ಗುಂಗರಿ” ಎಂಬ ಕೊರೆಯುವ ಕೀಟವನ್ನು ಸೃಷ್ಟಿ ಮಾಡಿದ. ಅದಕ್ಕೆ ಹೇಳಿದ ನೀನು ಹೋಗಿ ವಿಷ್ಣು ತಲೆ ಒರಗಿಸಿಕೊಂಡ ಧನುಸ್ಸಿಗೆ ಎಳೆದು ಬಿಗಿದು ಕಟ್ಟಿದ ಹಗ್ಗವನ್ನು ಕೊರೆದು ಕತ್ತರಿಸು. ಆಗ ಧನುಸ್ಸು ಅಗಲವಾಗಿ ವಿಷ್ಣು ತಲೆ ಎತ್ತಬೇಕಾಗುತ್ತೆ ಎಚ್ಚರಗೊಳ್ಳುತ್ತಾನೆ ಎಂದು ಹೇಳಿದ.


                                                                     Lord Hayagriva

 

 ಆದರೆ ಗುಂಗುರಿ ಹೇಳಿತು ನಾನು ಯಾಕೆ ವಿಷ್ಣು ವನ್ನು ಎಬ್ಬಿಸಬೇಕು. ಅಷ್ಟು ಚೆನ್ನಾಗಿ ನಿದ್ರೆ ಮಾಡಿರುವ ವಿಷ್ಣುವನ್ನು ನೋಡುವುದು ಬಿಟ್ಟು ಎಬ್ಬಿಸುವುದು ಸರಿಯಲ್ಲ ಎಂದಿತು. ಪುನಃ
ಬ್ರಹ್ಮ “ಗುಂಗರಿ” ಕೀಟಕ್ಕೆ ಹೇಳಿದ, ನೋಡು ಈ ಕೆಲಸ ಅಗತ್ಯವಾಗಿ ಆಗಬೇಕಿದೆ. ನೀನು ವಿಷ್ಣುವಿನ ಬಿಲ್ಲಿನ ಹಗ್ಗವನ್ನು ತುಂಡರಿಸಿ ಎಬ್ಬಿಸಿದರೆ, ಋಷಿಮುನಿಗಳು ಯಜ್ಞ ಯಾಗಾದಿಗಳನ್ನು ಮಾಡಿ ದೇವತೆಗಳಿಗೆ ಅರ್ಪಿಸುವ ಹವಿಸ್ಸನಲ್ಲಿ ಆಚೆ, ಈಚೆ ಸ್ವಲ್ಪ ಉದುರುವ ಹವಿಸ್ಸು ನಿನಗೆ ಸೇರಲಿ ಎಂದು ಆಶೀರ್ವಾದ ಮಾಡುತ್ತೇವೆ. ನಿನಗೆ ಯಾವತ್ತೂ ಹವಿಸ್ಸೀನ ಕೊರತೆಯಾಗುವುದಿಲ್ಲ ಎಂದನು. ದೇವತೆ ಗಳಿಗೆ ಕೊಡಬೇಕಾದ ಹವಿಸ್ಸು ತನಗೆ ಸಿಗುತ್ತದೆ ಎಂಬ ಆಸೆಯಿಂದ ಬ್ರಹ್ಮ ಹೇಳಿದ ಕೆಲಸಕ್ಕೆ ಒಪ್ಪಿಕೊಂಡು ಹೋಗಿ ವಿಷ್ಣು ಮಲಗಿದ ಬಿಲ್ಲಿಗೆ ಕಟ್ಟಿದ ಹಗ್ಗವನ್ನು ಗುಂಗರಿ ಕೊರೆದು ತುಂಡು ಮಾಡುತ್ತದೆ. ಹೀಗೆ ತುಂಡು ಮಾಡಿದ ತಕ್ಷಣವೇ ಆಚಾತುರ್ಯ ನಡೆದು ಹೋಯಿತು. ಕತ್ತರಿಸಿದ ಹಗ್ಗ ಚಂಗನೆ ಹಾರಿದಂತೆ ಒಂದೇ ಹೊಡೆತಕ್ಕೆ ಹೋಗಿದ್ದು ವಿಷ್ಣುವಿನ ಕತ್ತನ್ನು ಹಾರಿಸಿಕೊಂಡು ಹೋಯಿತು.

ಇದನ್ನು ಕಂಡು ಬ್ರಹ್ಮನಿಗೆ, ದೇವತೆಗಳಿಗೆ ಗಾಬರಿಯಾಯಿತು. ಕುತ್ತಿಗೆ ಇಲ್ಲದ ವಿಷ್ಣುವಿನ ವಿಗ್ರಹವನ್ನು ನೋಡುವುದಾದರೂ ಹೇಗೆ?ಮುಂದಿನ ಗತಿಯೇನು? ಎಲ್ಲರೂ ಗಾಬರಿಯಾದರು. ಸಾಮಾನ್ಯವಾಗಿ ಸಮಸ್ಯೆಗಳು ಬಂದಾಗ ಎಲ್ಲರೂ ವಿಷ್ಣುವಿನ ಬಳಿ ಬರುತ್ತಿದ್ದರು. ಆದರೆ ವಿಷ್ಣುವಿನ ಕುತ್ತಿಗೆ ಕತ್ತರಿಸಿ ಹೋಗಿರುವಾಗ, ಈಗ ಯಾರನ್ನು ಪ್ರಾರ್ಥನೆ ಮಾಡಬೇಕು ಎಂದು ದೇವತೆಗಳು ಚಿಂತಿಸಿದರು.
ಆಗ ಬ್ರಹ್ಮ ಮತ್ತು ದೇವಾದಿ ದೇವತೆಗಳೆಲ್ಲ, ವೇದೋಪಾಸನೆಯನ್ನು ಮಾಡಿರುವ ಜಗದ್ಧಾತ್ರಿಯನ್ನು ಪ್ರಾರ್ಥಿಸಬೇಕು ಎಂದು, ಎಲ್ಲರೂ ಭಕ್ತಿಯಿಂದ ದೇವಿಯಲ್ಲಿ ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ದೇವಿ ಪ್ರತ್ಯಕ್ಷಳಾಗಿ ದೇವತೆಗಳಿಗೆ ಹೇಳಿದಳು ನೀವು ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಇದೊಂದು ಮಹಾಲೇಲೆ ಕಾರ್ಯ ಕಾರಣಕ್ಕಾಗಿಯೇ ನಡೆದಿರುವುದು. ಇದು ನಿಮ್ಮಿಂದ ಆದ ತಪ್ಪಲ್ಲ ಬಹಳ ಹಿಂದೆ ಬಂದು ಘಟನೆ ನಡೆದಿದ್ದು ಅದಕ್ಕೆ ಸಂಬಂಧಪಟ್ಟಿದೆ.‌ ಎಂದು ಆ ಘಟನೆ ಯನ್ನು ಹೇಳತೊಡಗಿದಳು.

ಒಮ್ಮೆ ವಿಷ್ಣು ಸುಂದರವಾಗಿ ಕಾಣುವ ಲಕ್ಷ್ಮಿಯನ್ನು ನೋಡಿ ಅಭಿಮಾನ ಹಾಗೂ ಸಂತೋಷದಿಂದ ನಕ್ಕನಂತೆ, ‌ ಇದನ್ನು ನೋಡಿದ ಲಕ್ಷ್ಮಿ ನನ್ನ ನೋಡಿ ಏಕೆ ನಕ್ಕಿರಿ ಎಂದು ಕೇಳಿದಾಗ ವಿಷ್ಣು ಏನೂ ಇಲ್ಲ ಹಾಗೆ ಸುಮ್ಮನೆ ಎಂದನಂತೆ. ತನ್ನಷ್ಟಕ್ಕೆ ತಾನೇ ಅಂದುಕೊಂಡ ಲಕ್ಷ್ಮಿ ಬಹುಶಃ ನಾನು ಚೆನ್ನಾಗಿಲ್ಲದಿರಬಹುದು ಅದನ್ನು ನೋಡಿ ನಕ್ಕಿರಬೇಕು. ಇಲ್ಲದಿದ್ದರೆ ಸುಮ್ಮ ಸುಮ್ಮನೆ ನಗಲು ಕಾರಣವೇನು? ಹಾಗಂದುಕೊಳ್ಳುತ್ತಿದ್ದಂತೆ ಅವಳಲ್ಲಿ ತಾಮಸ ಜಾಗೃತವಾಗಿ ಕೋಪ ಬಂದು, ನನ್ನನ್ನು ನೋಡಿ ನಕ್ಕ ನಿನ್ನ ತಲೆ ಬಿದ್ದು ಹೋಗಲಿ ಎಂದು ವಿಷ್ಣುವಿಗೆ ಶಾಪ ಕೊಟ್ಟಳು

 

                                                             Another picture of the Lord

 

ಆ ಶಾಪದ ಕಾರಣದಿಂದ ವಿಷ್ಣುವಿನ ತಲೆ ಬಿದ್ದುಹೋಗಿದೆ. ಇದು ಆಗಿದ್ದು ಸಹ ಮುಂದೆ ನಡೆವ ಲೀಲೆಗಾಗಿ ಎಂದು ಮುಂದುವರೆಸಿ, ಕೆಲವೇ ಸಮಯದಲ್ಲಿ ‘ಹಯಗ್ರಿವ’ ಎಂಬ ರಾಕ್ಷಸ ಹುಟ್ಟಿ, ಅವನು ವರಗಳನ್ನು ಪಡೆಯಲು, ದೇವಿಗೆ ಅತ್ಯಮೂಲ್ಯವಾದ ಏಕಾಕ್ಷರಿ ಸ್ವರೂಪ ಮಂತ್ರ ಪಠಿಸುತ್ತಾ ಉಪವಾಸ ಹಾಗೂ ಜಿತೇಂದ್ರಿಯ ಗೆದ್ದವನಾಗಿ ಕಠಿಣ ತಪಸ್ಸು ಮಾಡಿದಾಗ ನಾನು ಪ್ರತ್ಯಕ್ಷವಾಗಬೇಕಾಯಿತು. ವರ ಕೇಳು ಎಂದಾಗ ನನಗೆ ಮೃತ್ಯು ಬರುವುದು ಬೇಡ ಎಂದು ಕೇಳಿದಾಗ ದೇವಿ ಹೇಳಿದಳು ಮೃತ್ಯು ಎಲ್ಲರಿಗೂ ಬರುತ್ತದೆ. ಅದು ಸಾಧ್ಯವಿ ಲ್ಲ ಇದರ ಬದಲಿಗೆ ಬೇರೆ ವರ ಕೇಳು ಎಂದಾಗ, ‌ ನಾನು ಸಾಯುವುದೇ ಇದ್ದರೆ ನನ್ನದೇ ರೂಪವಾದ ಹಯಗ್ರೀವದಿಂದ ಸಾಯುವಂತಾಗಲಿ ಎಂದು ವರ ಕೇಳಿದ ಅದನ್ನು ಅನುಗ್ರಹಿಸಿದ್ದೇನೆ.



ಈಗಂತೂ ದುಷ್ಟ, ಶಕ್ತಿವಂತ, ಬಲಶಾಲಿ ವರಗಳನ್ನು ಪಡೆದ ರಾಕ್ಷಸನನ್ನು ಸಂಹಾರ ಮಾಡಲು ಸಾಮಾನ್ಯರಿಂದ ಸಾಧ್ಯವಿಲ್ಲ, ಇದಕ್ಕಾಗಿ ಒಂದು ಲೀಲಾ ನಾಟಕ ನಡೆಯ ಬೇಕಿತ್ತು ಆ ಕಾರಣಕ್ಕಾಗಿ ಇದು ನಡೆದಿದೆ ಎಂದು ಹೇಳಲು, ಕೇಳಿದ ಬ್ರಹ್ಮನಿಗೆ ಅರ್ಥವಾಗಿ ಯೋಗಶಕ್ತಿಯಿಂದ ಕುದುರೆ ತಲೆಯನ್ನು ತಂದು ವಿಷ್ಣುವಿನ ತಲೆಗೆ ಜೋಡಿಸಿದಾಗ ವಿಷ್ಣುವಿಗೆ ‘ಹಯಗ್ರೀವ’ (ಕುದುರೆ) ರೂಪ ಬಂದಿತು. ಈ ಕಾರಣ ಕ್ಕಾಗಿ ವಿಷ್ಣು ನಿಮಿತ್ತ ಮಾತ್ರಕ್ಕೆ ಹಯಗ್ರೀವ ಅವತಾರ ಎತ್ತ ಬೇಕಾಯಿತು.


ವಿಷ್ಣು ತಾಳಿದ ಅವತಾರಗಳಲ್ಲಿ ರಾಮಾವತಾರ ಕೃಷ್ಣ ಅವತಾರ ಇವೆರಡು ಪೂರ್ಣ ಅವತಾರಗಳು. ಪರಶುರಾಮ ಅವತಾರವು ಇಷ್ಟಲ್ಲದಿದ್ದರೂ ವಿಸ್ತಾರವಾಗಿದೆ. ಮತ್ಸ್ಯ, ಕೂರ್ಮ, ವರಾಹ , ನರಸಿಂಹ, ವಾಮನ ಮುಂತಾದ ಅವತಾರಗಳು ನಿಮಿತ್ತಾವತಾರ ಆಗಿವೆ) ಹಯಗ್ರೀವ ಅವತಾರ ತಾಳಿದ ಮಹಾವಿಷ್ಣು‌ ಈ ರೂಪದಿಂದ ಹಯಗ್ರೀವ ರಾಕ್ಷಸನೊಡನೆ ಯುದ್ಧ ಮಾಡಿ ಹಯಗ್ರೀವನನ್ನು ಸಂಹರಿಸಿ, ಅವನು ಬ್ರಹ್ಮನಿಂದ ಅಪಹರಿಸಿಕೊಂಡು ಹೋಗಿದ್ದ ವೇದಗಳನ್ನೆಲ್ಲ ಮರಳಿ ತಂದನು.

ದೇವರು ಕೂಡ ಶಾಪ ಕರ್ಮದ ನಿಯಮಗಳಿಗೆ ಭದ್ಧರಾಗಿರುತ್ತಾರೆ. ವಿಷ್ಣು ತನ್ನ ತಲೆ ಕಳೆದುಕೊಂಡು ಜ್ಞಾನರೂಪವಾದ ಹಯಗ್ರೀವ ರೂಪದಲ್ಲಿ ಮತ್ತೆ ಜನಿಸಿದರು ಎಂಬುದು ಜ್ಞಾನವು ಶರೀರಕ್ಕಿಂತ ಶ್ರೇಷ್ಠ ಎಂಬುದರ ಸಂಕೇತವಿರಬಹುದು.

ಶ್ರೀನಾಥ ಗೋವಿಂದ ಆನಂದ ಮೂರುತಿಗೆ
ಮಾಲಿನಿ ಮಣಿಯರು ಬೆಳಗುವೆವು ಆರತಿಯ!!

ವೇದಗಳನ್ನೊದ್ಧಾರ ಗೈದ ಚಿನ್ಮಯನಿಗೆ
ಆದಿ ಮೂರುತಿ ನಮ್ಮ ಮುದ್ದು ಶ್ರೀ ಕೃಷ್ಣನಿಗೆ!!

ನೀರೊಳಿರುತಿಹ ನಾರಿ ವಸ್ತ್ರಗಳನಪಹರಿಸಿ
ಚೋರತನದಲ್ಲಿ ಮರವನೇರಿದ ಮುರಹರಿಗೆ!!

ಹತಾವತಾರನಿಗೆ ರುಕ್ಮಿಣಿ ರಮಣನಿಗೆ
ಮತ್ತೆ ದೇವಕಿ ದೇವಿ ಸುತನಾದ ಶ್ರೀಹರಿಗೆ!!

Let Lord Laxmi Hayagriva Bless us ALL

------------- Hari Om ------------


 


 

 

 

Saturday, September 6, 2025

Anantha Padmanabha Swamy

 

ಅನಂತ ಪದ್ಮನಾಭ ವ್ರತದ ಕಥೆ

Story of Sri Lord AnanthaNabha Pooja

 


                            Sri Anantha Padmanabha

  

ನೈಮಿಷಾರಣ್ಯದಲ್ಲಿ ಶೌನಕಾದಿಗಳಿಗೆ ಸೂತ ಮಹರ್ಷಿಗಳು ಈ ಕಥೆಯನ್ನು ಹೇಳುತ್ತಾರೆ. ಪೂರ್ವದಲ್ಲಿ ಭಾಗೀರಥಿ ನದಿಯ ತೀರದಲ್ಲಿ ಧರ್ಮಾಸಕ್ತನಾಗಿ,ತಮ್ಮಿಂದ ರೂಡಗೂಡಿ ಅರಣ್ಯವಾಸ ಮಾಡುತ್ತಿರುವ ಧರ್ಮರಾಜನು ಅತ್ಯಂತ ಕಷ್ಟಪಡುತ್ತಿದ್ದನು. ಆ ಸಮಯಕ್ಕೆ ಅಲ್ಲಿಗೆ ಮಹಾನುಭಾವನಾಗಿ ಬಂದ ಶ್ರೀಕೃಷ್ಣನಿಗೆ ನಮಸ್ಕರಿಸಿದ ಯುಧಿಷ್ಠಿರನು, ಕರುಣಾ ಮೂರ್ತಿಯಾದ ಶ್ರೀಕೃಷ್ಣನೇ, ನನ್ನ ಸಹೋದರರೊಂದಿಗೆ, ವನವಾಸದಿಂದ ಅತ್ಯಂತ ದುಃಖ ಅನುಭವಿಸುತ್ತಿದ್ದೇವೆ. ಈ ಕಷ್ಟಗಳಿಂದ ಪಾರಾಗುವ ಯಾವುದಾದರೂ ವ್ರತವಿದ್ದರೆ ಹೇಳು ಎಂದು ಕೇಳಿದಾಗ, ಶ್ರೀಕೃಷ್ಣನು ಧರ್ಮರಾಯ ಕೇಳು ಪುರುಷರಿಗೂ, ಸ್ತ್ರೀಯರಿಗೂ, ಸಕಲ ಕಾಮ್ಯ ಸಿದ್ದಿ ಕೊಡುವ 'ಅನಂತ ವ್ರತ' ವೆಂಬ ಒಂದು ವ್ರತವಿದೆ. ಈ ವ್ರತವನ್ನು ಭಾದ್ರಪದ ಮಾಸದಲ್ಲಿ ಶುಕ್ಲ ಪಕ್ಷದ ಚತುರ್ದಶಿಯಂದು ಮಾಡಬೇಕು ಎಂದು ಹೇಳಲು ಧರ್ಮರಾಯನು ಆ ವ್ರತ ಕಥೆಯನ್ನು ಹೇಳು ಎಂದು ಕೃಷ್ಣನಿಗೆ ಹೇಳುತ್ತಾನೆ.

ಕೃತಯುಗದಲ್ಲಿ ಸುಮಂತನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ವಸಿಷ್ಠ ಗೋತ್ರ ದವನು. ಅಧ್ಯಯನ ಶಾಸ್ತ್ರ ಸಂಪನ್ನನೂ ಆಗಿದ್ದನು. ಆತನು ಭೃಗು ಮಹರ್ಷಿಗಳ ಮಗಳಾದ 'ದೀಕ್ಷಾ' ಎಂಬ ಕನ್ಯೆಯನ್ನು ವಿವಾಹವಾಗಿದ್ದನು. 'ದೀಕ್ಷಾ' ದೇವಿಯು ಗರ್ಭವತಿಯಾಗಿ ಸಕಲ ಗುಣವುಳ್ಳ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ 'ಶೀಲೆ' ಎಂದು ಹೆಸರಿಟ್ಟರು. ದೀಕ್ಷಾ ದೇವಿಯು ಅತೀ ಜ್ವರದ ತಾಪದಿಂದ ಮೃತಪಟ್ಟಳು. ಆಗ ಸುಮಂತನು ಯಜ್ಞ ಯಾಗ ಕಾರ್ಯಗಳಿಗೆ ತೊಂದರೆಯಾಗಬಾರದೆಂದು 'ಕರ್ಕಶ' ಎಂಬ ಕನ್ಯೆಯನ್ನು ವಿವಾಹವಾದನು. ಬಹಳ ಕ್ರೂರ ಸ್ವಭಾವ ಗುಣವುಳ್ಳ ಅವಳು ಜಗಳ ಗಂಟಿಯೂ ಆಗಿದ್ದಳು.

ಮಗಳಾದ 'ಶೀಲೆ'ಯು ವಿವಾಹಯೋಗ್ಯಳಾದಾಗ ಸುಮಂತನು ಮಗಳನ್ನು ಮಹಾಮಹಿಮರಾದ 'ಕೌಂಡಿನ್ಯ' ಋಷಿಗಳಿಗೆ ಕೊಟ್ಟು ವಿವಾಹ ಮಾಡಿದನು. ಗಂಡನ ಮನೆಗೆ ಕಳುಹಿಸುವಾಗ, ಅಳಿಯನಿಗೆ ಕೊಡತಕ್ಕ ವಸ್ತ್ರಾಭರಣಗಳನ್ನು ಸ್ವಲ್ಪ ಕೊಡಬೇಕೆಂದು ಪತ್ನಿಯನ್ನು ಕೇಳಿದಾಗ ಅತಿ ನಿಷ್ಠುರವಾಗಿ ಕೊಡಲು ಏನೂ ಇಲ್ಲ ಎಂದಳು. ಬೇರೆ ದಾರಿ ಕಾಣದೆ ಸುಮಂತನು ಮದುವೆಗೆಂದು ತಂದ ಉಳಿದ ಸ್ವಲ್ಪ ಹಿಟ್ಟನ್ನು ಕೊಟ್ಟು ಅಳಿಯ ಮಗಳನ್ನು ಕಳುಹಿಸಿದನು. ಕೌಂಡಿನ್ಯನು ಸದಾಚಾರ ಸಂಪತ್ತುಳ್ಳ ಪತ್ನಿಯೊಡನೆ ಬಂಡಿಯಲ್ಲಿ ಕುಳಿತು ತನ್ನ ಆಶ್ರಮಕ್ಕೆ ಹೊರಟನು

 

                                                       Sri Anantha Padmanabha Swamy

 

ಹೋಗುವಾಗ ದಾರಿ ಮಧ್ಯದಲ್ಲಿ ಒಂದು ನದಿ ತೀರದಲ್ಲಿ ಬಂಡಿಯನ್ನು ನಿಲ್ಲಿಸಿ,
ಮಧ್ಯಾಹ್ನವಾದ್ದರಿಂದ ಮಾಧ್ಯಾಹ್ನಿಕವನ್ನು ಮಾಡುವುದಕ್ಕಾಗಿ ಕೌಂಡಿನ್ಯರು ನದಿಯ ಕಡೆಗೆ ಹೊರಟರು. ಆ ದಿವಸ 'ಅನಂತ ಚತುರ್ದಶಿ' ಆದುದರಿಂದ ಅನೇಕ ಮಂದಿ ಮಹಿಳೆಯರು ಕೆಂಪು ಸೀರೆಗಳನ್ನು ಉಟ್ಟುಕೊಂಡು ಬಹಳ ಶ್ರದ್ಧಾ ಭಕ್ತಿಯಿಂದ ಅನಂತಪದ್ಮನಾಭ ಸ್ವಾಮಿಯನ್ನು ಪೂಜೆ ಮಾಡುತ್ತಿದ್ದರು. ಕೌಂಡಿನ್ಯ ರ ಸತಿಯಾದ ಶೀಲೆಯು ಅದನ್ನು ನೋಡಿ, ಅವರ ಸಮೀಪಕ್ಕೆ ಹೋಗಿ, " ಮಾತೆಯರೇ, ನೀವು ಮಾಡುತ್ತಿರುವ ಪೂಜೆ ಯಾವುದು, ಯಾವ ದೇವರನ್ನು ಪೂಜಿಸುತ್ತಿದ್ದೀರಿ, ಇದರ ಹೆಸರೇನು, ನನಗೂ ಸ್ವಲ್ಪ ಹೇಳಿ" ಎಂದು ಕೇಳಿದಳು.

ಆ ಮಹಿಳೆಯರು, "ನಾವು ಅನಂತನನ್ನು ಪೂಜಿಸುತ್ತಿರುವೆವು. ಇಂದು ಭಾದ್ರಪದ ಶುಕ್ಲ ಚತುರ್ದಶಿ. ಈ ದಿನ ಮಹಾವಿಷ್ಣುವನ್ನು ಅನಂತ ಮತ್ತು ಯಮುನೆಯ ರೊಡನೆ ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುವುದು" ಇದನ್ನು ತಿಳಿದು ಸಂತಸಗೊಂಡ ಶೀಲೆಯು ಅವರ ಸಹಾಯದಿಂದ ವ್ರತವನ್ನು ಮಾಡಿ ಅನಂತನ ದಾರವನ್ನು ಕೈಗೆ ಕಟ್ಟಿಕೊಂಡು ದಾರಿಯಲ್ಲಿ ಆಹಾರಕ್ಕಾಗಿ ತಂದಿದ್ದ ಹಿಟ್ಟನ್ನು ಬ್ರಾಹ್ಮಣರಿಗೆ ಕೊಟ್ಟು ಪತಿಗೆ ಸ್ವಲ್ಪ ಆಹಾರವನ್ನು ಕೊಟ್ಟು ಉಳಿದ ಸ್ವಲ್ಪವನ್ನು ತಾನು ಸೇವಿಸಿ ಸಂತುಷ್ಟಳಾಗಿ ತನ್ನ ಪತಿಯೊಡನೆ ಆಶ್ರಮಕ್ಕೆ ಬಂದಳು. ಆಶ್ರಮಕ್ಕೆ ಹೋದ ತಕ್ಷಣವೇ ಅನಂತಸ್ವಾಮಿಯ ಅನುಗ್ರಹದಿಂದ ಅನಂತವಾದ ಸರ್ವೋತ್ತಮನಾದ ಲೋಕ ಸಮ್ಮತವಾದ ಅಷ್ಟೈಶ್ವರ್ಯಗಳು ವ್ರತಮಹಿಮೆಯಿಂದ ದೊರಕಿತು. ಕೌಂಡಿನ್ಯ ಮಹಾಮುನಿಯ ಆಶ್ರಮವು ಸಕಲ ಐಶ್ವರ್ಯ ಗಳಿಂದಲೂ ಧನ ಧಾನ್ಯ ಗಳಿಂದಲೂ ಅತಿಥಿ ಸತ್ಕಾರದಿಂದ ಕೂಡಿ ಅಧಿಕವಾಗಿ ಪ್ರಜ್ವಲಿಸಿತು. ಶೀಲೆಯು ಸಕಲ ಸರ್ವಾಭರಣಗಳನ್ನು ಧರಿಸಿ ಸಾವಿತ್ರಿಗೆ ಸಮಾನಳಾದಳು. ಇದನ್ನು ನೋಡಿದ ಬಂಧುಗಳು ಅನಂತಪದ್ಮನಾಭನ ಅನುಗ್ರಹದಿಂದ ಈಕೆ ಇಷ್ಟು ಸಂತೋಷದಿಂದ ಇದ್ದಾಳೆ ಎಂದು ಮಾತಾಡಿಕೊಳ್ಳುತ್ತಿದ್ದರು



                                                         another picture of the Lord 


 

ಹೀಗಿರುವಾಗ ಒಮ್ಮೆ ಕೌಂಡಿನ್ಯ ರು ಪತ್ನಿಯ ಕೈಯಲ್ಲಿದ್ದ ಕೆಂಪು ದಾರವನ್ನು ನೋಡಿ, ಅದು ಏನೆಂದು ಕೇಳಲು ಆಕೆಯು ಅನಂತ ವ್ರತದ ವಿಚಾರವನ್ನು ತಿಳಿಸಿ ವ್ರತದ ಫಲವಾಗಿ ಸ್ವಾಮಿಯ ಅನುಗ್ರಹದಿಂದ ತಮಗೆ ಧನಧಾನ್ಯ ಐಶ್ವರ್ಯಗಳು ದೊರಕಿದೆ ಎಂದಳು. ಇದನ್ನು ಕೇಳಿ ಕೋಪಗೊಂಡ ಕೌಂಡಿನ್ಯ ರು ತಮಗೆ ದೊರಕಿರುವ ಸಕಲಧನ ಧಾನ್ಯವು, ತಮ್ಮ ತಪಸ್ಸಿನ ಸಾಧನೆಯ ಫಲವೆಂದು ನುಡಿದು, ಪತ್ನಿಯ ಕೈಯಲ್ಲಿದ್ದ ದಾರವನ್ನು ಕಿತ್ತು ಹತ್ತಿರದಲ್ಲಿದ್ದ ಬೆಂಕಿಗೆ ಹಾಕುತ್ತಾರೆ. ಶೀಲೆಯು ತಕ್ಷಣ ಭಯದಿಂದ ಓಡಿ ಬಂದು ದಾರವನ್ನು ತೆಗೆದು ಹಾಲಿನಲ್ಲಿ ಹಾಕಿ ರಕ್ಷಿಸಿದಳು.( ಸಾಧಾರಣವಾಗಿ ಹೆಣ್ಣುಮಕ್ಕಳು ಯಾವುದೇ ವ್ರತ ಕಥೆ ಗಳನ್ನು ಮಾಡಿ ದಾರವನ್ನು ಕಟ್ಟಿಕೊಂಡು ಅದನ್ನು ವಿಸರ್ಜಿಸಿದಾಗ ಹಾಲಿನಲ್ಲಿ ಅದ್ದಿ ಹಾಲು ಬರುವ ಗಿಡಗಳ ಮೇಲೆ ಹಾಕುತ್ತೇವೆ.ಹಾಲು ಬರುವ ಗಿಡ ಎಂದರೆ, ನಂಜುಬಟ್ಟಲು, ಹೂವಿನ ಗಿಡ.) ಕೌಂಡಿನ್ಯ ರ ಈ ಕೃತ್ಯದಿಂದಾಗಿ ಅವರ ಐಶ್ವರ್ಯ ದಿನೇ ದಿನೆ ನಶಿಸಿ ಹೋಯಿತು. ಇದನ್ನು ಅರಿತ ಕೌಂಡಿನ್ಯರು ತಮ್ಮ ಅಹಂಕಾರದಿಂದ ಈ ರೀತಿ ಆಯಿತು ಎಂದು ತಿಳಿದು, ಬಹಳ ನೊಂದು ಅನಂತನಿಗಾಗಿ ಕಾಡಿನಲ್ಲಿ ಅಲೆದಾಡಿ ಹುಡುಕಾಟ ನಡೆಸುತ್ತಾರೆ. ಬಹಳ ಕಷ್ಟಪಟ್ಟು ನೊಂದು-ಬೆಂದ ನಂತರ ಅವರ ನಿಷ್ಠೆ ಭಕ್ತಿಗೆ ಮೆಚ್ಚಿ 'ಅನಂತನು' ಅವರಿಗೆ ದರ್ಶನ ಕೊಟ್ಟು ಆಶೀರ್ವದಿಸುತ್ತಾನೆ. ನಂತರ ಕೌಂಡಿನ್ಯ ರು ಅನಂತನ ವ್ರಥವನ್ನು ಆಚರಿಸಿ ಅದರ ಪ್ರಭಾವದಿಂದ ಇಷ್ಟಾರ್ಥಗಳನ್ನು ಪಡೆದು, ಸಕಲ ಸಂಪತ್ತನ್ನು ಅನುಭವಿಸಿ, ಇಹಪರ ದಲ್ಲಿ ಮೋಕ್ಷವನ್ನು ಹೊಂದಿ ಈಗಲೂ ಉಡುರಾಶಿಗಳ ಮಧ್ಯದಲ್ಲಿ 'ಪುನರ್ವಸು ನಕ್ಷತ್ರ ವಾಗಿ' ಪ್ರಕಾಶಿಸುತ್ತಿದ್ದಾರೆ.

ಭವಿಷ್ಯೋತ್ತರಪುರಾಣದಲ್ಲಿ ಈ ಕಥೆಯಿಂದ ಅನಂತಪದ್ಮನಾಭ ಸ್ವಾಮಿಯ ಮಹಾತ್ಮೆಯನ್ನು ಅಲ್ಪನೂ ಕಲ್ಪನಾಗುವ ವ್ರತವಾಗಿದ್ದು, ಅನಂತ ವರಗಳನ್ನು ಕರುಣಿಸುವ 'ಅನಂತಪದ್ಮನಾಭ ಮಹಾವಿಷ್ಣುವು ಪದ್ಮನಾಭ ನಾಗಿ ಅನಂತನಲ್ಲಿ ಮಿಲನ ವಾದ ವ್ರತ ವಾಗಿದೆ. ಇದನ್ನು 'ಮೋಕ್ಷ ವ್ರತ'ಎಂದು ಕರೆಯುತ್ತಾರೆ. ಈ ವ್ರತವು ವನವಾಸ ದಲ್ಲಿರುವ ಪಾಂಡವರಿಗೆ ಶ್ರೀಕೃಷ್ಣನು ಹೇಳಿ ಧರ್ಮರಾಜ ನಿಂದ ವ್ರತವನ್ನು ಮಾಡಿಸಿ ಅವರ ವಿಜಯಕ್ಕೆ ಕಾರಣವಾಯಿತೆಂದು ಹೇಳುತ್ತಾರೆ. ಅಗಸ್ತ್ಯ ಮಹರ್ಷಿಗಳಿಂದ ಆಚರಿಸಲ್ಪಟ್ಟ ಈ ವ್ರತವನ್ನು ಜನಕ, ಸಗರ, ದಿಲೀಪ, ಹರಿಶ್ಚಂದ್ರ, ಭರತಾದಿಗಳು ಆಚರಿಸಿ ಅದರ ಪ್ರಭಾವದಿಂದ ರಾಜ್ಯವನ್ನು ಸುಖದಿಂದ ಪರಿಪಾಲಿಸಿ ಖ್ಯಾತರಾದರು.

"ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ,
ಸರ್ವದೇವ ನಮಸ್ಕಾರಃ ಕೇಶವ ಪ್ರತಿಗಚ್ಛತಿ.
ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್"

ಆಕಾಶದಿಂದ ಬಿದ್ದ ನೀರು ಸಾಗರವನ್ನು ಸೇರುವಂತೆ ಎಲ್ಲಾ ದೇವತೆಗಳಿಗೂ ಮಾಡಿದ ನಮಸ್ಕಾರ ಕೇಶವನನ್ನು ಸೇರುತ್ತದೆ. ಎಲ್ಲರೂ ಸುಖಿಗಳಾಗಿರಲಿ, ಸರ್ವರೂ ನಿರೋಗಿಗಳಾಗಲಿ, ಎಲ್ಲರೂ ಒಳ್ಳೆಯದನ್ನು ನೋಡಲಿ, ಯಾರೊಬ್ಬರೂ ದುಃಖವನ್ನು ಕಾಣದಿರಲಿ.


ಓಂ ನಮೋ ಭಗವತೇ ವಾಸುದೇವಾಯ.


-------------- Hari Om --------------



Friday, September 5, 2025

Lalitha Saptami

 

ಲಲಿತ ಸಪ್ತಮಿ / Lalitha Saptami

 


                                      Sri Lalitha Devi

 

 

ಈ ವ್ರತದ ಪೂಜೆ ವಿಧಾನ, ವ್ರತ ಕಥೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.


ಹಿಂದಿ ಕ್ಯಾಲೆಂಡರ್ ಪ್ರಕಾರ, ಲಲಿತ ಸಪ್ತಮಿ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಆಚರಿಸಲಾಗುತ್ತದೆ. ಈ ವ್ರತವನ್ನು ಸಂತಾನ ಸಪ್ತಮಿ ವ್ರತ ಎಂದೂ ಕರೆಯುತ್ತಾರೆ.ಈ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದ ದಂಪತಿಗಳು ಕುಟುಂಬದ ಮೌಲ್ಯವನ್ನು ಹೆಚ್ಚಿಸುವ ಮಕ್ಕಳನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ, ಈ ಉಪವಾಸವನ್ನು ಮಕ್ಕಳ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿಯೂ ಆಚರಿಸಲಾಗುತ್ತದೆ. ಹಾಗಾದರೆ ಈ ವ್ರತದ ಪೂಜೆ ವಿಧಾನ, ವ್ರತ ಕಥೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.

ಲಲಿತ ಸಪ್ತಮಿ ಪೂಜೆ ವಿಧಾನ ಹೇಗಿರಬೇಕು


ಲಲಿತ ಸಪ್ತಮಿಯಂದು ವ್ರತವನ್ನು ಮಾಡುತ್ತಿದ್ದರೆ, ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮತ್ತು ಗಣೇಶನ ಧ್ಯಾನ ಮಾಡಿ. ಇದರ ನಂತರ, ಗಣೇಶ, ಲಲಿತಾ ದೇವತೆ, ಮಾತಾ ಪಾರ್ವತಿ, ಶಕ್ತಿ, ಶಿವ ಮತ್ತು ಶಾಲಿಗ್ರಾಮವನ್ನು ಸರಿಯಾದ ರೀತಿಯಲ್ಲಿ ಪೂಜಿಸಿ. ದೇವರಿಗೆ ತೆಂಗಿನಕಾಯಿ, ಅಕ್ಕಿ, ಅರಿಶಿನ, ಶ್ರೀಗಂಧದ ತಿಲಕ, ಗುಲಾಬಿ ಬಣ್ಣ, ಹೂವುಗಳು ಮತ್ತು ಹಾಲನ್ನು ಪ್ರಸಾದವಾಗಿ ನೀಡಿ. ಹೆಚ್ಚಿನ ಜನರು ಹೂವುಗಳನ್ನು ಮಾತ್ರ ನೀಡುತ್ತಾರೆ. ಪೂಜೆಯ ಸಮಯದಲ್ಲಿ ಮೌಲಿಯನ್ನು ಇಟ್ಟುಕೊಳ್ಳಿ. ಪೂಜೆ ಮುಗಿದ ನಂತರ, ನಿಮ್ಮ ಮಣಿಕಟ್ಟಿನ ಮೇಲೆ ಈ ದಾರವನ್ನು ಕಟ್ಟಿಕೊಳ್ಳಿ. ಈ ಉಪವಾಸವನ್ನು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಆಚರಿಸಲಾಗುತ್ತದೆ.

ಲಲಿತ ಸಪ್ತಮಿ ವ್ರತ ಕಥೆ ಹೀಗಿದೆ


ಪೌರಾಣಿಕ ಗ್ರಂಥಗಳಲ್ಲಿ, ಸಂತಾನ ಸಪ್ತಮಿ ಎಂದೂ ಕರೆಯಲ್ಪಡುವ ಲಲಿತ ಸಪ್ತಮಿ ಋಷಿ ಲೋಮೇಶನ ಬಾಯಿಂದ ಕೇಳಿಬಂದಿದೆ. ದಂತಕಥೆಯ ಪ್ರಕಾರ ಅಯೋಧ್ಯೆಯ ರಾಜ ನಹುಷನ ಪತ್ನಿ ಚಂದ್ರಮುಖಿಗೆ ಒಬ್ಬ ಸ್ನೇಹಿತನಿದ್ದ. ಅವಳ ಹೆಸರು ರೂಪಮತಿ. ಆಕೆ ನಗರದ ಬ್ರಾಹ್ಮಣನ ಪತ್ನಿ. ಸಹೋದರಿಯರಿಬ್ಬರ ನಡುವೆ ಸಾಕಷ್ಟು ಪ್ರೀತಿ ಇತ್ತು. ಒಮ್ಮೆ ಇಬ್ಬರೂ ಸರಯೂ ನದಿ ತೀರದಲ್ಲಿ ಸ್ನಾನ ಮಾಡಲು ಹೋದರು, ಅಲ್ಲಿ ಅನೇಕ ಮಹಿಳೆಯರು ಸಂತಾನದ ಉಪವಾಸವನ್ನು ಆಚರಿಸುತ್ತಿದ್ದರು. ಋಷಿ ಲೋಮೇಶನ ಬಾಯಿಂದ ಕಥೆಯನ್ನು ಕೇಳಿದ, ಈ ಇಬ್ಬರು ಸ್ನೇಹಿತರು ಸಹ ಸಂತಾನವನ್ನು ಪಡೆಯುವ ಸಲುವಾಗಿ ಈ ಉಪವಾಸವನ್ನು ಆಚರಿಸಲು ನಿರ್ಧರಿಸಿದರು, ಆದರೆ ಮನೆಗೆ ಬಂದ ನಂತರ ಇಬ್ಬರೂ ಮರೆತುಹೋದರು. ಸ್ವಲ್ಪ ಸಮಯದ ನಂತರ ಇಬ್ಬರೂ ಸತ್ತರು ಮತ್ತು ಇಬ್ಬರೂ ಪ್ರಾಣಿಗಳಾಗಿ ಜನಿಸಿದರು. ಅನೇಕ ಜನ್ಮಗಳ ನಂತರ, ಇಬ್ಬರೂ ಮತ್ತೊಮ್ಮೆ ಮನುಷ್ಯ ಜನ್ಮವನ್ನು ಪಡೆದ ನಂತರ ಅವರನ್ನು ಈಶ್ವರಿ ಮತ್ತು ಭೂಷಣ ಎಂದು ಕರೆಯಲಾಯಿತು.

ಈಶ್ವರಿ ರಾಜನ ಪತ್ನಿ ಮತ್ತು ಭೂಷಣ ಬ್ರಾಹ್ಮಣನ ಪತ್ನಿ


ಈಶ್ವರಿ ರಾಜನ ಹೆಂಡತಿ ಮತ್ತು ಭೂಷಣ ಬ್ರಾಹ್ಮಣನ ಪತ್ನಿಯಾದಳು. ಇಬ್ಬರಿಗೂ ಈ ಜನ್ಮದಲ್ಲಿಯೂ ತುಂಬಾ ಪ್ರೀತಿ ಸಿಕ್ಕಿತು. ಈ ಜನ್ಮದಲ್ಲಿ ಭೂಷಣ ಹಿಂದಿನ ಜನ್ಮದ ಕಥೆಯನ್ನು ನೆನಪಿಸಿಕೊಂಡಳು, ಆದ್ದರಿಂದ ಅವಳು ಸಪ್ತಮಿಯಂದು ಉಪವಾಸ ವ್ರತ ಮಾಡಿದಳು, ಈ ಕಾರಣದಿಂದಾಗಿ ಅವಳು ಎಂಟು ಗಂಡು ಮಕ್ಕಳನ್ನು ಪಡೆದಳು, ಆದರೆ ಈಶ್ವರಿ ಈ ಉಪವಾಸ ವ್ರತವನ್ನು ಆಚರಿಸಲಿಲ್ಲ, ಆದ್ದರಿಂದ ಆಕೆಗೆ ಯಾವುದೇ ಮಕ್ಕಳು ಜನಿಸಲಿಲ್ಲ. ಇದರಿಂದಾಗಿ ಅವಳು ಭೂಷಣಳ ಬಗ್ಗೆ ಅಸೂಯೆ ಪಟ್ಟಳು.

ಅವಳು ಭೂಷಣಳ ಪುತ್ರರನ್ನು ಅನೇಕ ವಿಧಗಳಲ್ಲಿ ಕೊಲ್ಲಲು ಪ್ರಯತ್ನಿಸಿದಳು. ಆದರೆ ಭೂಷಣಳ ಉಪವಾಸದ ಪರಿಣಾಮದಿಂದ ಅವಳ ಪುತ್ರರಿಗೆ ಯಾವುದೇ ಹಾನಿಯಾಗಲಿಲ್ಲ. ದಣಿದ ಈಶ್ವರಿ ಭೂಷಣಳಿಗೆ ತನ್ನ ಅಸೂಯೆ ಮತ್ತು ಆಕೆಯ ಕೃತ್ಯದ ಬಗ್ಗೆ ಹೇಳಿದಳು ಮತ್ತು ಕ್ಷಮೆಯನ್ನೂ ಕೇಳಿದಳು. ನಂತರ ಭೂಷಣ ಅವಳಿಗೆ ಹಿಂದಿನ ಜನ್ಮದ ಬಗ್ಗೆ ನೆನಪಿಸಿದಳು ಮತ್ತು ಸಂತಾನ ಸಪ್ತಮಿಯ ಉಪವಾಸವನ್ನು ಆಚರಿಸಲು ಸಲಹೆ ನೀಡಿದಳು. ಈಶ್ವರಿ ಪೂರ್ಣ ವಿಧಿಗಳೊಂದಿಗೆ ಉಪವಾಸ ಮಾಡಿ ಸುಂದರ ಮಗನನ್ನು ಪಡೆದಳು. ಈ ಕಥೆಯನ್ನು ಓದುವ ಮತ್ತು ಕೇಳುವ ದಂಪತಿಗಳು ಕುಟುಂಬದ ಮೌಲ್ಯವನ್ನು ಹೆಚ್ಚಿಸುವ ಮಗುವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.



ಲಲಿತ ಸಪ್ತಮಿ ವ್ರತದ ಮಹತ್ವ


ಲಲಿತ ಸಪ್ತಮಿ ವ್ರತವನ್ನು ಬೃಂದಾವನದ ಗೋಪಿಯಾಗಿರುವ ರಾಧಾ ದೇವಿಯ ಸ್ನೇಹಿತೆ ಲಲಿತಾಗೆ ಅರ್ಪಿಸಲಾಗಿದೆ. ಶ್ರೀ ಕೃಷ್ಣನು ಹೇಳಿದ ಮೇಲೆ ಈ ಉಪವಾಸವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಈ ಉಪವಾಸವನ್ನು ಆಚರಿಸುವ ಮೂಲಕ, ನವವಿವಾಹಿತ ದಂಪತಿಗಳು ಆರೋಗ್ಯವಂತ ಮತ್ತು ಸುಂದರ ಮಕ್ಕಳನ್ನು ಹೊಂದುತ್ತಾರೆ ಎನ್ನುವ ನಂಬಿಕೆಯಿದೆ. ಇದಲ್ಲದೇ, ಈ ಉಪವಾಸವನ್ನು ಮಗುವಿನ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಕೂಡ ಆಚರಿಸಲಾಗುತ್ತದೆ.



ಲಲಿತಾ ಸಹಸ್ರನಾಮದ ಉಲ್ಲೇಖ


ಬ್ರಹ್ಮಾಂಡ ಪುರಾಣದಲ್ಲಿ, ಲಲಿತೋಪಾಖ್ಯಾನ ಎಂಬ ಬಿರುದನ್ನು ಲಲಿತಾ ಸಹಸ್ರನಾಮ ಸ್ತೋತ್ರಕ್ಕೆ ನೀಡೆಲಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ಹಯಗ್ರೀವನು ಇದನ್ನು ಮೊದಲು ಅಗಸ್ತ್ಯ ಋಷಿಗೆ ಹೇಳಿಕೊಟ್ಟು ಕಲಿಸಿದನು. ಇದರ ಪ್ರಯೋಜನವು ಅಪಾರವಾಗಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಏಳನೆಯ ದಿನವೇ ಲಲಿತ ಸಪ್ತಮಿಯ ಶುಭ ದಿನ. ಲಲಿತಾ ದೇವಿ ಅಂದರೆ ತಾಯಿ ತ್ರಿಪುರ ಸುಂದರಿ. ಈಕೆಯ ಒಂದು ಸಾವಿರ ಹೆಸರುಗಳನ್ನು ಪಠಿಸುವುದರಿಂದ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಹೌದು, ಆದರೆ ನೀವು ಅದನ್ನು ಪಠಿಸಿದಾಗಲೆಲ್ಲಾ ಅದನ್ನು ಪೂರ್ಣ ನಂಬಿಕೆ ಮತ್ತು ಗೌರವದಿಂದ ಪಠಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ..


-------------- Hari Om -------------

Monday, August 25, 2025

Dhanvantari - Lord of Medicine

 

                                                        Dhanvantari - Lord of Medicine

 

ಶ್ರೀ ಧನ್ವಂತರಿ ಜಯಂತಿ

 

ಅಮೃತಕ್ಕಾಗಿ ಸಮುದ್ರಮಥನವನ್ನು ದೇವಾಸುರರು ಮಾಡುವಾಗ ಅವತರಿಸಿ ಬಂದ ಭಗವಂತನ ವಿಶಿಷ್ಟ ರೂಪ ಧನ್ವಂತರಿ ರೂಪ. ಜೀವಿಗಳಿಗೆ ದುಃಖಕ್ಕೆ ಮೂಲವಾದ ರೋಗರುಜುನಾದಿಗಳನ್ನು ಹೋಗಲಾಡಿಸುವುದರೊಂದಿಗೆ ನಮ್ಮ ಪಾಪಗಳನ್ನು ಪರಿಹರಿಸುವವನೂ ಇವನೇ ಆಗಿರುವ.

ಧನ್ವಂತರಿ ದೀರ್ಘತಮಸ ಆಯುರ್ವೇದ ಪ್ರವರ್ತಕಃ l
ಯಜ್ಞ ಭೃಗ್ವಾಸುದೇವಾಂಶಃ ಸ್ಮೃತಿ ಮಾತ್ರಾರ್ತಿನಾಶನಃ ll - ಶ್ರೀಮದ್ಭಾಗವತ.

ಆಯುರ್ವೇದದ ಪ್ರವರ್ತಕನು, ಭಕ್ತರ ದುಃಖನಾಶಕನು ಆದವನು ಭಗವಂತನಾದ ಧನ್ವಂತರಿ. ಶ್ರೀವಿಜಯದಾಸರು ರಚಿಸಿಕೊಟ್ಟ ನಿತ್ಯಪಠನೀಯ ಪಂಚರತ್ನ ಸುಳಾದಿಗಳಲ್ಲಿ ಧನ್ವಂತರಿ ಸುಳಾದಿ ಒಂದು.

ಧನ್ವಂತ್ರಿ ಶ್ರೀಧನ್ವಂತ್ರಿ ಎಂದು
ಸನ್ನುತಿಸೆ ಸತತ ಭಿನ್ನಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ
*ಚನ್ನಮೂರುತಿ ಸುಪ್ರಸನ್ನ ವಿಜಯವಿಟ್ಠ-
ಲನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ll - ಶ್ರೀವಿಜಯದಾಸರು

ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಟ್ಠಲ ಒಲಿವಾ ll - ಶ್ರೀವಿಜಯದಾಸರು

 

                                                     Lord Dhanvantari

 

ಶ್ರೀಮದಾಚಾರ್ಯರು ತಂತ್ರಸಾರ ಸಂಗ್ರಹದಲ್ಲಿ ಆರೋಗ್ಯ - ಆಯುಷ್ಯವರ್ದನಕ್ಕೆ ಹಾಗೂ ಅರಿಷ್ಟ ನಿವಾರಣೆಗೆಂದು ಧನ್ವಂತರಿ ಮಂತ್ರ ಜಪಗಳನ್ನು ತಿಳಿಸಿ ಅನುಗ್ರಹಿಸಿರುವರು.

ಧನ್ವಂತರಿ ಜಪದ ಸಿದ್ಧಿಯಿಂದಾಗಿ ಗೋಪಾಲದಾಸರು ಜಗನ್ನಾಥದಾಸರಿಗೆ ಆಯುಷ್ಯ ಪ್ರಧಾನ ಮಾಡಿ ಹರಸಿದ್ದು ತಿಳಿದಿದೆ. ಅವರು ಮಾಡಿದ ಪ್ರಾರ್ಥನೆ-

ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯ ಮಾಡೋ
ಸಣ್ಣವನು ಇವ ಕೇವಲ ll
ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ ll

ಉನ್ನಂತ ಗುಣಪೂರ್ಣ ಗೋಪಾಲವಿಟ್ಠಲ
ಇನ್ನಿದನೆ ಪಾಲಿಸುವುದು ಪ್ರಭುವೆ ll - ಶ್ರೀಗೋಪಾಲದಾಸರು

ಧನ್ವಂತ್ರಿ ಧನ್ವಂತ್ರಿಯೆನೆ ವ್ಯಾಧಿ ಪರಿಹಾರ
ವೆನುತಿಹ ವಚನಗಳು ll - ಶ್ರೀಪ್ರಾಣೇಶದಾಸರು

ಮಾನವ ಜನ್ಮ ದೊಡ್ಡದು l ಶ್ರೀ ಪುರಂದರ ದಾಸರು

------------- Hari Om ------------- 




 

 

Sunday, August 17, 2025

Krishna Janamastami

 

ಶ್ರೀಕೃಷ್ಣ ಜನ್ಮಾಷ್ಟಮಿ / Sri Krishna Janmastami

 


                                       Lord Krishna

 

ಪುರಾಣಗಳ ಪ್ರಕಾರ, ಕೃಷ್ಣನು ಮಥುರಾದ ಯಾದವ ಕುಲಕ್ಕೆ ಸೇರಿದ ರಾಜಕುಮಾರಿ ದೇವಕಿ ಮತ್ತು ಅವಳ ಪತಿ ವಸುದೇವನ ಎಂಟನೇ ಮಗ. ಆ ಸಮಯದಲ್ಲಿ ಮಥುರಾದ ರಾಜನಾಗಿದ್ದ ದೇವಕಿಯ ಸಹೋದರ ಕಂಸನು ದೇವಕಿಯ ಎಂಟನೇ ಮಗನಿಂದ ಕಂಸನನ್ನು ಕೊಲ್ಲುತ್ತಾನೆ ಎಂದು ಹೇಳಲಾದ ಭವಿಷ್ಯವಾಣಿಯನ್ನು ತಡೆಯಲು ದೇವಕಿಯಿಂದ ಜನ್ಮ ನೀಡಿದ ಎಲ್ಲಾ ಮಕ್ಕಳನ್ನು ಕೊಂದನು. ಕೃಷ್ಣ ಜನಿಸಿದಾಗ, ವಾಸುದೇವನು ಮಥುರಾದ ಜಿಲ್ಲೆಯ ಗೋಕುಲದಲ್ಲಿರುವ ತನ್ನ ಸ್ನೇಹಿತನ ಮನೆಗೆ ಕೃಷ್ಣನನ್ನು ಕರೆದುಕೊಂಡು ಹೋದನು. ನಂತರ, ಕೃಷ್ಣನನ್ನು ನಂದ ಮತ್ತು ಅವನ ಹೆಂಡತಿ ಯಶೋದೆ ಗೋಕುಲದಲ್ಲಿ ಬೆಳೆಸಿದರು.

ಶ್ರೀಕೃಷ್ಣ ಜಯಂತಿಯ ಇತರ ಹೆಸರುಗಳು:


ಕೃಷ್ಣಾಷ್ಟಮಿ, ಜನ್ಮಾಷ್ಟಮಿ, ಸತತ ಆಟಂ, ಅಸ್ತಮಿ ರೋಹಿಣಿ, ಗೋಕುಲಾಷ್ಟಮಿ, ಶ್ರೀ ಜಯಂತಿ, ನಂದೋತ್ಸವ ಇತ್ಯಾದಿಗಳಾಗಿವೆ.

 


                                                                                Pic-1

ಕೃಷ್ಣ ಜನ್ಮಾಷ್ಟಮಿ ಹಬ್ಬದ ಮಹತ್ವ:


ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶ್ರೀ ಕೃಷ್ಣನು ಮಥುರಾ ಪಟ್ಟಣದಲ್ಲಿ ಅಷ್ಟಮಿ ತಿಥಿ ಅಥವಾ ಭಾದ್ರಪದ ಮಾಸದ ಎಂಟನೇ ದಿನದಂದು ದೇವಕಿ ಮತ್ತು ವಸುದೇವನಿಗೆ ಜನಿಸಿದನು. ದೇವಕಿ ಮಥುರಾದ ರಾಕ್ಷಸ ರಾಜ ಕಂಸನ ಸಹೋದರಿ. ಒಂದು ಭವಿಷ್ಯವಾಣಿಯ ಪ್ರಕಾರ, ಕಂಸನ ಪಾಪಗಳಿಗೆ ಶಿಕ್ಷೆಯಾಗುತ್ತದೆ ಮತ್ತು ಅವನು ಎಂಟನೆಯ ಮಗ ದೇವಕಿಯಿಂದ ಕೊಲ್ಲಲ್ಪಡುತ್ತಾನೆ ಎಂಬುದಾಗಿತ್ತು. ಆದ್ದರಿಂದ, ಕಂಸನು ತನ್ನ ಸ್ವಂತ ಸಹೋದರಿ ಮತ್ತು ಅವಳ ಪತಿಯನ್ನು ಬಂಧಿಸಿದನು. ಭವಿಷ್ಯವಾಣಿಯು ನಿಜವಾಗುವ ಸಾಧ್ಯತೆಯನ್ನು ತೊಡೆದುಹಾಕಲು ಅವರು ಜನಿಸಿದ ತಕ್ಷಣ ದೇವಕಿಯ ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದರು.

ದೇವಕಿಗೆ ಎಂಟನೆಯ ಮಗ ಜನಿಸಿದಾಗ, ಇಡೀ ಅರಮನೆಯು ಮಾಂತ್ರಿಕವಾಗಿ ಪ್ರಚೋದಿತವಾದ ಗಾಢ ನಿದ್ರೆಯಲ್ಲಿ ಮುಳುಗಿತು, ಮತ್ತು ವಸುದೇವನು ಮಧ್ಯರಾತ್ರಿಯಲ್ಲಿ ವೃಂದಾವನದಲ್ಲಿರುವ ಯಶೋಧ ಮತ್ತು ನಂದನ ಮನೆಗೆ ಮಗುವನ್ನು ವರ್ಗಾಯಿಸುವ ಮೂಲಕ ಕಂಸನ ಕೋಪದಿಂದ ಮಗುವನ್ನು ಉಳಿಸುವಲ್ಲಿ ಯಶಸ್ವಿಯಾದನು. ಈ ಶಿಶುವು ಭಗವಾನ್ ವಿಷ್ಣುವಿನ ಅವತಾರವಾಗಿತ್ತು ಮತ್ತು ಅಂತಿಮವಾಗಿ ಕಂಸನನ್ನು ಕೊಂದ ಶ್ರೀ ಕೃಷ್ಣ ಎಂದು ಕರೆಯಲ್ಪಟ್ಟಿತು.



                                                                              Pic -2

 

ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ:


1) ಮಂಜಾನೆ ಎದ್ದು ಸ್ನಾನ ಮಾಡಿ ಮತ್ತು ಹೊಸ ಅಥವಾ ಶುದ್ಧವಾದ ಬಟ್ಟೆಗಳನ್ನು ಧರಿಸಿ.
2) ಶ್ರೀಕೃಷ್ಣನ ಪಲ್ಲಕ್ಕಿ ಅಥವಾ ತೊಟ್ಟಿಲನ್ನು ಅಲಂಕರಿಸುವ ಮೂಲಕ ಪೂಜೆಯ ಸಿದ್ಧತೆಗಳನ್ನು ಪ್ರಾರಂಭಿಸಿ ಮತ್ತು ದೇವಾಲಯವನ್ನು ಸ್ವಚ್ಛಗೊಳಿಸಲು ಗಂಗಾಜಲವನ್ನು ಬಳಸಿ.
3) ಪೂಜೆಯನ್ನು ಪ್ರಾರಂಭಿಸಲು ಧ್ಯಾನವನ್ನು ಮಾಡಿ. ಶ್ರೀಕೃಷ್ಣನ ವಿಗ್ರಹ ಅಥವಾ ಫೋಟೋವನ್ನು ಪೂಜಾ ಪೀಠದ ಮೇಲೆ ಸ್ಥಾಪಿಸಿ.
4) ಶ್ರೀಕೃಷ್ಣನ ಪಾದಗಳಿಗೆ ನೀರನ್ನು ಅರ್ಪಿಸುವುದನ್ನು ಪಾಡ್ಯ ಎಂದು ಕರೆಯಲಾಗುತ್ತದೆ. ಭಗವಂತನಿಗೆ ಅರ್ಘ್ಯವನ್ನು ಅರ್ಪಿಸಿ.
5) ಆಚಮನವನ್ನು ಮಾಡಿ, ಇದು ಭಗವಂತನಿಗೆ ನೀರನ್ನು ಅರ್ಪಿಸಿ ನಂತರ ಅದನ್ನು ಕುಡಿಯುವ ಕ್ರಿಯೆಯಾಗಿದೆ.
6) ಪಂಚಾಮೃತಾಭಿಷೇಕವನ್ನು ಮಾಡಿ.
7) ವಿಗ್ರಹವನ್ನು ಹೂವು, ಬಟ್ಟೆಗಳಿಂದ ಅಲಂಕರಿಸಿ.
8) ಪವಿತ್ರವಾದ ಜನೇವುವನ್ನು ಅರ್ಪಿಸಿ, ಚಂದನವನ್ನು ಹಚ್ಚಿ.
9) ಕೃಷ್ಣನಿಗೆ ಪ್ರಿಯವಾದ ಹೂವುಗಳು ಮತ್ತು ತುಳಸಿ ಎಲೆಗಳನ್ನು ನೀಡಿ. ಧೂಪದ್ರವ್ಯ ಮತ್ತು ಎಣ್ಣೆ ದೀಪವನ್ನು ಬೆಳಗಿಸಿ.
10) ಶ್ರೀಕೃಷ್ಣನಿಗೆ ಭೋಗವನ್ನು ಅರ್ಪಿಸಿ.
11) ಆರತಿಯನ್ನು ಮಾಡಿ ಪ್ರದಕ್ಷಿಣೆ ಹಾಕಿ.

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನ ಬಾಲ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನ ಜನನ ಕಥೆಯನ್ನು ಕೇಳುವುದು, ಆತನಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.


--------------- Hari Om ----------------



 

 

 

Tuesday, August 12, 2025

Haridasaru Kanda Raghavendra swamy

 

                                                                     Guru Raghavendra

 

ಹರಿದಾಸರು ಕಂಡ ರಾಘವೇಂದ್ರ


ಶ್ರಾವಣ ಬಹುಳ ಬಿದಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ l
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ll

ದೇವರೆಂದರೆ ವೆಂಕಪ್ಪ ಗುರುಗಳೆಂದರೆ ರಾಘಪ್ಪ' ಇದು ಸಾಮಾನ್ಯವಾಗಿ ಕೇಳುವ ನಾಣ್ಣುಡಿ. ಶ್ರೀರಾಯರ ಬಗ್ಗೆ ಅಪ್ಪಣ್ಣಾಚಾರ್ಯರ ನುಡಿಮುತ್ತುಗಳು ಹೀಗಿದೆ -

ಶ್ರೀಮಧ್ವಮತದುಗ್ದಾಬ್ಧಿ ಚಂದ್ರೋsವತು ಸದಾನಘಹ l
ಶ್ರೀಮಧ್ವಮತ ವರ್ಧನಃ l
ಅಪೇಕ್ಷಿತಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೇ l ...

ಶ್ರೀಮಧ್ವಮತದ ಚಂದ್ರಮರಾಗಿ, ಭಕ್ತರ ಅಭೀಷ್ಟಗಳನ್ನು ಸುರಿಸುವವರಾಗಿ ಮಂತ್ರಾಲಯದಿ ನೆಲೆಸಿರುವ ಶ್ರೀರಾಯರನ್ನು ಯಾರು ತಾನೆ ಸೇವಿಸರು-ಭಜಿಸರು. 'ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ' ಆಗಿರುವರು. ಹರಿದಾಸಸಾಹಿತ್ಯದ ಎರಡನೆಯ ಘಟ್ಟದ ಸ್ಫೂರ್ತಿದಾಯಕರು ಶ್ರೀರಾಘವೇಂದ್ರರು. ನಂತರ ಇವರನ್ನು ಕೀರ್ತಿಸದ, ಸ್ತುತಿಸದ ಹರಿದಾಸರಿಲ್ಲ. ಪಂಡಿತ ಪಾಮರರಿಗೂ ಜ್ಞಾನಾದಿ ಅಭೀಷ್ಟಪರಾಗಿ ಮಾನ್ಯರಾಗಿರುವರು. ಗುರುಗಳ ಮಹಿಮೆಯನ್ನು ಹರಿದಾಸರು ಬಹುವಾಗಿ ತಮ್ಮ ಪದಪದ್ಯಗಳಿಂದ ಹಾಡಿದ್ದನ್ನು ಕಾಣುತ್ತೇವೆ. ಶ್ರೀವಿಜಯದಾಸರು -

ನೋಡಿದೆ ಗುರುಗಳ ನೋಡಿದೆ ll ll

ನೋಡಿದೆನು ಗುರುರಾಘವೇಂದ್ರರ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಮೆರೆವ ಮಹಿಮೆಯ ll ಅ ಪ ll

ಟಿಪ್ಪಣ್ಯಾಚಾರ್ಯ ಚಕ್ರವರ್ತಿಯೆಂದೇ ಪ್ರಸಿದ್ಧರಾದ ಶ್ರೀರಾಘವೇಂದ್ರಸ್ವಾಮಿಗಳ ಗ್ರಂಥರಚನಾ ವೈಭವವು ಗಾತ್ರ ಹಾಗೂ ಸತ್ವದಲ್ಲಿ ಶ್ರೇಷ್ಠಮಟ್ಟದ್ದಾಗಿ ವಿಜೃಂಭಿಸಿವೆ. ರಾಯರ ಐಕತ್ತಕ್ಕೂ ಹೆಚ್ಚಿನ ಗ್ರಂಥಗಳು ಎಲ್ಲ ಪ್ರಕಾರಗಳಿಂದಲೂ ವ್ಯಾಪಿಸಿವೆ. ಟೀಕಾ, ಟಿಪ್ಪಣಿ, ಸ್ವತಂತ್ರಗ್ರಂಥಗಳು, ಸ್ತೋತ್ರ ಹೀಗೆ ಆವರಿಸಿ ಪೂರ್ಣತೆಯನ್ನು ಪಡೆದಿವೆ. ಪರಿಮಳಾಚಾರ್ಯ, ಭಾವದೀಪಕಾರರು ಮುಂತಾದವು ಸಾಕ್ಷಿಯಾಗಿವೆ. ಪ್ರಾಕೃತ ಭಾಷೆಯಲ್ಲೂ ಕೃತಿಗಳನ್ನು ರಚಿಸಿ ಹರಿದಾಸಸಾಹಿತ್ಯಕ್ಕೂ ಮೆರುಗನ್ನು ನೀಡಿದ ಮಹಿಮಾನ್ವಿತರು ಶ್ರೀರಾಘವೇಂದ್ರಯತಿವರ್ಯರು. ಅದಕ್ಕೆಂದೆ ಶ್ರೀಜಗನ್ನಾಥದಾಸರು -

ಹೊಂದಿ ಬದುಕಿರೋ ರಾಘವೇಂದ್ರ ರಾಯರ ll
ಕುಂದದೆಮ್ಮನು ಕರುಣದಿಂದ ಪೊರೆವರ ll ಎಂದು ಕೊಂಡಾಡಿದರು.

 

                                                                               Pic - 1

ಶ್ರೀವಿದ್ಯಾಪ್ರಸನ್ನ ತೀರ್ಥರು :

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll

ಶ್ರೀಗೋಪಾಲದಾಸರು :

ರಾಯೆನ್ನೆ ರಾಶಿ ದೋಷಗಳ ದಹಿಸುವರು
ಘಾಯನ್ನೆ ಘನ ಜ್ಞಾನ ಭಕುತಿಯನಿತ್ತು l
ವೇ ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ ಯೆನ್ನೆ ದ್ರವಿಣೋದ ಶ್ರುತಿಗೇವೆ ಘನಕಾಂಬ ll

ಶ್ರೀಪ್ರಾಣೇಶದಾಸರು :

ಶ್ರೀರಾಮಚಂದ್ರಾಂಘ್ರಿ ನರಸಿಂಹ ಭೃಂಗನಿಗೆ
ಧೀರ ಸುಧೀಂದ್ರಕರ ಸಂಭೂತನಿಗೆ
ವಾರಾಹಿತೀರ ಮಂತ್ರಾಲಯ ನಿಕೇತನಗೆ
ಶ್ರೀರಾಘವೇಂದ್ರರಾಯರ ಚರಣಕೆ
ಜಯಮಂಗಳಂ ನಿತ್ಯಶುಭಮಂಗಳಂ ll

ಇಂದು ಶ್ರೀರಾಘವೇಂದ್ರವಿಜಯ ಗ್ರಂಥ ಪಾರಾಯಣ, ಆರಾಧನಾ ಸಮಾರಂಭದಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ಶ್ರೀರಾಘವೇಂದ್ರ ಸ್ತೋತ್ರದ ಅಷ್ಟೋತ್ತರ, ರಾಘವೇಂದ್ರವಿಜಯ, ಗುರುಗುಣಸ್ತವನ, ಹರಿದಾಸರ ಪದ-ಪದ್ಯಗಳ ಪಾರಾಯಣ ಆಗಬೇಕು. ಹಿರಿಯ ವಿದ್ವಾಂಸರಿಂದ ರಾಯರ ಜೀವನ - ಸಾಧನೆಗಳ ಬಗ್ಗೆ ಅರಿಯಬೇಕು. ಕಲಿಯುಗದ ಕಲ್ಪತರುವೆಂದು ಪ್ರಸಿದ್ಧರಾದ ಶ್ರೀರಾಯರ ಅನುಗ್ರಹ ಪ್ರತಿಯೊಬ್ಬರಿಗೂ ಬೇಕಿದೆ. ಸಶರೀರ ಪ್ರವೇಶ ಮಾಡಿದ ಮೂಲವೃಂದಾವನ ದರ್ಶನಾದಿಗಳು ಅತ್ಯಾವಶ್ಯಕ.

ವಿಶ್ವೇಂದ್ರತೀರ್ಥರು -

ಮಧ್ವಮತವೆಂಬ ದುಗ್ಧಸಾಗರದೊಳು l
ಉದ್ಭವಿಸಿದ ಪೂರ್ಣ ಹಿಮಕರ ತೇಜ ll

ಶ್ರೀವಿದ್ಯಾಪ್ರಸನ್ನತೀರ್ಥರು -

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll ಎಂದರು.

ಮೂಕೋಪಿ ಯತ್ಪ್ರಸಾದೇನ ಮುಕುಂದಶಯನಾಯತೇ l
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ll


-------------- Hari Om ------------


ಗುರುರಾಯರ ನಿಗೂಢ ಪವಾಡಗಳು

Guru Raghavendra Swamy Miracles

 


                                   Raghavendra swamy

 

ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ರಾಯರ ನೆನೆಯೋಣ ಗುರುರಾಯರ ನೆನೆಯೋಣ.‌

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ದೈವಾಂಶ ಸಂಭೂತರು. ಅವರ ತಪಸ್ಸು ಶ್ರದ್ಧೆ- ಜ್ಞಾನ ಮತ್ತು ಕರುಣೆಯ ಜೀವಂತಿಕೆಯ ಸಾಕ್ಷಿಯಾಗಿದ್ದರು. ಅವರು ಮಾಡಿದ ಅದ್ಭುತವಾದ ಪವಾಡಗಳು, ಜನಗಳ ಬಾಯಿಂದ ಬಾಯಿಗೆ ಹರಡಿ ಅದೆಷ್ಟೊ ಭಕ್ತರ ಜೀವನವನ್ನು ಬೆಳಗಿಸಿದೆ. ಕೇಳರಿಯದ ಅಪರೂಪದ ಕೆಲವು ಪವಾಡಗಳು.

ಈ ಘಟನೆ ನೂರಾರು ವರ್ಷಗಳ ಹಿಂದಿನ ಘಟನೆ ಆಗಿರಬಹುದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳದ ಸಮೀಪದ ಒಂದು ಹಳ್ಳಿಯಲ್ಲಿ ವಿಷ್ಣು ಭಕ್ತರಾದ ಒಬ್ಬ ಬ್ರಾಹ್ಮಣನಿದ್ದನು. ಇವರಿಗೆ 12 ವರ್ಷದ ಒಬ್ಬ ಮಗನಿದ್ದ.


ಕಡು ಬಡತನ ಊಟವಿಲ್ಲದ ದಿನಗಳೇ ಹೆಚ್ಚು. ನಿಲ್ಲಲು ಸರಿಯಾದ ನೆಲೆ ಇರಲಿಲ್ಲ ಆದರೂ ಬ್ರಾಹ್ಮಣ ಮಾತ್ರ ದಿನಂಪ್ರತಿ ಗುರುಗಳ ಸ್ಮರಣೆ ಮಾಡುತ್ತಿದ್ದರು. ಇವನ ಮಗನಿಗೆ ಸಹಜವಾದ ಆಸೆಗಳಿದ್ದರೂ ಪೂರೈಸುವುದು ಅಸಾಧ್ಯವಾಗಿತ್ತು. ಬ್ರಾಹ್ಮಣ ಒಂದಷ್ಟು ಮಕ್ಕಳಿಗೆ ವೇದ ಪಾಠ ಹೇಳಿಕೊಡುತ್ತಿದ್ದರು. ಮಗನು ಕಲಿಯಲಿ ಎಂದು ಆಸೆ ಇದ್ದರೂ, ಮಗನಿಗೆ ಕಲಿಕೆಯಲ್ಲಿ ಎಂದು ಆಸಕ್ತಿ ಇರಲಿಲ್ಲ

 

                                                                               Pic-2

 

ಮಗ ವೇದ - ಉಪನಿಷತ್ತು-ಪುರಾಣ ಮಂತ್ರಗಳನ್ನು ಕಲಿಯಲಿ, ಬಡತನ ವಿದ್ದರೆ ಇರಲಿ ಮಗ ವೇದ ಕಲಿತು ಪಂಡಿತನಾಗಲಿ ಎಂಬ ಆಸೆ. ಎಷ್ಟೋ ಸಲ ಬ್ರಾಹ್ಮಣನು ಮಗನಿಗೆ ಬುದ್ಧಿವಾದ ಹೇಳಿದರೂ ಅವನು ಕೇಳಲಿಲ್ಲ ನಿರಾಶೆ ಗೊಂಡ ಬ್ರಾಹ್ಮಣ ಒಮ್ಮೆ ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡುತ್ತಾ, ಗುರುಗಳೇ ನನಗಿರುವ ಬಡತನದ ಬಗ್ಗೆ ಚಿಂತೆ ಇಲ್ಲ, ಆದರೆ ನನ್ನ ಮಗನ ಮನಸ್ಸು ದೈವ ಚಿಂತನೆಯಲ್ಲಿ ಅವನ ಮನಸ್ಸು ತೊಡಗುವಂತೆ ಮಾಡಿರಿ ಎಂದು ಪ್ರಾರ್ಥಿಸಿದ. ಹುಡುಗನ ಹಣೆಯಲ್ಲಿ ವಿದ್ಯೆ ಬರೆದಿತ್ತೋ ಅಥವಾ ಬ್ರಾಹ್ಮಣನ ಪ್ರಾರ್ಥನೆಯಯು ಗುರುಗಳಿಗೆ ಮುಟ್ಟಿತೋ ಗೊತ್ತಿಲ್ಲ. ಅದೇ ದಿನ ರಾತ್ರಿ ಬಾಲಕನ ಕನಸಿನಲ್ಲಿ ರಾಘವೇಂದ್ರ ಸ್ವಾಮಿಗಳು ದರ್ಶನ ಕೊಟ್ಟು, ಮಗು ನಿನಗೆ ಜಗತ್ತಿನಲ್ಲಿ ಎಲ್ಲಾ ಸಂಪತ್ತುಗಳು ಸಿಕ್ಕಿದರೂ, ಸಿಗದಿದ್ದರೂ, ಒಳಗಿನ ಶಾಂತಿ ಕೇವಲ ಮಂತ್ರ ಜಪದಿಂದ ಮಾತ್ರ ನಿನಗೆ ಸಿಗುವುದು ಇದು ನಿನ್ನ ಹಿಂದಿನ ಜನ್ಮದ ಜ್ಞಾನದ ಪುಣ್ಯ ಫಲ ನಿನಗಿದೆ ಇದು ನಿನಗೆ ನೆನಪಿರಲಿ” ಎಂದು ಹೇಳಿ ಆ ಹುಡುಗನಿಗೆ ಅರ್ಥವಾಗುವ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಗುರು ಮಂತ್ರವನ್ನು ಅವನ ಇಡಿಯಲ್ಲಿ ಉಪದೇಶ ಮಾಡಿದರು ಆ ಕ್ಷಣದಿಂದಲೇ ಬಾಲಕನ ಮನಸ್ಸು ಬದಲಾಯಿತು.

ಮರುದಿನದಿಂದಲೇ ಅವನ ಆಲೋಚನಾ ಶಕ್ತಿ ಧರ್ಮಮಾರ್ಗದತ್ತ ಹೊರಳಿತು.
ಬುದ್ಧಿ ಶಕ್ತಿಯಲ್ಲಿ ಜ್ಞಾನದಲ್ಲಿ ಪ್ರೌಢನಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ತಂದೆ ಹೇಳಿಕೊಡುತ್ತಿದ್ದ ವೇದಾಧ್ಯಯನವನ್ನು ಶ್ರದ್ಧೆಯಿಂದ ಕಲಿಯುತ್ತಾ ಬಂದನು. ಕಾಲಕ್ರಮೇಣ ವೇದ ವೇದಾಂಗ ಪಂಡಿತರ ಸಾಲಿಗೆ ಸೇರಿದನು.

ಗುರುಗಳು ಬಾಲಕನ ಸಾಮರ್ಥ್ಯವನ್ನು ಗುರುತಿಸಿ ಅನುಗ್ರಹ ಮಾಡಿ, ಅವನ ಕನಸಿನಲ್ಲಿ ಭಕ್ತಿಯ ಬೀಜವನ್ನು ಬಿತ್ತುವ ಮೂಲಕ ಹುಡುಗನ ಜೀವನದ ದಿಕ್ಕನ್ನೇ ಬದಲಿಸಿದ ಮಹಾಮಹಿಮರು ಗುರುರಾಯರು.

ಹೀಗೆ ಇನ್ನೊಂದು ಅಪರೂಪದ ಪವಾಡ ನಡೆದಿತ್ತು. ಬಿಜಾಪುರದ ಸಮೀಪದ ಒಂದು ಹಳ್ಳಿ ರಾಘವೇಂದ್ರರು ತಮ್ಮ ಸಂಚಾರದ ಸಮಯದಲ್ಲಿ ಈ ಹಳ್ಳಿಗೆ ಬಂದರು. ಅಲ್ಲಿ ಕೆಲವು ಹೆಣ್ಣು ಮಕ್ಕಳು ಕುಳಿತು ಆಟವಾಡುತ್ತಿದ್ದರು. ಗುರುಗಳು ಅವುಗಳ ಸಮೀಪ ಬಂದು ಕೇಳಿದರು. ನೀವೆಲ್ಲಾ ಗುರುಕುಲದಲ್ಲಿ ಕಲಿಯುತ್ತಿದ್ದೀ ರಾ ಮಕ್ಕಳೇ ಎಂದು ಕೇಳಿದರು. ಮಕ್ಕಳು ಹೇಳಿದವು ಸ್ವಾಮಿಗಳೇ ನಮ್ಮಂತವರಿಗೆ ಓದಲು ಅವಕಾಶವಿಲ್ಲ ನಾವು ಶಾಸ್ತ್ರ- ಧರ್ಮವನ್ನು ಅರಿಯಲಾರೆವು ಎಂದರು. ಆ ಮಕ್ಕಳ ಶುದ್ಧವಾದ, ನಿಷ್ಕಲ್ಮಶವಾದ ನುಡಿಗೆ ಗುರುಗಳ ಹೃದಯ ಕರಗಿತು. ಅವರು ತಕ್ಷಣ ಹೇಳಿದರು, ಮಕ್ಕಳೇ ಚಿಂತಿಸಬೇಡಿ ನಾನು ನಿಮಗೆ ಇಂದು ಒಂದು ಮಂತ್ರವನ್ನು ಉಪದೇಶಿಸುವೆ ನಿತ್ಯವೂ ಇದನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಜಪ ಮಾಡಿ ಮುಂದೆ ಎಲ್ಲಾ ತರಹದ ಜ್ಞಾನವು ನಿಮಗೆ ದೊರೆಯುತ್ತದೆ ಎಂದು ಮಂತ್ರವನ್ನು ಉಪದೇಶಿಸಿ ಹೊರಟರು


                                                                               Pic -3

 

 ಅಕ್ಷರಭ್ಯಾಸ ಎಂದರೆ ಏನು ಎಂದು ಅರಿಯದ ಮಕ್ಕಳು ಗುರುಗಳು ಉಪದೇ ಶಿಸಿದ ಮಂತ್ರವನ್ನು ಗುರುಗಳು ಹೇಳಿದಂತೆ ಶ್ರದ್ದೆ ಹಾಗೂ ಭಕ್ತಿಯಿಂದ ಜಪ ಮಾಡುತ್ತಾ ಬಂದವು. ಅವುಗಳ ಜ್ಞಾನ ಗುರುಗಳ ಅನುಗ್ರಹದಿಂದ ತನ್ನಿಂದ ತಾನೇ ಅಭಿವೃದ್ಧಿಯಾಗುತ್ತಾ ಬಂದಿತು. ಮುಂದೆ ಈ ಮಕ್ಕಳೆಲ್ಲ ವಿದ್ಯಾವಂತರು- ಮಹಾನ್ ಜ್ಞಾನಿಗಳು ಆದರು. ಗುಂಪಿನಲ್ಲಿದ್ದ ಒಬ್ಬ ಹುಡುಗಿ ಎಷ್ಟು ಜ್ಞಾನಿಯಾಗಿದ್ದಳು ಎಂದರೆ ಆಕೆಯ ಸುಮಾರು 80 ವರ್ಷಗಳ ನಂತರವೂ ‘ಶತಾವಧಾನಿ’ಯಾಗಿ ವೇದ ಶಾಸ್ತ್ರ ವಾಂಙ್ಮಯಳಾಗಿ ಜನಮನದಲ್ಲಿ ಅಚ್ಚಳಿಯದೆ ಉಳಿದಳು. ಇದೆಲ್ಲ ವೂ ಸಾಧ್ಯವಾಗಿದ್ದು ಗುರುಗಳ ಆಶೀರ್ವಾದದಿಂದ ನಾನು ಗುರುಗಳಿಂದ ಜ್ಞಾನ ಪಡೆದೆ ಎಂದು ಹೇಳುತ್ತಿದ್ದ ಹುಡುಗಿಯ ಹೆಸರು ದಾಖಲಾಗಿದೆ ಎನ್ನುತ್ತಾರೆ.

ಗುರುಗಳ ದೃಷ್ಟಿಯಲ್ಲಿ ವಿದ್ಯೆಯನ್ನು ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಎಲ್ಲರೂ ಕಲಿಯುವ ಸ್ವಾತಂತ್ರ್ಯವಿದೆ ಎಂದು ತೋರಿಸಿಕೊಟ್ಟರು. ಅವರು ಉಪದೇಶಿಸಿದ ಸರಳವಾದ ಒಂದು ಮಂತ್ರೋಪದೇಶದಿಂದಲೇ ಅಕ್ಷರ ಜ್ಞಾನವಿಲ್ಲದ ಮಕ್ಕಳು ಮೇಧಾವಿಗಳಾದರು.

ಇನ್ನೊಂದು ಅದ್ಭುತ ಪವಾಡ:- ಅದು ಮೈಸೂರಿನ ಸಮೀಪ ನಡೆದ ಘಟನೆ.
ಒಮ್ಮೆ ರಾಘವೇಂದ್ರ ಗುರುಗಳು ಸಂಚಾರ ಮಾಡುತ್ತಿದ್ದಾಗ ಒಂದು ಮನೆಯ ಮುಂದೆ ದಾರಿ ಮಧ್ಯದಲ್ಲಿ ಒಂದು ಶವ ಇಡಲಾಗಿತ್ತು. ಕಾರಣಾಂತರದಿಂದ ಅದನ್ನು ಮುಟ್ಟಲು ಜನರು ಹಿಂದೇಟು ಹಾಕಿದ್ದರು. ಹಾಗಂತ ಆ ಶವ ದಾರಿ ಮಧ್ಯದಲ್ಲಿದ್ದರೆ ಅದನ್ನು ದಾಟಿ ಮುಂದೆ ಹೋಗುವಂತಿಲ್ಲ. ಹೀಗಾಗಿ ಜನಗಳು ಏನು ಮಾಡಲು ತೋಚದೆ ಚಿಂತಿಸುತ್ತಿದ್ದರು. ಇದನ್ನೆಲ್ಲ ಗಮನಿಸಿದ ಗುರುಗಳು ತಮ್ಮ ಶಿಷ್ಯನನ್ನು ಕರೆದು ಹೇಳಿದರು. ನೋಡು ಅಲ್ಲಿ ಮಲಗಿದ ಆ ವ್ಯಕ್ತಿ ಸತ್ತಿಲ್ಲ ಅವನ ಕಿವಿಯಲ್ಲಿ ನಾನು ಹೇಳಿಕೊಡುವ ಮಂತ್ರ ಹೇಳಿ ಬಾಯಿ ಬಳಿ ‘ಉಫ್’ ಎಂದು ಊದು ಎಂದರು. ಗುರುಗಳು ಹೇಳಿದಂತೆ ಅವನ ಕಿವಿಯಲ್ಲಿ ‘ಪ್ರಾಣಾಯಾಮದ ಗುಪ್ತ ಮಂತ್ರ’ವನ್ನು ಹೇಳಿ, ಶವದ ಬಾಯಿ ಮೇಲೆ ಉಫ್ ಎಂದು ಜೋರಾಗಿ ಊದಿದ. ಇಷ್ಟೇ ತಕ್ಷಣ ಶವದ ಕೈಕಾಲು ಅಲುಗಾಡಿತು. ಸ್ವಲ್ಪ ಹೊತ್ತಿಗೆ ಶವವಾಗಿ ಮಲಗಿದ್ದವನು ದೊಡ್ಡದಾಗಿ ಕಣ್ಣು ಬಿಟ್ಟನು. ಝಝಝ ಕಣ್ಣು ಬಿಟ್ಟದ್ದನ್ನು ನೋಡಿ ಜನರು ಭಯಭೀತರಾಗಿ ಚದುರಿದರು

                                                                              Pic -4

 

ಗುರುಗಳು ಯಾರು ಗಾಬರಿಯಾಗಬೇಡಿ ಅವನು ಸತ್ತಿರಲಿಲ್ಲ ಎಂದು ಹೇಳಿ ಆಶೀರ್ವದಿಸಿ ಮುನ್ನಡೆದರು. ಅವನು ಬದುಕಿದ್ದರೂ ಸತ್ತನೆಂದು ಹೊರಗೆ ಮಲಗಿಸಿದ್ದರು. ಆದರೆ ಅವನಿಗೆ ಹೃದಯಘಾತವಾಗಿತ್ತು. ಇದರಿಂದ ಏಳು ಗುರುಗಳು ತಮ್ಮ ಯೋಗ ಶಕ್ತಿ ಮತ್ತು ಜ್ಞಾನದಿಂದ ಶವವಾಗಿ ಮಲಗಿದ್ದವನು ದೇಹದಲ್ಲಿ ಚೈತನ್ಯ ಮೂಡಿಸಿ ಬದುಕಿದರು. ನಂತರದ ದಿನಗಳಲ್ಲಿ ಅವನು ಸ್ವಾಮಿಗಳ ಶಿಷ್ಯರಲ್ಲಿ ಪ್ರೀತಿ ಪಾತ್ರ ಶಿಷ್ಯನಾದನು.

ಶ್ರೀ ರಾಘವೇಂದ್ರ ಗುರುಗಳು ವಿದ್ಯಾದಾತರು ಜೀವದಾತರು ಆಗಿದ್ದರು. ಪ್ರಾಣ ಹೋಗುವ ಕಾಲದಲ್ಲಿ ಅವರ ಪವಾಡಗಳು ನಿತ್ಯ ಭಕ್ತರಿಗೆ ಮಾರ್ಗದರ್ಶನವಾಗಿದೆ.


ಯಾರು ಶುದ್ಧ ಭಕ್ತಿಯಿಂದ ಗುರುಗಳನ್ನು ಆರಾಧಿಸಿ ಪ್ರಾರ್ಥಿಸುತ್ತಾರೋ ಅವರ
ಪ್ರಾರ್ಥನೆಗೆ ಗುರುಗಳು ತಕ್ಷಣ ಸ್ಪಂದಿಸುತ್ತಾರೆ. ಇದೇ ಕಾರಣಕ್ಕೆ ರಾಘವೇಂದ್ರರನ್ನು ಭಕ್ತರ ಮೊರೆ ಆಲಿಸುವ ಗುರುವರ್ಯರು ಹಾಗೂ ಭಕ್ತರ ಭಕ್ತಿಗೆ ಬಹಳ ಬೇಗ ಒಲಿದು ಅವರ ಸಂಕಷ್ಟವನ್ನು ಪರಿಹರಿಸುವ ಕರುಣಾ ಸಾಗರರೇ ಎಂದು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಕೇವಲ ಮಠದ ತೇಜೋಮಯ ಗುರುಗಳು ಹಾಗೆ ಅವರು ಅಪಾರ ಭಕ್ತಿಯ ಪ್ರತಿರೂಪ. ಅವರ ಪಾದ ಕಮಲಗಳಲ್ಲಿ ತಲೆಬಾಗಿ ಪ್ರಾರ್ಥಿಸಿದ ಭಕ್ತರಿಗೆ ಅವರು ಧೈರ್ಯ, ಶಾಂತಿ ಮತ್ತು ಸಂಕಟ ಪರಿಹಾರ ಎಂಬ ಮೂರು ಅಮೂಲ್ಯವಾದ ವರಗಳನ್ನು ನೀಡುತ್ತಾರೆ. ನಮ್ಮ ನಂಬಿಕೆ ಪ್ರಬಲವಾದಾ ಗ ಅಜ್ಞಾತ ಶಕ್ತಿ ನಮ್ಮ ಬದುಕಿನಲ್ಲಿ ದಿವ್ಯತೆಯನ್ನು ತುಂಬುತ್ತದೆ ಗುರುರಾಯರ ಕೃಪಾ ದೃಷ್ಟಿ ದೊರೆತರೆ ನಮ್ಮ ಬದುಕು ಬಂಗಾರವಾಗುತ್ತದೆ.

ಓಂ ವೆಂಕಟನಾಥಾಯ ವಿದ್ಮಹೇ
ಸಚ್ಚಿದಾನಂದಾಯ ಧೀಮಹಿ
ತನ್ನು ರಾಘವೇಂದ್ರ: ಪ್ರಚೋದಯಾತ್!!

ಓಂ ವೆಂಕಟನಾಥ ವಿದ್ಮಹೇ
ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ: ಪ್ರಚೋದಯಾತ್!!

ಓಂ ಪ್ರಹಲ್ಲಾದಾಯ ವಿದ್ಮಹೇ
ವ್ಯಾಸ ರಾಜಾಯ ಧಮಹಿ
ತನ್ನೋ ರಾಘವೇಂದ್ರ: ಪ್ರಚೋದಯಾತ್ !!

--------------------- Hari Om --------------------